ರಜನಿಕಾಂತ್ ಆರೋಗ್ಯದಲ್ಲಿ ಸ್ಥಿರ; ಶೀಘ್ರದಲ್ಲೇ ಡಿಸ್ಚಾರ್ಜ್
ಅನಾರೋಗ್ಯದ ಕಾರಣ ಆಸ್ಪತ್ರೆ ದಾಖಲಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ರಕ್ತದೊತ್ತಡ ಹೆಚ್ಚಾದ ಕಾರಣ ರಜನಿಕಾಂತ್ ಅವರನ್ನು ಶುಕ್ರವಾರ (ಡಿ.25) ಬೆಳಗ್ಗೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸತತ ಚಿತ್ರೀಕರಣದಿಂದ ಬಳಲಿದ್ದು ರಜನಿ ಅವರ ರಕ್ತದ ಒತ್ತಡದಲ್ಲಿ ಏರಳಿತ ಕಂಡು ಬಂದಿದೆ ಎಂದು ಆಸ್ಪತ್ರೆ ಮಂಡಳಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಕೆಲವೊಂದು ಪರೀಕ್ಷೆಗಳನ್ನು ಮಾಡಿಸಲಾಗಿದ್ದು, ಆತಂಕ ಪಡುವಂತದ್ದು ಏನೂ ಇಲ್ಲ, ಇನ್ನೂ ಕೆಲವು ಪರೀಕ್ಷೆಯ ವರದಿ ಬರಬೇಕಿದೆ. ರಾತ್ರಿಯ ರಕ್ತದೊತ್ತಡದ ಸ್ಥಿತಿಗತಿಯ ಆಧಾರದ ಮೇಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸದ್ಯ ಅವರ ಆರೋಗ್ಯದ ಮೇಲೆ ತೀವ್ರ ನಿಘಾವಹಿಸಿದ್ದು, ಯಾರನ್ನು ಭೇಟಿಗೆ ಅವಕಾಶ ನೀಡುತ್ತಿಲ್ಲ. ಇನ್ನು ಕೆಲವು ದಿನಗಳು ಸಂಪೂರ್ಣ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಸೂಪರ್ ಸ್ಟಾರ್ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಗಣ್ಯರು ಹಾರೈಸುತ್ತಿದ್ದಾರೆ.

ರಜನಿಕಾಂತ್ ಡಿಸೆಂಬರ್ 13ರಿಂದ ಹೈದರಾಬಾದ್ ನಲ್ಲಿದ್ದಾರೆ. ಅಣ್ಣಾತೆ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸೂಪರ್ ಬಿಡುವಿಲ್ಲದೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಅಣ್ಣಾತೆ ಸಿನಿಮಾ ಸೆಟ್ನಲ್ಲಿ ಎಂಟು ಜನರಿಗೆ ಕೊರೊನಾ ವೈರಸ್ ತಗುಲಿದ್ದು, ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಸೆಟ್ನಲ್ಲಿ ಕೋವಿಡ್ ಪತ್ತೆಯಾದ ಕಾರಣ ರಜನಿಕಾಂತ್ ಅವರಿಗೂ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿದೆ.
ಡಿಸೆಂಬರ್ 31 ರಂದು ರಾಜಕೀಯ ಪಕ್ಷದ ಹೆಸರನ್ನು ಘೋಷಿಸಲಿರುವ ಕಾರಣ, ಬೇಗ ಚಿತ್ರೀಕರಣ ಮುಗಿಸುವ ಸಲುವಾಗಿ ದಿನಕ್ಕೆ 14 ಗಂಟೆಗಳ ಕಾಲ ರಜನಿ ಕೆಲಸ ಮಾಡ್ತಿದ್ದರು ಎಂದು ಹೇಳಲಾಗಿದೆ. ಪಕ್ಷ ಘೋಷಣೆಗೆ ತಯಾರಿ ಸಹ ನಡೆಸಿದ್ದಾರೆ. ಆದರೀಗ ಆಸ್ಪತ್ರೆಯಲ್ಲಿದ್ದು, ವೈದ್ಯರು ಸಂಪೂರ್ಣ ವಿಶ್ರಾಂತಿ ಮಾಡಬೇಕೆಂದು ಸೂಚಿಸಿದ್ದಾರೆ.


Click it and Unblock the Notifications











