ಲೋಕೇಶ್ ಕನಕರಾಜ್, ನೆಲ್ಸನ್ ತರ ನಾನಲ್ಲ, ರಜನಿಕಾಂತ್ಗೆ ಕಂಡೀಷನ್ ಹಾಕಿದ್ದ ನಿರ್ದೇಶಕ
'ಜೈಲರ್' ಸಕ್ಸಸ್ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ವೆಟ್ಟೆಯಾನ್' ಸಿನಿಮಾ ದಸರಾ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಸದ್ಯ ಚಿತ್ರದ ಆಡಿಯೋ ಲಾಂಚ್ ಆಗಿದೆ. ಹೊಸ ಟೀಸರ್ ಸಹ ಬಿಡುಗಡೆ ಆಗಿ ಸದ್ದು ಮಾಡ್ತಿದೆ.
ಸೂಪರ್ ಸ್ಟಾರ್ ರಜನಿಕಾಂತ್ಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ತಲೈವಾ ಕ್ರೇಜೇ ಬೇರೆ, ಅವರ ಇಮೇಜೇ ಬೇರೆ. ಆ ಇಮೇಜ್ಗೆ ತಕ್ಕಂತೆ ಸಿನಿಮಾ ಮಾಡಲು ಕೆಲವರು ಹಿಂದೇಟು ಹಾಕುತ್ತಾರೆ. ಹೊಸ ಬಗೆಯ ಸಿನಿಮಾ ಮಾಡಿದರೆ ಅಭಿಮಾನಿಗಳು ಸ್ವೀಕರಿಸುತ್ತಾರೋ ಇಲ್ಲವೋ ಎನ್ನುವ ಆತಂಕವೂ ಇರುತ್ತದೆ. ಹಾಗಾಗಿ ನಿರ್ದೇಶಕರಿಗೆ ರಜನಿಕಾಂತ್ ಸಿನಿಮಾ ಕಟ್ಟಿಕೊಡುವುದು ಕತ್ತಿ ಮೇಲಿನ ನಡಿಗೆ ಇದ್ದಂತೆ.

'ಜೈಲರ್' ಬಳಿಕ ರಜನಿಕಾಂತ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಲೋಕೇಶ್ ಕನಕರಾಜ್ ಜೊತೆ ಒಂದು ಸಿನಿಮಾ ಮಾಡುವ ಬಗ್ಗೆ ಗುಸುಗುಸು ಕೇಳಿಬಂದಿತ್ತು. ನೆಲ್ಸನ್ ನಿರ್ದೇಶನದಲ್ಲೇ 'ಜೈಲರ್' ಸೀಕ್ವೆಲ್ ಬಗ್ಗೆ ಚರ್ಚೆ ನಡೀತು. ಆದರೆ ಇವೆರಡನ್ನು ಬಿಟ್ಟು ಜ್ಞಾನವೇಲ್ ನಿರ್ದೇಶನದ ಚಿತ್ರಕ್ಕೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
'ಜೈಭೀಮ್' ರೀತಿಯ ಲೀಗಲ್ ಡ್ರಾಮಾ ಸಿನಿಮ ಆ ಕಟ್ಟಿಕೊಟ್ಟು ಜ್ಞಾನವೇಲ್ ಗೆದ್ದಿದ್ದರು. ಕಂಟೆಂಟ್ ಇರುವ ಸಿನಿಮಾಗಳನ್ನು ಅವರು ನಿರ್ದೇಶಿಸುತ್ತಾರೆ. ಹಾಗಾಗಿ ರಜನಿಕಾಂತ್ ಜೊತೆ ಎಂತಹ ಸಿನಿಮಾ ಮಾಡಬಹುದು ಎನ್ನುವ ಚರ್ಚೆ ನಡೆದಿತ್ತು. ಸದ್ಯ ಇದೀಗ 'ವೆಟ್ಟೆಯಾನ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಕಥೆಯನ್ನು ಆಯ್ಕೆ ಮಾಡಿದ ಬಗ್ಗೆ ರಜನಿಕಾಂತ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದಾರೆ.
