'ನನ್ನ ಜೀವನದಲ್ಲಿ ಶೇಕಡಾ 10ರಷ್ಟು ಸಂತೋಷ, ನೆಮ್ಮದಿ ಉಳಿಯಲಿಲ್ಲ'- ರಜನಿಕಾಂತ್
ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್ವಾಡ್ ಮುಂದೆ ಸೂಪರ್ ಸ್ಟಾರ್ ರಜಿನಿಕಾಂತ್ ಆಗಿ ಬೆಳೆದ ರೋಚಕ ಕಥೆ ಎಲ್ಲರಿಗೂ ಗೊತ್ತೇಯಿದೆ. ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ರಜನಿಕಾಂತ್, ನೂರಾರು ಕೋಟಿ ಆಸ್ತಿಯ ಒಡೆಯ. ಹಾಗಂತ ತಲೈವಾಗೆ ಯಾವುದೇ ಚಿಂತೆ ಇಲ್ಲ. ಸಿಕ್ಕಾಪಟ್ಟೆ ಸಂತೋಷದಿಂದ ಇದ್ದಾರೆ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಸ್ವತಃ ರಜನಿಕಾಂತ್ 'ನನ್ನ ಜೀವನದಲ್ಲಿ ಶೇಕಡಾ 10ರಷ್ಟು ಸಂತೋಷ, ಶಾಂತಿ ಉಳಿಯಲಿಲ್ಲ' ಎಂದು ಹೇಳಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ 'Successful Life Through Kriya Yoga' ಅನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸೂಪರ್ ಸ್ಟಾರ್ ಕೆಲ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ರಜನಿಕಾಂತ್ ವಯಸ್ಸು 70 ದಾಟಿದ್ರು, ನಂಬರ್ ವನ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. 'ಪೇಟಾ', 'ದರ್ಬಾರ್', 'ಅಣ್ಣಾತ್ತೆ' ಸಿನಿಮಾಗಳ ಮೂಲಕ ಸಕ್ಸಸ್ ಕಂಡ ತಲೈವಾ 'ಜೈಲರ್' ಅನ್ನುವ ಸಿನಿಮಾದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹಿಂದೆ ರಾಜಕೀಯಕ್ಕೆ ಬರೋದಾಗಿ ಹೇಳಿದ್ದ ರಜನಿಕಾಂತ್ ಕೊನೆಗೆ ಅದರಿಂದ ಹಿಂದೆ ಸರಿದಿದ್ದರು. ಆರೋಗ್ಯದ ಕಾರಣ ನೀಡಿ ಚಿತ್ರರಂಗದಿಂದಲೂ ದೂರಾಗುತ್ತಾರೆ ಅಂತ ಗುಸು ಗುಸು ಶುರುವಾಗಿತ್ತು. ಆ ಮಾತನ್ನು ಸುಳ್ಳು ಮಾಡಿ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ತಮ್ಮ ಜೀವನದಲ್ಲಿ ಆಧ್ಯಾತ್ಮ ಹಾಸುಹೊಕ್ಕಾಗಿರುವ ಬಗ್ಗೆ ರಜನಿಕಾಂತ್ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಕೊರೊನಾ ಹಾವಳಿ, ಮಗಳ ಡಿವೋರ್ಸ್ ವಿಚಾರದ ಬಳಿಕ ರಜನಿಕಾಂತ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಬಹಳ ದಿನಗಳ ಬಳಿಕ ಈ ಕಾರ್ಯಕ್ರಮದಲ್ಲಿ ರಜನಿಕಾಂತ್ ಬಹಳ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮದೇ ಶೈಲಿಯಲ್ಲಿ ಹಾಸ್ಯಭರಿತವಾಗಿ ಮಾತನಾಡುತ್ತಾ ಜೀವನದ ಗಂಭೀರ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಹಣ ಇದ್ದ ಮಾತ್ರಕ್ಕೆ ಸುಖ, ನೆಮ್ಮದಿ ಸಿಗೋದಿಲ್ಲ ಅಂತ ಸಾಕಷ್ಟು ಜನ ಹೇಳುತ್ತಾರೆ. ಸೂಪರ್ ಸ್ಟಾರ್ ಕೂಡ ಅದೇ ಮಾತನ್ನು ಹೇಳಿದ್ದಾರೆ.

