ಭಾರತಕ್ಕೆ ವಾಪಸ್ ಆಗುತ್ತಿರುವ ರಜನಿಕಾಂತ್: ಸ್ವಾಗತಕ್ಕೆ ಸಜ್ಜಾದ ಅಭಿಮಾನಿಗಳು
ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ತಪಾಸಣೆ ಮುಗಿಸಿ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ. ಇಂದು ಜುಲೈ 8ರಂದು ತಲೈವಾ ಚೆನ್ನೈಗೆ ಆಗಮಿಸುತ್ತಿದ್ದಾರೆ. ಹೆಚ್ಚಿನ ಆರೋಗ್ಯ ತಪಾಸಣೆಗೆಂದು ರಜನಿಕಾಂತ್ ಜೂನ್ 19ರಂದು ವಿಶೇಷ ವಿಮಾನ ಮೂಲಕ ಅಮೆರಿಕಗೆ ತೆರಳಿದ್ದರು.
ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ಸೂಪರ್ ಸ್ಟಾರ್, ಮಗಳು ಐಶ್ವರ್ಯಾ ಮತ್ತು ಪತ್ನಿ ಲತಾ ಜೊತೆ ಅಮೆರಿಕಗೆ ತೆರಳಿದ್ರು. ಅಮೆರಿಕಗೆ ಹೋಗುವಾಗ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ನಿ ಲತಾ ಜೊತೆ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಅಮೆರಿಕಗೆ ತೆರಳಿದ ಬಳಿಕ ಮಗಳು ಐಶ್ವರ್ಯಾ ಜೊತೆ ಯುಎಸ್ ನ ಮೆಯೊ ಕ್ಲಿನಿಕ್ ಎದುರು ಕಾಣಿಸಿಕೊಂಡಿದ್ದರು.
ಕೆಲವು ವರ್ಷಗಳ ಹಿಂದೆ ರಜನಿಕಾಂತ್ ಮೂತ್ರ ಪಿಂಡ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎನ್ನುವ ಮಾಹಿತಿ ಇದೆ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕೆಂದು ವೈದ್ಯರು ಸೂಚಿಸಿದ ಬಳಿಕ ರಜನಿಕಾಂತ್ ರಾಜಕೀಯದಿಂದನೂ ಹಿಂದೆ ಸರಿದಿದ್ದರು. ಬಳಿಕ ಹೆಚ್ಚಿನ ಆರೋಗ್ಯ ತಪಾಸಣೆಗೆಂದು ದಿಢೀರ್ ವಿದೇಶಕ್ಕೆ ತೆರಳಿರುವುದು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಇದೀಗ ಸೂಪರ್ ಸ್ಟಾರ್ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ರಜನಿಕಾಂತ್ ಆರೋಗ್ಯವಾಗಿದ್ದು, ಭಾರತಕ್ಕೆ ವಾಪಸ್ ಆಗುತ್ತಿರುವ ವಿಚಾರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಚೆನ್ನೈಗೆ ವಿಶೇಷ ವಿಮಾನದಲ್ಲಿ ಬಂದಿಳಿಯುತ್ತಿರುವ ತಲೈವಾರನ್ನು ಸ್ವಾಗತಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ಸೂಪರ್ ಸ್ಟಾರ್ ಆರೋಗ್ಯದ ಬಗ್ಗೆ ನಟಿ ಕಸ್ತೂರಿ ಶಂಕರ್ ಅನುಮಾನ ವ್ಯಕ್ತಪಡಿಸಿದ್ದರು. ''ಮೇ ತಿಂಗಳ ಪ್ರಾರಂಭದಿಂದಲೇ ಭಾರತದಿಂದ ನೇರವಾಗಿ ಅಮೆರಿಕಾ ಬರುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ಯಾವುದೇ ವೈದ್ಯಕೀಯ ವಿನಾಯಿತಿಗಳನ್ನು ಸಹ ಕೊಟ್ಟಿಲ್ಲ. ಇಂತಹ ಸಮಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಪ್ರಯಾಣಿಸುವುದೇ? ಹಠಾತ್ ರಾಜಕೀಯಿಂದ ಹಿಂದೆ ಸರಿದರು....ಈಗ ಇದು....ರಜನಿ ಸರ್ ಸ್ಪಷ್ಟಪಡಿಸಿ...'' ಎಂದು ಕಸ್ತೂರಿ ಶಂಕರ್ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು.
ಬಳಿಕ ಸೂಪರ್ ಸ್ಟಾರ್ ಆರೋಗ್ಯದ ಬಗ್ಗೆ ಗೀತರಚನೆಕಾರ ವೈರಮುತ್ತು ಮಾಹಿತಿ ಹಂಚಿಕೊಂಡಿದ್ದರು. ''ಯುಎಸ್ನಿಂದ ರಜನಿ ಫೋನ್ ಮಾಡಿದ್ರು. ಆರೋಗ್ಯ ತಪಾಸಣೆ ಚೆನ್ನಾಗಿ ಸಾಗಿದೆ ಎಂದು ಹೇಳಿದರು. ಅದನ್ನು ಕೇಳಿ ಬಹಳಷ್ಟು ಖುಷಿ ಕೊಟ್ಟಿದೆ. ಅವರ ಧ್ವನಿಯಲ್ಲಿ ವಿಶ್ವಾಸ ಮತ್ತು ಆರೋಗ್ಯವಾಗಿದ್ದಾರೆ ಎನ್ನುವುದು ಕಾಣ್ತಿತ್ತು. ಅಭಿಮಾನಿಗಳಿಗಾಗಿ ಇದನ್ನು ಟ್ವೀಟ್ ಮಾಡಿ ತಿಳಿಸುತ್ತಿದ್ದೇನೆ'' ಎಂದು ಪೋಸ್ಟ್ ಹಾಕಿದ್ದರು. ಈ ಮಾಹಿತಿ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ತಂದಿತ್ತು.
ರಜನಿಕಾಂತ್ ಸದ್ಯ ಅಣ್ಣಾತೆ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಬಹುತೇಕ ಚಿತ್ರೀಕರಣ ಮುಗಿಸಿ ಸೂಪರ್ ಸ್ಟಾರ್ ಅಮೆರಿಕಗೆ ತೆರಳಿದ್ದರು. ಇದೀಗ ಭಾರತಕ್ಕೆ ವಾಪಸ್ ಆದ ಬಳಿಕ ಮತ್ತೆ ಅಣ್ಣಾತೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಸಿರುತೈ ಶಿವ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಕೀರ್ತಿ ಸುರೇಶ್, ನಯನತಾರ, ಖುಷ್ಬೂ, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.


Click it and Unblock the Notifications