ರಜನಿಕಾಂತ್ ಮಾತನಾಡಿ "ಜೈಲರ್ ಬಳಿಕ ನಾನು ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಆದರೆ ಯಾವುದು ಇಷ್ಟವಾಗಲಿಲ್ಲ. ಆ ಸಮಯದಲ್ಲಿ ಜ್ಞಾನವೇಲ್ ಬಳಿ ಒಂದೊಳ್ಳೆ ಸ್ಟೋರಿಲೈನ್ ಇದೆ ಎಂದು ಮಗಳು ಸೌಂದರ್ಯ ಹೇಳಿದಳು. ನಾನು ಅದಾಗಲೇ 'ಜೈಭೀಮ್' ಸಿನಿಮಾ ನೋಡಿದ್ದೆ. ಮಗಳು ಈ ಮಾತು ಹೇಳಿದ ಮೇಲೆ ಮತ್ತೊಮ್ಮೆ 'ಜೈಭೀಮ್' ಸಿನಿಮಾ ವೀಕ್ಷಿಸಿದೆ"

"ಜ್ಞಾನವೇಲ್ಗೆ ಫೋನ್ ಮಾಡಿ ನೀವು ಸಂದೇಶಾತ್ಮಕ ಸಿನಿಮಾಗಳನ್ನು ಮಾಡ್ತೀರಾ, ನನ್ನ ಜೊತೆ ಕಮರ್ಷಿಯಲ್ ಸಿನಿಮಾ ಮಾಡಬೇಕು. ನಿಮ್ಮ ಸಿನಿಮಾಗಳ ಸ್ಟೈಲ್ ಬೇರೆ, ನನ್ನ ಸಿನಿಮಾ ಸ್ಟೈಲೇ ಬೇರೆ ಎಂದೆ. ಬಳಿಕ ಅವರು ಹೇಳಿದ ಕಥೆ ಇಷ್ಟವಾಯಿತು. ಅದನ್ನು ಡೆವಲಪ್ ಮಾಡಲು ಹೇಳಿದೆ. ಒಂದು ವಾರ ಸಮಯ ಕೇಳಿದರು. ಎರಡು ದಿನಗಳ ಬಳಿಕ ಫೋನ್ ಮಾಡಿದರು" ಎಂದು ತಲೈವಾ ನೆನಪಿಸಿಕೊಂಡಿದ್ದಾರೆ.
"ನನಗೆ ಫೋನ್ ಮಾಡಿದ ಜ್ಞಾನವೇಲ್, ನಾನು ನೆಲ್ಸನ್, ಲೋಕೇಶ್ ಕನಕರಾಜ್ ರೀತಿ ಕಮರ್ಷಿಯಲ್ ಸಿನಿಮಾ ಮಾಡಲ್ಲ. ನನ್ನ ಸ್ಟೈಲ್ನಲ್ಲೇ ಮಾಡ್ತೀನಿ ಎಂದರು. ನನಗೂ ಅದೇ ಬೇಕು ಎಂದೆ. ಬಳಿಕ ಕಥೆ ಮಾಡಿ ಹೇಳಿದರು. ಸತ್ಯದೇವ್ ರೀತಿಯ ತೂಕದ ಪಾತ್ರವನ್ನು ಶಿವಾಜಿ ಸರ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನಗೆ ಅನಿಸಿತ್ತು. ಬಳಿಕ ಆ ಪಾತ್ರಕ್ಕೆ ಅಮಿತಾಬ್ ಬೇಕು ಅಂದರು. ಅವರು 2 ದಿನದಲ್ಲಿ ನಟಿಸಲು ಒಪ್ಪಿದ್ದು ಖುಷಿಯಾಗಿತು.ಮುಂದೆ ರಾಣಾ, ಫಹಾದ್ ಫಾಸಿಲ್ ಎಲ್ಲರೂ ಜೊತೆಯಾದರು" ಎಂದು ರಜನಿಕಾಂತ್ ವಿವರಿಸಿದ್ದಾರೆ.
'ವೆಟ್ಟೆಯಾನ್' ಚಿತ್ರದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದಾರೆ. ಪೊಲೀಸರು ಹೀರೊಯಿಸಂ ತೋರಿಸಲು ಎನ್ಕೌಂಟರ್ ಅನ್ನು ಬಳಸಿಕೊಳ್ಳುತ್ತಿದ್ದಾರೆ, ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ವಾದಿಸುವ ಅಧಿಕಾರಿ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ರಾಣಾ ದಗ್ಗುಬಾಟಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಫಹಾದ್ ಫಾಸಿಲ್, ಅಭಿರಾಮಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











