ರಜನೀಕಾಂತ್ಗೆ ಮೊದಲ ಫ್ಯಾನ್ ಕ್ಲಬ್ ಸ್ಥಾಪಿಸಿದ್ದ ಅಭಿಮಾನಿ ಮುತ್ತುಮಣಿ ನಿಧನ
ನಟ ರಜನೀಕಾಂತ್ಗೆ ಇಂದು ಕೋಟ್ಯಂತರ ಅಭಿಮಾನಿಗಳು. ಅತಿ ಹೆಚ್ಚು ಅಭಿಮಾನಿಗಳನ್ನು, ಅಭಿಮಾನಿ ಸಂಘಗಳನ್ನು ಹೊಂದಿರುವ ಭಾರತದ ಕೆಲವೇ ನಟರಲ್ಲಿ ರಜನೀಕಾಂತ್ ಒಬ್ಬರು. ಆದರೆ ರಜನೀಕಾಂತ್ ನಟನೆ ಆರಂಭಿಸಿದಾಗ ಅವಮಾನಿಸಿದವರೇ ಹೆಚ್ಚು, ಅಭಿಮಾನಿಸಿದವರು ಕಡಿಮೆ. ಆರಂಭದಲ್ಲಿ ರಜನಿಗೆ ಸಿಕ್ಕ ಮೊದಲ ಅಭಿಮಾನಿ ಎಪಿ ಮುತ್ತುಮಣಿ, ಆದರೆ ರಜನಿ ತಮ್ಮ ಮೊದಲ ವೀರಾಭಿಮಾನಿಯನ್ನು ಕಳೆದುಕೊಂಡಿದ್ದಾರೆ.
ನಟ ರಜನೀಕಾಂತ್ರ ಮೊತ್ತ ಮೊದಲ ಫ್ಯಾನ್ ಕ್ಲಬ್ ಸ್ಥಾಪಿಸಿದ್ದ ಅಪ್ಪಟ ಅಭಿಮಾನಿ ಎಪಿ ಮುತ್ತುಮಣಿ ನಿಧನವಾಗಿದ್ದಾರೆ. ಮುತ್ತುಮಣಿಗೆ 68 ವರ್ಷ ವಯಸ್ಸಾಗಿತ್ತು, ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಮುತ್ತುಮಣಿ ಬಳಲುತ್ತಿದ್ದರು. ರಜನೀಕಾಂತ್ ತಮ್ಮ ನಾಲ್ಕನೇ ಸಿನಿಮಾ ಮಾಡಿದಾಗಲೇ ಮುತ್ತುಮಣಿ ರಜನೀ ಅಭಿಮಾನಿಯಾಗಿ ಅವರಿಗಾಗಿ ಮಧುರೈನಲ್ಲಿ ಫ್ಯಾನ್ಸ್ ಕ್ಲಬ್ ಸ್ಥಾಪಿಸಿದ್ದರು.
70-80 ರ ದಶಕದಲ್ಲಿ ಮಧುರೈ ಫ್ಯಾನ್ಸ್ ಕ್ಲಬ್ಗಳ ಹವಾ ಜೋರಾಗಿತ್ತು. ದೊಡ್ಡ ದೊಡ್ಡ ಉದ್ಯಮಿಗಳು, ರಾಜಕಾರಣಿಗಳ ಆಪ್ತರು ಹಲವು ಸ್ಟಾರ್ ನಟರಿಗೆ ಅಭಿಮಾನಿ ಸಂಘ ಸ್ಥಾಪಿಸಿಕೊಂಡು ಅವರ ಆಪ್ತತೆ ಗಳಿಸಿದ್ದರು. ಆ ಸಂದರ್ಭದಲ್ಲಿ ಮುತ್ತುಮಣಿ, ಆಗಿನ್ನು ಕೇವಲ ಒಂದೆರಡು ಸಿನಿಮಾ ಮಾಡಿದ್ದ ರಜನೀಕಾಂತ್ರ ಅಭಿನಯ, ಸ್ಟೈಲ್ ನೋಡಿ ಮಾರು ಹೋಗಿ ಅವರಿಗಾಗಿ ಅಭಿಮಾನಿ ಸಂಘ ಸ್ಥಾಪನೆ ಮಾಡಿದ್ದರು.

