ವಿಶ್ರಾಂತಿ ಬಳಿಕ ಮತ್ತೆ 'ಅಣ್ಣಾತೆ' ಚಿತ್ರೀಕರಣಕ್ಕೆ ಸಜ್ಜಾದ ಸೂಪರ್ ಸ್ಟಾರ್ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಅಣ್ಣಾತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲಾಕ್ ಡೌನ್ ಬಳಿಕ ಅಣ್ಣಾತೆ ಸಿನಿಮಾದ ಚಿತ್ರೀಕರಣವನ್ನು ಕಳೆದ ವರ್ಷ ಡಿಸೆಂಬರ್ ನಿಂದ ಪ್ರಾರಂಭ ಮಾಡಲಾಗಿತ್ತು. ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು.
ಆದರೆ ಚಿತ್ರೀಕರಣ ಸೆಟ್ ನಲ್ಲಿ ಕೆಲವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಕಾರಣ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಅದೇ ಸಮಯದಲ್ಲಿ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಕೆಲವು ಸಮಯ ವಿಶ್ರಾಂತಿ ಸೂಚಿಸಿದ ಕಾರಣ ರಜನಿಕಾಂತ್ ರೆಸ್ಟ್ ನಲ್ಲಿ ಇದ್ದರು.
ಇದೀಗ ಸೂಪರ್ ಸ್ಟಾರ್ ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದ್ದಾರೆ. ರಾಜಕೀಯ ಪ್ರವೇಶದಿಂದ ಹಿಂದೆ ಸರಿದಿರುವ ರಜನಿಕಾಂತ್ ಇನ್ನುಮುಂದೆ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಈಗಾಗಲೇ ಅಣ್ಣಾತೆ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದ್ದು, ಸಿನಿಮಾ ಈ ವರ್ಷ ದೀಪಾವಳಿಗೆ ತೆರೆಗೆ ಬರುತ್ತಿದೆ.

ನವೆಂಬರ್ 4ಕ್ಕೆ ಅಣ್ಣಾತೆ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುವ ನಿರ್ಧಾರ ಮಾಡಿದ್ದು, ಈಗಾಗಲೇ ನಿರ್ದೇಶಕ ಸಿರುಥೈ ಶಿವ ರಜನಿಕಾಂತ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಮಾರ್ಚ್ 15ರಿಂದ ಅಣ್ಣಾತೆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯಲಿದ್ದು, ಇಡೀ ಸಿನಿಮಾತಂಡ ಹೈದರಾಬಾದ್ ನಲ್ಲಿ ಬೀಡುಬಿಡಲಿದೆ. ಅಂದಹಾಗೆ ಚಿತ್ರದಲ್ಲಿ ಹಿರಿಯ ನಟಿಯರಾದ ಖುಷ್ಬೂ, ಮೀನಾ ಮತ್ತು ನಯನತಾರಾ ಮತ್ತು ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಸೆಟ್ ಹಾಕಲಿದ್ದು, ಈಗಾಗಲೇ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ರಜನಿಕಾಂತ್ ಕೊನೆಯದಾಗಿ ದರ್ಬಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.


Click it and Unblock the Notifications











