Rajinikanth: ಲೋಕೇಶ್ ಕನಕರಾಜ್ ಸಿನಿಮಾ ಬಳಿಕ ಚಿತ್ರರಂಗಕ್ಕೆ ತಲೈವಾ ಗುಡ್ಬೈ? ಸಹೋದರ ಹೇಳಿದ್ದಿಷ್ಟು
'ಜೈಲರ್' ಸಕ್ಸಸ್ ಸಂಭ್ರಮದಲ್ಲಿರುವ ರಜನಿಕಾಂತ್ ಶೀಘ್ರದಲ್ಲೇ ಚಿತ್ರರಂಗಕ್ಕೆ ಗುಡ್ಬೈ ಹೇಳುತ್ತಾರೆ ಎನ್ನುವ ಚರ್ಚೆ ನಡೀತಿದೆ. ಸದ್ಯ 'ಲಾಲ್ ಸಲಾಂ' ಚಿತ್ರದ ಅತಿಥಿ ಪಾತ್ರದಲ್ಲಿ ತಲೈವಾ ಬಣ್ಣ ಹಚ್ಚಿದ್ದಾರೆ. ಬಳಿಕ ಜ್ಞಾನವೇಲ್ ನಿರ್ದೇಶನದ ಚಿತ್ರ ಶುರುವಾಗಲಿದೆ. ಆ ನಂತರ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಬಣ್ಣ ಹಚ್ಚುತ್ತಾರೆ, ಅದೇ ಕೊನೆಯ ಸಿನಿಮಾ ಎನ್ನಲಾಗ್ತಿದೆ.
ರಜನಿಕಾಂತ್ ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಸಾಕಷ್ಟು ಬಾರಿ ಇಂತಹ ಚರ್ಚೆಗಳು ನಡೆದಿತ್ತು. ದಶಕದ ಹಿಂದೆ 'ಬಾಬಾ' ತಲೈವಾ ನಟಿಸುವ ಕೊನೆಯ ಸಿನಿಮಾ ಎನ್ನಲಾಗಿತ್ತು. ಆದರೆ ಆ ಸಿನಿಮಾ ಸೋಲಿನ ಬಳಿಕವೂ ಸೂಪರ್ ಸ್ಟಾರ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಮತ್ತೆ ಇಂತಹ ಚರ್ಚೆ ಶುರುವಾಗಿದ್ದು ತಲೈವಾ ಪೊಲಿಟಿಕಲ್ ಎಂಟ್ರಿ ಸುದ್ದಿ ಬಂದಾಗ.

3 ವರ್ಷಗಳ ಹಿಂದೆ ರಜನಿಕಾಂತ್ ಸ್ವಂತ ಪಕ್ಷ ಕಟ್ಟಿ ತಮಿಳುನಾಡು ರಾಜಕೀಯರಂಗ ಪ್ರವೇಶಿಸುವ ಚರ್ಚೆ ಶುರುವಾಗಿತ್ತು. ಅಭಿಮಾನಿಗಳ ಅಭಿಪ್ರಾಯ ಪಡೆದು ತಲೈವಾ ಮುಂದಡಿ ಇಟ್ಟಿದ್ದರು. ಆಗ 'ಅಣ್ಣಾತ್ತೆ' ಚಿತ್ರದಲ್ಲಿ ನಟಿಸುತ್ತಿದ್ದರು. ಹಾಗಾಗಿ ಅದೇ ರಜನಿಕಾಂತ್ ಕೊನೆ ಸಿನಿಮಾ. ಆ ಬಳಿಕ ಸಂಪೂರ್ಣವಾಗಿ ರಾಜಕೀಯರಂಗದಲ್ಲಿ ಸಕ್ರಿಯರಾಗುತ್ತಾರೆ ಎನ್ನಲಾಯಿತು. ಆದರೆ ಸೂಪರ್ ಸ್ಟಾರ್ ಆರೋಗ್ಯ ಸಮಸ್ಯೆ ನೆಪವೊಡ್ಡಿ ಪಾಲಿಟಿಕ್ಸ್ ಎಂಟ್ರಿ ನಿರ್ಧಾರದಿಂದ ದೂರ ಸರಿದರು.
ರಾಜಕೀಯರಂಗಕ್ಕೆ ಪ್ರವೇಶಿಸದಿದ್ದರೂ ಸಿನಿಮಾಗಳಲ್ಲಿ ನಟಿಸೋ ಭರವಸೆ ನೀಡಿದ್ದರು. ಅದರಂತೆ 'ಜೈಲರ್' ಸಿನಿಮಾ ಒಪ್ಪಿಕೊಂಡರು. 'ಲಾಲ್ ಸಲಾಂ' ಸೇರಿದಂತೆ ಮತ್ತೊಂದು ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ನಟಿಸುವ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಇನ್ನು ಆ ಸಿನಿಮಾ ಬಳಿಕ ಚಿತ್ರರಂಗಕ್ಕೆ ಗುಡ್ಬೈ ಹೇಳುತ್ತಾರೆ ಎನ್ನುವ ಚರ್ಚೆ ಬಗ್ಗೆ ಸಹೋದರ ಸತ್ಯ ನಾರಾಯಣ ಪ್ರತಿಕ್ರಿಯಿಸಿದ್ದಾರೆ.