ರಜನೀಕಾಂತ್ರ ನಾಲ್ಕನೇ ಸಿನಿಮಾ 'ಕವಿ ಕುಯಿಲ್' ಸಿನಿಮಾ ಪ್ರದರ್ಶನದ ವೇಳೆ ರಜನೀಯ ಹೂವಿನ ಕಟೌಟ್ ಮಾಡಿಸಿ 'ಸೂಪರ್ ಸ್ಟಾರ್ ದಿ ಎರಾ' ಎಂದು ಮುತ್ತುಮಣಿ ಬರೆಸಿದ್ದರಂತೆ. ಅಂತೆಯೇ ಮುತ್ತುಮಣಿಯ ಮಾತು ನಿಜವಾಗಿ ರಜನೀಕಾಂತ್ ನಿಜವಾಗಿಯೂ ಸೂಪರ್ ಸ್ಟಾರ್ ಆದರು.
ರಜನೀಕಾಂತ್ಗೆ ಎಪಿ ಮುತ್ತುಮಣಿ ಬಹಳ ಆಪ್ತರಾಗಿದ್ದರು. ತಮ್ಮ ಕಷ್ಟದ ದಿನಗಳಲ್ಲಿ, ಆರಂಭದ ದಿನಗಳಲ್ಲಿ ತಮಗೆ ಬೆಂಬಲಿಸದವರನ್ನು, ತಮ್ಮ ಪ್ರತಿಭೆ ಗುರುತಿಸಿದವರನ್ನು ರಜನಿ ಎಂದೂ ಕೈ ಬಿಟ್ಟಿಲ್ಲ. ಅಂತೆಯೇ ಮುತ್ತುಮಣಿಯನ್ನು ಸಹ ಕುಟುಂಬ ಸದಸ್ಯರಂತೆ ರಜನಿ ನೋಡಿಕೊಂಡಿದ್ದರು. ಮುತ್ತುಮಣಿಯ ಮದುವೆಯಲ್ಲಿ ಸಹ ರಜನೀಕಾಂತ್ ಭಾಗವಹಿಸಿದ್ದರು.
ಕೆಲವು ವರ್ಷಗಳ ಹಿಂದೆ ಮುತ್ತುಮಣಿಗೆ ಅನಾರೋಗ್ಯ ಎಂದು ಗೊತ್ತಾದಾಗ ಅವರನ್ನು ಮಧುರೈನಿಂದ ಚೆನ್ನೈಗೆ ಕರೆದುಕೊಂಡು ಬಂದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿದ್ದರು. ರಜನೀಕಾಂತ್ ಅವರನ್ನು ಯಾವಾಗ ಬೇಕಾದರೂ ಭೇಟಿಯಾಗುವ ಅವಕಾಶ ಇದ್ದ ಕೆಲವರಲ್ಲಿ ಮುತ್ತುಮಣಿ ಸಹ ಒಬ್ಬರಾಗಿದ್ದರು.
ಬೆಂಗಳೂರಿನಲ್ಲಿಯೇ ಜನಿಸಿ ಶಿಕ್ಷಣ, ಉದ್ಯೋಗ ಮಾಡಿದ್ದ ರಜನೀಕಾಂತ್ಗೆ ಇಲ್ಲಿ ಸಾಕಷ್ಟು ಮಂದಿ ಗೆಳೆಯರಿದ್ದಾರೆ. ರಜನೀಕಾಂತ್ರ ಅತ್ಯಾಪ್ತ ಗೆಳೆಯ ರಾಜ್ ಬಹದ್ದೂರ್ ಬೆಂಗಳೂರಿನವರೇ. ಕಳೆದ ವರ್ಷಾಂತ್ಯದಲ್ಲಿ ಬೆಂಗಳೂರಿಗೆ ಆಗಮಿಸಿದ್ದ ರಜನೀಕಾಂತ್ ತಮ್ಮ ಗೆಳೆಯ ಹಾಗೂ ಅಣ್ಣನ ಮನೆಗೆ ಭೇಟಿ ನೀಡಿದ್ದರು.


Click it and Unblock the Notifications











