"ಇಲ್ಲಿ ನಾನೇ ಕಿಂಗ್.. ನಾನು ಮಾಡಿದ್ದೇ ರೂಲ್ಸ್.. ಹುಕುಂ": ರಜನಿಕಾಂತ್ ಖಡಕ್ ಎಚ್ಚರಿಕೆ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗ್ತಿದೆ. ಈಗಾಗಲೇ ಚಿತ್ರದ 'ಕಾವಾಲಯ್ಯ' ಸಾಂಗ್ ಸೋಶಿಯಲ್ ಮೀಡಿಯಾ ಟ್ರೆಂಡಿಂಗ್ನಲ್ಲಿದೆ. ಇದರ ಬೆನ್ನಲ್ಲೇ ಇದೀಗ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ 'ಜೈಲರ್' ಮುತ್ತುವೇಲ್ ಪಾಂಡಿಯನ್ ಪಾತ್ರ ಪರಿಚಯಿಸುವ 'ಹುಕುಂ' ಸಾಂಗ್ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.
'ಹುಕುಂ' ಸಾಂಗ್ ಸಾಹಿತ್ಯ ಕೇಳುತ್ತಿದ್ದರೆ ಇದು ಬರೀ 'ಜೈಲರ್' ಸಿನಿಮಾ ಸಾಂಗ್ ಅಲ್ಲ, ಸೂಪರ್ ಸ್ಟಾರ್ ಎವರ್ಗ್ರೀನ್ ಕ್ರೇಜ್ ಕುರಿತು ಬರೆದಿರೋದು ಅಂತ ಗೊತ್ತಾಗುತ್ತದೆ. ಸೂಪರ್ ಸುಬು ಸಾಹಿತ್ಯ ಬರೆದಿರುವ ಸಾಂಗ್ನ ಸ್ವತಃ ಅನಿರುದ್ಧ್ ಹಾಡಿದ್ದಾರೆ. ರಾಕ್ ಬ್ಯಾಂಡ್ ಶೈಲಿಯ ಮ್ಯೂಸಿಕ್ನಲ್ಲಿ ಸಾಂಗ್ ಪದೇ ಪದೇ ಕೇಳುವಂತಿದೆ. 'ಜೈಲರ್' ರಜನಿ ಆರ್ಭಟದ ಸಣ್ಣ ಸಣ್ಣ ಝಲಕ್ ಜೊತೆಗೆ ಈ ಲಿರಿಕಲ್ ವಿಡಿಯೋ ಸಾಂಗ್ ಡಿಸೈನ್ ಮಾಡಲಾಗಿದೆ. ಸಾಂಗ್ ಮಾತ್ರವಲ್ಲ ಆರಂಭದಲ್ಲಿ ಬರುವ ರಜಿನಿಕಾಂತ್ ಡೈಲಾಗ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ.

"ಇಲ್ಲಿ ನಾನೇ ಕಿಂಗ್. ನಾನು ಮಾಡಿದ್ದೇ ರೂಲ್ಸ್. ಆ ರೂಲ್ಸ್ನ ನನ್ನ ಇಷ್ಟಕ್ಕೆ ಆಗಾಗ ಬದಲಿಸುತ್ತಲೇ ಇರ್ತೀನಿ. ಸುಮ್ನೆ ಅದನ್ನು ಕೇಳ್ಕೊಂಡು ಫಾಲೋ ಮಾಡಿ, ಅದು ಬಿಟ್ಟು ನಖರ ಮಾಡ್ಬೇಕು ಅಂದುಕೊಂಡ್ರೆ,ತುಂಡು ತುಂಡಾಗಿ ಕತ್ತರಿಸಿ ಬಿಸಾಕುತ್ತೇನೆ" ಎನ್ನುವ ಡೈಲಾಗ್ ಜೊತೆಗೆ ಸಾಂಗ್ ಶುರುವಾಗುತ್ತದೆ.