ರಜನಿಕಾಂತ್ಗೆ ಸಿನಿಮಾಗಳಲ್ಲಿ ನಟಿಸೋದು ಸಾಕು ಎಂದು ನೀವು ಸಲಹೆ ನೀಡಿದ್ದೀರಾ ಎನ್ನವ ಪ್ರಶ್ನೆಗೆ ಸತ್ಯ ನಾರಾಯಣ ಉತ್ತರಿಸಿದ್ದಾರೆ. "ರಜನಿಕಾಂತ್ಗೂ ಕೆಲವೊಮ್ಮೆ ಸಾಕು ಎನಿಸುತ್ತದೆ. ಆದರೆ ಒಳ್ಳೆಯ ಪಾತ್ರಗಳು, ಕತೆಗಳು ಬಂದಾಗ ನಟಿಸುವ ಹುಮ್ಮಸ್ಸು ಬರುತ್ತದೆ. ಇಷ್ಟೋ ಬಾರಿ ಆತನ ಸಿನಿಮಾಗಳನ್ನು ನೋಡಿ ಜನ ಬದಲಾಗಿದ್ದಾರೆ. ಒಳ್ಳೆಯ ಕತೆಗಳನ್ನು ಜನರಿಗೆ ತಲುಪಿಸಬೇಕು ಎಂದು ಇನ್ನು ನಟಿಸುತ್ತಲೇ ಇದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ಬಳಿಕ ಚಿತ್ರರಂಗದಿಂದ ನಿವೃತ್ತಿ ಹೊಂದುತ್ತಾರೆ ಎನ್ನುವುದು ಸುಳ್ಳು. ಇನ್ನು ಐದಾರು ಸಿನಿಮಾಗಳಲ್ಲಿ ರಜನಿಕಾಂತ್ ನಟಿಸುತ್ತಾರೆ" ಎಂದು ಸಹೋದರ ಸತ್ಯನಾರಾಯಣ ಹೇಳಿದ್ದಾರೆ.
"ಸಿನಿಮಾಗಳ ಬಗ್ಗೆ ರಜನಿಕಾಂತ್ ಜೊತೆ ಚರ್ಚಿಸುತ್ತಿರುತ್ತೇನೆ. ಸಿನಿಮಾ ಸನ್ನಿವೇಶಗಳ ಬಗ್ಗೆ ಮಾತನಾಡುತ್ತಿರುತ್ತಾನೆ. 'ಲಾಲ್ ಸಲಾಂ' ಚಿತ್ರದಲ್ಲಿ ಕ್ರಿಕೆಟ್ ಕುರಿತಾದ ಕತೆ ಇದೆ. ಕಪಿಲ್ ದೇವ್ ನಟಿಸಿದ್ದಾರೆ. ಅದರಲ್ಲಿ ನಾಯಕ- ಖಳನಾಯಕ ನಡುವೆ ಸಂಘರ್ಷ ಇರುತ್ತದೆ. ಅದರಲ್ಲಿ ರಜನಿಕಾಂತ್ ಎಂಟ್ರಿ ಆಗುತ್ತಾರೆ. ಆ ರೀತಿ ಬಹಳ ಚೆನ್ನಾಗಿದೆ ಕತೆ. 'ಜೈಲರ್'ಗಿಂತ ದೊಡ್ಡಮಟ್ಟದಲ್ಲಿ ಆ ಸಿನಿಮಾ ಹಿಟ್ ಆಗುತ್ತದೆ ಎಂದು ಹೇಳಿರುವುದಾಗಿ" ವಿವರಿಸಿದ್ದಾರೆ.
'ಜೈಲರ್' ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಈಗಾಗಲೇ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ವಾರವೇ ಸಿನಿಮಾ ಓಟಿಟಿಗೆ ಬರ್ತಿದೆ. ಅಮೇಜಾನ್ ಪ್ರೈಮ್ನಲ್ಲಿ ಗುರುವಾರದಿಂದ ಸ್ಟ್ರೀಮಿಂಗ್ ಆಗಲಿದೆ. ಇನ್ನು ಸಿನಿಮಾ ಸಕ್ಸಸ್ ಖುಷಿಯಲ್ಲಿ ನಿರ್ಮಾಪಕರು ರಜನಿಕಾಂತ್, ನಿರ್ದೇಶಕ ನೆಲ್ಸನ್ಗೆ ಲಾಭದಲ್ಲಿ ಪಾಲು ಹಾಗೂ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.


Click it and Unblock the Notifications