ಸೂಪರ್ ಸ್ಟಾರ್ಗೆ ಆತ್ಮಸಂತೃಪ್ತಿ ನೀಡಿದ ಚಿತ್ರಗಳಿವು
150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ರಜನಿಕಾಂತ್ 'ನಾನು ಅದ್ಭುತ ನಟ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಇದು ಪ್ರಶಂಸೆಯೋ, ವಿಮರ್ಶೆಯೋ ಗೊತ್ತಾಗುತ್ತಿಲ್ಲ. 'ಶ್ರೀ ರಾಘವೇಂದ್ರ' ಹಾಗೂ 'ಬಾಬಾ' ಇವೆರಡು ನನಗೆ ಆತ್ಮ ಸಂತೃಪ್ತಿ ನೀಡಿದ ಸಿನಿಮಾಗಳು. 'ಬಾಬಾ' ಸಿನಿಮಾ ನೋಡಿದ ಮೇಲೆ ಸಾಕಷ್ಟು ಜನ ಹಿಮಾಲಯಕ್ಕೆ ಹೋಗಿ ಬಂದಿದ್ದಾಗಿ ಹೇಳಿದರು. ನನ್ನ ಅಭಿಮಾನಿಗಳಲ್ಲಿ ಕೆಲವರು ಸನ್ಯಾಸಿಗಳಾಗಿ ಬದಲಾದರು. ಆದರೆ ನಾನು ಮಾತ್ರ ನಟನಾಗಿ ಇಲ್ಲಿಯೇ ಉಳಿದಿದ್ದೇನೆ. ಹಿಮಾಲಯದಲ್ಲಿ ಕೆಲ ಅಪರೂಪದ ಗಿಡಮೂಲಿಕೆಗಳಿವೆ. ಅದನ್ನು ತಿಂದರೆ ಒಂದು ವಾರಕ್ಕೆ ಬೇಕಾದ ಶಕ್ತಿ ಲಭಿಸುತ್ತದೆ' ಎಂದಿದ್ದಾರೆ.

ನನ್ನ ಬದುಕಿನಲ್ಲಿ ಸಂತೋಷ, ಪ್ರಶಾಂತತೆ ಧಕ್ಕಿಲ್ಲ
'ಆರೋಗ್ಯ ಅನ್ನುವುದು ಮನುಷ್ಯನಿಗೆ ಬಹಳ ಮುಖ್ಯವಾದುದು. ಅನಾರೋಗ್ಯಕ್ಕೆ ತುತ್ತಾದರೆ ನಮಗೆ ಬೇಕಾದವರು ಸಹಿಸಿಕೊಳ್ಳುವುದಿಲ್ಲ. ನಾನು ನನ್ನ ಜೀವನದಲ್ಲಿ ಹಣ, ಹೆಸರು, ಕೀರ್ತಿ ಎಲ್ಲಾ ನೋಡಿದ್ದೀನಿ. ಸಂತೋಷ, ಪ್ರಶಾಂತತೆ ಮಾತ್ರ ಶೇಕಡಾ 10ರಷ್ಟು ಧಕ್ಕಲಿಲ್ಲ. ಯಾಕೆಂದರೆ, ಅವು ಶಾಶ್ವತವಾಗಿ ಉಳಿಯುವಂತಹುದು ಅಲ್ಲ' ಎಂದು ರಜನಿಕಾಂತ್ ಹೇಳಿದ್ದಾರೆ.

ತಲೈವಾ ಇಬ್ಬರೂ ಹೆಣ್ಣು ಮಕ್ಕಳು ಡಿವೋರ್ಸ್!
ರಜನಿಕಾಂತ್ ಇಬ್ಬರೂ ಹೆಣ್ಣು ಮಕ್ಕಳ ದಾಂಪತ್ಯ ಜೀವನ ಬಹಳ ದಿನಗಳ ಕಾಲ ಉಳಿಯಲಿಲ್ಲ. ಇತ್ತೀಚೆಗೆ ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಡಿವೋರ್ಸ್ ಘೋಷಿಸಿ, ಶಾಕ್ ಕೊಟ್ಟಿದ್ದರು. ಅದಕ್ಕೂ ಮುನ್ನ 2017ರಲ್ಲಿ ರಜನಿಕಾಂತ್ ಮತ್ತೊಬ್ಬ ಪುತ್ರಿ ಸೌಂದರ್ಯ ಕೂಡ ಪತಿ ಅಶ್ವಿನ್ ರಾಮ್ಕುಮಾರ್ ಅವರಿಂದ ಡಿವೋರ್ಸ್ ಪಡೆದಿದ್ದರು. 2019ರಲ್ಲಿ ನಟ ಹಾಗೂ ಉದ್ಯಮಿ ವಿಶಗನ್ ವಾನಂಗಮುಡಿ ಜೊತೆ ಎರಡನೇ ಮದುವೆ ಆದರು. ಇಬ್ಬರು ಮಕ್ಕಳ ಸಂಸಾರ ಹೀಗೆ ಆಗಿದ್ದು, ರಜನಿಕಾಂತ್ ಅವರಿಗೆ ಬಹಳ ನೋವು ಕೊಟ್ಟಿದ್ದು ಸುಳ್ಳಲ್ಲ.

ಆಗಸ್ಟ್ 3ಕ್ಕೆ 'ಜೈಲರ್' ಸಿನಿಮಾ ಮುಹೂರ್ತ
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ರಜನಿಕಾಂತ್ ಈಗ 'ಜೈಲರ್' ಅನ್ನುವ ಸಿನಿಮಾ ಒಪ್ಪಿಕೊಂಡಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸಹ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಟೈಟಲ್ನಿಂದಲೇ ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ.


Click it and Unblock the Notifications











