'PS1' ಚಿತ್ರದಲ್ಲಿ ರಜಿನಿಗೆ ಜಯಲಲಿತಾ ಸೂಚಿಸಿದ್ದ ಪಾತ್ರ ಯಾವುದು? ತಲೈವಾ ಕಲ್ಪನೆಯಲ್ಲಿ ಯಾರ್ಯಾರು ಇದ್ದರು?
ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಟ್ರೈಲರ್ ಧೂಳೆಬ್ಬಿಸಿದೆ. ಚೋಳ ಸಾಮ್ರಾಜ್ಯದ ರೋಚಕ ಕಥೆಯನ್ನು ಈ ಚಿತ್ರದಲ್ಲಿ ಎಳೆ ಎಳೆಯಾಗಿ ಹೇಳಲಾಗ್ತಿದ್ದು, ತಮಿಳಿನ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಹಲವು ವರ್ಷಗಳಿಂದ ಈ ಕಥೆಯನ್ನು ಸಿನಿಮಾ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ದಶಕಗಳ ಹಿಂದೆಯೇ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಈ ಚಿತ್ರದ ವಲ್ಲವರಾಯನ್ ವಂದಿಯದೇವನ್ ಪಾತ್ರಕ್ಕೆ ರಜನಿಕಾಂತ್ ಹೆಸರು ಸೂಚಿಸಿದ್ದರು.
'ಪೊನ್ನಿಯಿನ್ ಸೆಲ್ವನ್' ಚಿತ್ರದ ಟ್ರೈಲರ್ ಲಾಂಚ್ ಈವೆಂಟ್ಗೆ ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಕಮಲ್ ಹಾಸನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಹಳ ಹೊತ್ತು ವೇದಿಕೆಯಲ್ಲಿ ಮಾತನಾಡಿದ ತಲೈವಾ ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಸ್ವತಃ ಜಯಲಲಿತಾ ಈ ಚಿತ್ರದಲ್ಲಿ ನಾನು ವಂದಿಯದೇವನ್ ಪಾತ್ರ ಮಾಡಬೇಕು ಎಂದು ಆಸೆಪಟ್ಟಿದ್ದಾಗಿ ಹೇಳಿದ್ದಾರೆ. ಇನ್ನು ಖ್ಯಾತ ನಟ ಶಿವಾಜಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಮಲ್, ರಜಿನಿಕಾಂತ್ ನಟಿಸಬೇಕು ಎಂದು ಸೂಚಿಸಿದ್ದರಂತೆ. ಈ ವಿಚಾರವನ್ನು ಸ್ವತಃ ಕಮಲ್ ಹಾಸನ್ ನೆನಪಿಸಿಕೊಂಡಿದ್ದಾರೆ.
ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಆಧರಿಸಿ ಈ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಒಂದಕ್ಕಿಂತ ಒಂದು ಪಾತ್ರ ಅದ್ಭುತವಾಗಿದೆ. ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ, ತ್ರಿಶಾ, ಶರತ್ಕುಮಾರ್, ಪ್ರಭು, ಪ್ರಕಾಶ್ ರೈ, ಕಿಶೋರ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

'ಪೊನ್ನಿಯಿನ್ ಸೆಲ್ವನ್' ಬಗ್ಗೆ ಪುಟ್ಟ ಕಥೆ ಹೇಳಿದ ರಜಿನಿ
"ನಾನು ಸಾಕಷ್ಟು ಪುಸ್ತಕಗಳನ್ನು ಓದುತ್ತೇನೆ. ಐತಿಹಾಸಿಕ, ಕಾಲ್ಪನಿಕ ಕಥೆಗಳನ್ನು ಓದುತ್ತೇನೆ. ಕೆಲ ವರ್ಷಗಳ ಹಿಂದೆ ಎಲ್ಲರೂ ಬಂದು ನೀವು 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಓದಿದ್ದೀರಾ ಎಂದು ಪದೇ ಪದೇ ಕೇಳುತ್ತಿದ್ದರು. ನನ್ನ ಅಭ್ಯಾಸ ಏನು ಅಂದರೆ ಪುಸ್ತಕ ಎಷ್ಟು ಪುಟ ಇದೆ ಎಂದು ನೋಡಿ ಓದುವುದು. 200, 300 ಪುಟಗಳ ಪುಸ್ತಕ ಆದರೆ ಓಕೆ. ಓದುತ್ತೇನೆ. ಅದಕ್ಕಿಂತ ಜಾಸ್ತಿ ಆದರೆ ಓದುವುದಿಲ್ಲ. 'ಪೊನ್ನಿಯಿನ್ ಸೆಲ್ವನ್' ಪುಸ್ತಕ ಎಷ್ಟು ಪುಟ ಇದೆ ಎಂದು ಕೇಳಿದೆ. 5 ಭಾಗ, 2000 ಪುಟ ಎಂದರು. ಅಯ್ಯೋ ಹೋಗ್ರಿ ನಾನು ಓದಲ್ಲ ಎಂದುಬಿಟ್ಟಿದ್ದೆ".

