ರಾಜಕೀಯದ ಬಗ್ಗೆ ರಜನಿಕಾಂತ್ ಮತ್ತೊಂದು ಬಹಿರಂಗ ಪತ್ರ
ನಟ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶ ಕುರಿತಾಗಿ ಇಂದು ತಮ್ಮ ಅಭಿಮಾನಿಗಳಿಗೆ ಮತ್ತೊಂದು ಬಹಿರಂಗ ಪತ್ರ ಬರೆದಿದ್ದಾರೆ.
Recommended Video
ರಾಜಕೀಯ ಪ್ರವೇಶ ಮಾಡುವದಾಗಿ ಕಳೆದ ವರ್ಷ ಘೋಷಿಸಿದ್ದ ನಟ ರಜನಿಕಾಂತ್ ನಂತರ ಆರೋಗ್ಯ ಸಮಸ್ಯೆ ಎದುರಾದ ಕಾರಣ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಆದರೆ ಮಾಧ್ಯಮಗಳಲ್ಲಿ, ರಜನಿ ಮತ್ತೆ ರಾಜಕೀಯಕ್ಕೆ ಬರುತ್ತಾರೆ ಎಂಬ ಬಗ್ಗೆ ಕೆಲವು ದಿನಗಳಿಂದ ಸುದ್ದಿಗಳು ಪ್ರಸಾರವಾಗುತ್ತಿದ್ದವು ಹಾಗಾಗಿ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ.
ಬಹಿರಂಗ ಪತ್ರ ಬರೆದಿರುವ ರಜನಿಕಾಂತ್ ತಾವು ಸುತಾರಾಂ ರಾಜಕೀಯಕ್ಕೆ ಬರುವುದಿಲ್ಲ. ಭವಿಷ್ಯದಲ್ಲಿಯೂ ನನ್ನ ನಿರ್ಣಯವನ್ನು ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ. ಆ ಮೂಲಕ ರಜನಿಕಾಂತ್ ಮುಂದೆಂದಾದರೂ ರಾಜಕೀಯಕ್ಕೆ ಬರಬಹುದೆಂಬ ಅಭಿಮಾನಿಗಳ ನಿರೀಕ್ಷೆ ಸಹ ಪೂರ್ಣವಾಗಿ ಅಂತ್ಯವಾಗಿದೆ.

ರಾಜಕೀಯ ಕಾರಣಕ್ಕೆ ಸ್ಥಾಪಿಸಲಾಗಿದ್ದ ತಮ್ಮ 'ರಜನಿ ಮಕ್ಕಲ್ ಮಂಡ್ರಂ' (ರಜನಿ ಪ್ರಜಾ ಸಂಘ) ಅನ್ನು 'ರಜನಿ ರಸಿಗರ್ ಮಂಡ್ರಂ' (ರಜನಿ ಅಭಿಮಾನಿಗಳ ಸಂಘ)ವಾಗಿ ಬದಲಾವಣೆ ಮಾಡಿರುವುದಾಗಿಯೂ ರಜನಿಕಾಂತ್ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ತಾವು ರಾಜಕೀಯ ಪ್ರವೇಶಿಸುವುದಾಗಿ ರಜನಿಕಾಂತ್ ಬಹಿರಂಗವಾಗಿ ಘೋಷಿಸಿದ್ದರು. ಡಿಸೆಂಬರ್ 31ರಂದು ಪಕ್ಷದ ಹೆಸರು ಹಾಗೂ ಚಿಹ್ನೆ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದರು. ಮಾರ್ಚ್ನಲ್ಲಿ ನಡೆಯಲಿದ್ದು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಕಲ ತಯಾರಿ ನಡೆಸಿದ್ದರು.
ಆದರೆ ಡಿಸೆಂಬರ್ 27ರಂದು 'ಅಣ್ಣಾತೆ' ಸಿನಿಮಾದ ಚಿತ್ರೀಕರಣದ ವೇಳೆ ರಜನಿಕಾಂತ್ ಆರೋಗ್ಯದಲ್ಲಿ ಏರು-ಪೇರಾಗಿತ್ತು. ಅವರನ್ನು ಕೆಲವು ದಿನಗಳ ಕಾಲ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ರಜನೀಕಾಂತ್ಗೆ ಸಂಪೂರ್ಣ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹಾಗೂ ಕುಟುಂಬಸ್ಥರು ಹೇಳಿದ ಕಾರಣ ರಜನಿಕಾಂತ್ ರಾಜಕೀಯ ಪ್ರವೇಶದಿಂದ ಹಿಂದೆ ಸರಿದಿದ್ದರು. ರಜನಿ ರಾಜಕೀಯಕ್ಕೆ ಬರಲೇಬೇಕೆಂದು ಅಭಿಮಾನಿಗಳು ಪ್ರತಿಭಟನೆಗಳು ನಡೆಸಿದರಾದರೂ ರಜನಿ ತಮ್ಮ ನಿರ್ಧಾರ ಬದಲಿಸಲಿಲ್ಲ.


Click it and Unblock the Notifications