ರಜಿನಿಕಾಂತ್ಗೆ ಫುಲ್ ಬಿಲ್ಡಪ್
ದಶಕಗಳಿಂದ ಸೂಪರ್ ಸ್ಟಾರ್ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಅದನ್ನು ಈ ಸಾಂಗ್ನಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಇದು ಬರೀ 'ಜೈಲರ್' ಸಿನಿಮಾ ಸಾಂಗ್ ಅಲ್ಲ. ರಜನಿಕಾಂತ್ಗೆ ಬಿಲ್ಡಪ್ ಕೊಡುವಂತಹ ಸಾಲುಗಳನ್ನು ಇಲ್ಲಿ ನೋಡಬಹುದು. "ನಿಮ್ಮಪ್ಪನ ಶಿಳ್ಳೆಯನ್ನು ಕೇಳಿದವನು. ವಿವಿಧ ತಲೆಮಾರುಗಳಲ್ಲಿ ಗೆದ್ದವನು" ಎನ್ನುವ ಸಾಲುಗಳು ಅದನ್ನು ಸಾರಿ ಹೇಳುತ್ತಿದೆ.
ಕುತೂಹಲ ಕೆರಳಿಸಿದ 'ಜೈಲರ್'
ಕಳೆದ ವರ್ಷ ನೆಲ್ಸನ್ ದಿಲೀಪ್ ಕುಮಾರ್ 'ಬೀಸ್ಟ್' ಸಿನಿಮಾ ಮಾಡಿದ್ದರು. ಆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೂ ರಜನಿಕಾಂತ್ ಕರೆದು ನೆಲ್ಸನ್ಗೆ 'ಜೈಲರ್' ಸಿನಿಮಾ ಅವಕಾಶ ಕೊಟ್ಟಿದ್ದಾರೆ. ಇನ್ನು 'ಜೈಲರ್' ಸಿನಿಮಾ ಕಥೆ ಏನು ಅನ್ನೋದರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮೇಲ್ನೋಟಕ್ಕೆ ಇದು ಜೈಲ್ ವಾರ್ಡನ್ ಕುರಿತಾದ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಇನ್ನು ಈ ಸಿನಿಮಾ ಕಥೆ 'ಬೀಸ್ಟ್' ಸಿನಿಮಾ ಕಥೆಯನ್ನು ಹೋಲುವಂತೆ ಇರಲಿದೆ ಎನ್ನುವ ಅನುಮಾನವೂ ಕೆಲವರನ್ನು ಕಾಡುತ್ತಿದೆ.
'ಜೈಲರ್' ಟೈಟಲ್ ಸಮಸ್ಯೆ
ತಮಿಳಿನ 'ಜೈಲರ್' ಸಿನಿಮಾ ದಕ್ಷಿಣ ಭಾರತದ 4 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಆದರೆ ಮಲಯಾಳಂನಲ್ಲಿ ಒಂದು ಸಮಸ್ಯೆ ಎದುರಾಗಿದೆ. ಮಾಲಿವುಡ್ ಚಿತ್ರ ನಿರ್ದೇಶಕರೊಬ್ಬರು 'ಜೈಲರ್' ಟೈಟಲ್ ನನ್ನದು. ನಾನು ಇದನ್ನು ರಿಜಿಸ್ಟರ್ ಮಾಡಿಸಿದ್ದೇನೆ. ಇದೇ ಟೈಟಲ್ನಲ್ಲಿ ನನ್ನ ಸಿನಿಮಾ ಸಿದ್ಧವಾಗುತ್ತಿದೆ. ಹಾಗಾಗಿ ನಿಮ್ಮ ಸಿನಿಮಾ ಟೈಟಲ್ ಬದಲಿಸಿ ಎಂದಿದ್ದಾರೆ. ಕೊನೆ ಪಕ್ಷ ಕೇರಳದಲ್ಲಿ ಟೈಟಲ್ ಬದಲಿಸಿ ಸಿನಿಮಾ ರಿಲೀಸ್ ಮಾಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪದ ಸನ್ ಪಿಕ್ಚರ್ಸ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದೆ.
ಘಟಾನುಘಟಿ ಕಲಾವಿದರ ದಂಡು
ರಜನಿಕಾಂತ್ ಜೊತೆ ಈ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಕನ್ನಡ ನಟ ಶಿವರಾಜ್ಕುಮಾರ್ ಸಹ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಮಲಯಾಳಂ ನಟ ಮೋಹನ್ ಲಾಲ್, ಬಾಲಿವುಡ್ ನಟ ಜಾಕಿ ಶ್ರಾಫ್ ಸೇರಿದಂತೆ ಹಲವರು ತಲೈವಾ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಇನ್ನುಳಿದಂತೆ ರಮ್ಯಾಕೃಷ್ಣನ್, ತಮನ್ನಾ, ಯೋಗಿ ಬಾಬು ಈ ಚಿತ್ರದ ತಾರಾಗಣದಲ್ಲಿದ್ದಾರೆ.


Click it and Unblock the Notifications