ಜಯಲಲಿತಾ ಮಾತು ಕೇಳಿ ಪುಸ್ತಕ ಓದಿದ್ದೆ
"ನಾನು 'ಪೊನ್ನಿಯಿನ್ ಸೆಲ್ವನ್' ಪುಸ್ತರ ಓದುವುದು ಬೇಡ ಎಂದು ನಿರ್ಧರಿಸಿದ್ದೆ. ಆಗ ಯಾರೋ ಒಬ್ಬರು, ನಿಮಗೆ ಗೊತ್ತಾ ಜಯಲಲಿತಾ ಅವರು ಮ್ಯಾಗಜೀನ್ವೊಂದರಲ್ಲಿ ನಿಮ್ಮ ಬಗ್ಗೆ ಈ ಪುಸ್ತಕದ ಬಗ್ಗೆ ಮಾತನಾಡಿದ್ದಾರೆ ಎಂದರು. ಆ ಮ್ಯಾಗಜೀನ್ನಲ್ಲಿ ಓದುಗರ ಪ್ರಶ್ನೆಗಳಿಗೆ ಜಯಲಲಿತಾ ಉತ್ತರಿಸಿದ್ದರು. ಓದುಗರೊಬ್ಬರು ನಿಮ್ಮ ಪ್ರಕಾರ 'ಪೊನ್ನಿಯಿನ್ ಸೆಲ್ವನ್' ಚಿತ್ರವನ್ನು ಈಗ ಮಾಡಿದರೆ, ಈಗ ಇರುವ ನಟರಲ್ಲಿ ವಂದಿಯದೇವನ್ ಪಾತ್ರಕ್ಕೆ ಯಾರು ಸೂಕ್ತ ಎಂದು ಕೇಳಿದ್ದರು. ಅದಕ್ಕೆ ಜಯಲಲಿತಾ ಅವರು ರಜಿನಿಕಾಂತ್ ಉತ್ತರಿಸಿದ್ದರು. ಆ ಮಾತು ಕೇಳಿ ನನಗೆ ಖುಷಿಯಾಗಿತ್ತು. ಅಯ್ಯೋ ಜಯಲಲಿತಾ ಅವರೇ ಈ ಬಗ್ಗೆ ಹೇಳಿದ್ದಾರಾ ಎಂದು ಅಚ್ಚರಿಗೊಂಡು ಆಗ ಪುಸ್ತಕ ತರಿಸಿ ಓದಿದ್ದೆ" ಎಂದು ರಜಿನಿಕಾಂತ್ ಹೇಳಿದ್ದಾರೆ.

ಶಿವಾಜಿ ಕಮಲ್ಗೆ ಸೂಚಿಸಿದ ಪಾತ್ರ ಯಾವುದು?
ವೇದಿಕೆಯಲ್ಲಿ ರಜಿನಿಕಾಂತ್ ಜೊತೆಗೆ ಮಾತಿಗೆ ನಿಂತಿದ್ದ ಕಮಲ್ ಹಾಸನ್, ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟರು. ಕಮಲ್ ಹಾಸನ್ ಈ ಕಾದಂಬರಿ ಆಧರಿಸಿ ಸಿನಿಮಾ ಮಾಡಲು ಹೊರಟಾಗ ತಮಿಳಿನ ಖ್ಯಾತ ನಟ ಶಿವಾಜಿ ಜೊತೆ ಚರ್ಚಿಸಿದ್ದರಂತೆ. ಶಿವಾಜಿ ಈ ಚಿತ್ರದ ವಂದಿಯದೇವನ್ ಪಾತ್ರಕ್ಕೆ ರಜಿನಿಕಾಂತ್ ಹೆಸರು ಸೂಚಿಸಿದ್ದರಂತೆ. ಇದನ್ನು ಕೇಳಿ ರಜಿನಿಕಾಂತ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ನನಗೆ ಆದಿತ್ಯಾ ಕರಿಕಾಲನ್ ಪಾತ್ರದ ಮೇಲೆ ಆಸೆ ಇತ್ತು. ಆದರೂ 'ನನಗೆ ಯಾವ ಪಾತ್ರ' ಎಂದು ಶಿವಾಜಿಯವರನ್ನು ಕೇಳಿದಾಗ ಕರಿಕಾಲನ್ ಪಾತ್ರವನ್ನು ಮಾಡುವಂತೆ ಸೂಚಿಸಿದ್ದರು ಎಂದು ಕಮಲ್ ಹೇಳಿದ್ದಾರೆ.

'PS' ಕಥೆಯಲ್ಲಿ ರಜಿನಿ, ಕಮಲ್, ವಿಜಯ್ಕಾಂತ್
ಕಮಲ್ ಹಾಸನ್ ಮಾತು ಕೇಳಿದ ರಜನಿಕಾಂತ್ ಮತ್ತೊಂದು ಸಂಗತಿಯನ್ನು ನೆನಪಿಸಿಕೊಂಡರು. "ನಾನು 'ಪೊನ್ನಿಯಿನ್ ಸೆಲ್ವನ್' ಕಥೆ ಓದುತ್ತಾ ಓದುತ್ತಾ ಒಂದೊಂದು ಪಾತ್ರದಲ್ಲಿ ಒಬ್ಬೊಬ್ಬರನ್ನು ಊಹಿಸಿಕೊಳ್ಳಲು ಶುರು ಮಾಡಿದ್ದೆ. ನನ್ನನ್ನು ವಂದಿಯದೇವನ್ ಪಾತ್ರದಲ್ಲಿ. ಅರುಲ್ಮುಳಿ ವರ್ಮನ್ ಅಂದಾಕ್ಷಣ ಕಮಲ್, ಆದಿತ್ಯಾ ಕರಿಕಾಲನ್ ಅಂದರೆ ವಿಜಯ್ಕಾಂತ್, ನಂದಿನಿ ಅಂದರೆ ರೇಖಾ, ಕುಂದವೈ ಪಾತ್ರದಲ್ಲಿ ಶ್ರೀದೇವಿ, ಪೆರಿಯ ಪಳುವೆಟ್ಟರೈಯಾರ್ ಪಾತ್ರದಲ್ಲಿ ಸತ್ಯರಾಜ್ನ ಕಲ್ಪನೆ ಮಾಡಿಕೊಂಡಿದ್ದೆ" ಎಂದು ರಜಿನಿಕಾಂತ್ ವಿವರಿಸಿದ್ದಾರೆ.


Click it and Unblock the Notifications











