ಚಿತ್ರೀಕರಣ ಮುಗಿಸಿ ಬಂದ ರಜನಿಗೆ ಆರತಿ ಬೆಳಗಿ ಸ್ವಾಗತಿಸಿದ ಪತ್ನಿ
ಹೈದರಾಬಾದ್ನಲ್ಲಿ ನಡೆಯುತ್ತಿದ್ದ ಅಣ್ಣಾತ್ತೆ ಚಿತ್ರೀಕರಣ ಮುಗಿಸಿದ ನಟ ರಜನಿಕಾಂತ್ ಚೆನ್ನೈಗೆ ಮರಳಿದ್ದಾರೆ. ಮೇ 12 ರಂದು ಸೂಪರ್ ಸ್ಟಾರ್ ಚೆನ್ನೈನ ನಿವಾಸಕ್ಕೆ ವಾಪಸ್ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಜನಿಕಾಂತ್ ಅವರು ಮನೆಗೆ ಹಿಂತಿರುಗಿದ ವೇಳೆ ಪತ್ನಿ ಲತಾ ಅವರು ಆರತಿ ಬೆಳಗುವುದರ ಮೂಲಕ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಮನೆ ಮುಂದೆ ಜಮಾಯಿಸಿದ್ದ ಅಭಿಮಾನಿಗಳ ಕೈ ಬೀಸಿದ ತಲೈವಾ ಎಲ್ಲರಿಗೂ ನಮಸ್ಕಾರ ಮಾಡಿ ಒಳಗೆ ನಡೆದರು.
ಅದಕ್ಕೂ ಮುಂಚೆ ಹೈದರಾಬಾದ್ನಲ್ಲಿ ತೆಲುಗು ನಟ ಮೋಹನ್ ಬಾಬು ಅವರ ನಿವಾಸಕ್ಕೆ ರಜನಿಕಾಂತ್ ಭೇಟಿ ನೀಡಿದ್ದರು. ಈ ವೇಳೆ ಮೋಹನ್ ಬಾಬು ಮತ್ತು ಮಗಳು ಲಕ್ಷ್ಮಿ ಮಂಚು ತಲೈವಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಇನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ಅಣ್ಣಾತ್ತೆ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿತ್ತು. ಕೂಡಲೇ ಶೂಟಿಂಗ್ ರದ್ದುಗೊಳಿಸಲಾಗಿತ್ತು. ಹೈದರಾಬಾದ್ಗೆ ಚೆನ್ನೈಗೆ ತೆರಳಿದ್ದ ರಜನಿಕಾಂತ್ ಕೆಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ ನಂತರ ರಾಜಕೀಯದಿಂದ ಹಿಂದೆ ಸರಿಯುವುದಾಗಿ ನಿರ್ಧಾರ ಘೋಷಿಸಿದರು. ಇದು ಸಹಜವಾಗಿ ರಜನಿ ಅಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಿತ್ತು. ಇದೀಗ, ಮತ್ತೆ ಅಣ್ಣಾತ್ತೆ ಶೂಟಿಂಗ್ ಆರಂಭಿಸಿದ್ದರು. ಅಂದುಕೊಂಡಂತೆ ಚಿತ್ರೀಕರಣ ಮುಗಿಸಿ ಚೆನ್ನೈಗೆ ರಜನಿ ಮರಳಿದ್ದಾರೆ.
ಮೂಲಗಳ ಪ್ರಕಾರ, ರಜನಿಕಾಂತ್ ಸದ್ಯದಲ್ಲೇ ಅಮೆರಿಕ ತೆರಳಲಿದ್ದಾರೆ. ಆರೋಗ್ಯ ದೃಷ್ಟಿಯಿಂದ ಸಾಮಾನ್ಯ ಚಿಕಿತ್ಸೆಗಾಗಿ ಯುಎಸ್ಗೆ ಹೋಗಲಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಖಚಿತವಾಗಿಲ್ಲ.
ಇನ್ನು ಸಿರುತೈ ಶಿವ ನಿರ್ದೇಶನದ ಅಣ್ಣಾತ್ತೆ ಸಿನಿಮಾದಲ್ಲಿ ನಯನತಾರ, ಕೀರ್ತಿ ಸುರೇಶ್, ಖುಷ್ಬೂ, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ದೀಪಾವಳಿ ಪ್ರಯುಕ್ತ ನವೆಂಬರ್ 4 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.


Click it and Unblock the Notifications











