'ಸೂಪರ್ ಸ್ಟಾರ್' ಪಟ್ಟದ ಮೇಲೆ ಕಣ್ಣಿಟ್ರಾ ದಳಪತಿ? ಕಾಗೆ- ಹದ್ದು ಕಥೆ ಹೇಳಿ ರಜನಿಕಾಂತ್ ಗುದ್ದು?
ಕಾಲಿವುಡ್ ಸೂಪರ್ ಸ್ಟಾರ್ ಯಾರು? ಇದೇ ಚರ್ಚೆ ಈಗ ತಮಿಳು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡ್ತಿದೆ. ಬಹಳ ದಿನಗಳಿಂದ ದಳಪತಿ ವಿಜಯ್ ಅಭಿಮಾನಿಗಳು ನಮ್ಮ ನೆಚ್ಚಿನ ನಟನೇ ನಿಜವಾದ 'ಸೂಪರ್ ಸ್ಟಾರ್' ಎಂದು ಕ್ಯಾತೆ ತೆಗೆದಿದ್ದಾರೆ. ವಿಜಯ್ ಎಲ್ಲಾ ವಿಧದಲ್ಲೂ ತಲೈವಾನ ಮೀರಿಸಿದ್ದಾರೆ. ಹಾಗಾಗಿ ಆ ಟೈಟಲ್ ನಮ್ಮ ನಟನಿಗೆ ಬೇಕು ಎನ್ನುತ್ತಿದ್ದಾರೆ.
ಭಾರತೀಯ ಚಿತ್ರರಂಗಕ್ಕೆ ಒಬ್ಬರೇ ಸೂಪರ್ ಸ್ಟಾರ್. ಅದು ಒನ್ ಅಂಡ್ ಓನ್ಲಿ ರಜನಿಕಾಂತ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದು ವಿಜಯ್ ಹಾಗೂ ರಜನಿಕಾಂತ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾ ವಾರ್ಗೆ ನಾಂದಿ ಹಾಡಿದೆ. ಇದೆಲ್ಲದರ ನಡುವೆ ರಜನಿಕಾಂತ್ 'ಜೈಲರ್' ಸಿನಿಮಾ ಆಡಿಯೋ ಲಾಂಚ್ ವೇದಿಕೆಯಲ್ಲಿ ಮಾತನಾಡುತ್ತಾ ಕಾಗೆ, ಹದ್ದಿನ ಕಥೆ ಹೇಳಿದ್ದರು. ಆ ಮೂಲಕ ಸೂಪರ್ ಸ್ಟಾರ್ ಪಟ್ಟ ಅಷ್ಟು ಸುಲಭವಾಗಿ ಎಲ್ಲರಿಗೂ ಸಿಗಲ್ಲ ಅಂದಿದ್ದರು. ಈ ಮಾತು ದಳಪತಿ ಅಭಿಮಾನಿಗಳನ್ನು ಕೆಣಕಿದೆ. ರಜನಿಕಾಂತ್ ಸಂದರ್ಭಕ್ಕನುಗುಣವಾಗಿ ಹೇಳಿದರೂ ದಳಪತಿನ ಟಾರ್ಗೆಟ್ ಮಾಡಿ ಹೇಳಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಶುರುವಾಗಿದೆ.

ಈ ಹಿಂದೆ ಕೂಡ ಸಾಕಷ್ಟು ಜನ ಸೂಪರ್ ಸ್ಟಾರ್ ಬಿರುದನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಳ್ಳಲು ನೋಡಿದ್ದರು. ಆದರೆ ರಜನಿಕಾಂತ್ನ ಮೀರಿಸುವ ಸೂಪರ್ ಸ್ಟಾರ್ ಇಲ್ಲ ಎಂದು ಸುಮ್ಮನಾಗಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಈ ಬಿರುದು ಕೊಡಲು ಮುಂದಾದರೆ ನಟರೇ ಬೇಡ ಎನ್ನುತ್ತಿದ್ದರು.
ಅಷ್ಟಕ್ಕೂ ಏನಿದು ಕಿರಿಕ್?
ಇತ್ತೀಚಿನ ದಿನಗಳಲ್ಲಿ ದಳಪತಿ ವಿಜಯ್ ಕ್ರೇಜ್ ಕಾಲಿವುಡ್ನಲ್ಲಿ ರಜನಿಕಾಂತ್ ಕ್ರೇಜ್ನ ಮೀರಿಸಿದೆ. ಸಿನಿಮಾಗಳ ಗಳಿಕೆ, ಸಂಭಾವನೆ ವಿಚಾರದಲ್ಲೂ ವಿಜಯ್ ಮುಂದಿದ್ದಾರೆ. ಇದೇ ಕಾರಣಕ್ಕೆ ಕೆಲ ವಿಜಯ್ ಅಭಿಮಾನಿಗಳು ಇನ್ನುಮುಂದೆ ಸೂಪರ್ ಸ್ಟಾರ್ ರಜನಿಕಾಂತ್ ಅಲ್ಲ, ದಳಪತಿ ವಿಜಯ್ ಎಂದು ರಂಪಾಟ ಶುರು ಮಾಡಿದ್ದಾರೆ. ಸೂಪರ್ ಸ್ಟಾರ್ ಟೈಟಲ್ ವಿಜಯ್ ಕೊಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟಾಕಿದ್ದಾರೆ. ಇದನ್ನೇ ಮಾಧ್ಯಮಗಳ ಮೂಲಕ ಕೂಗಿ ಹೇಳುವ ಪ್ರಯತ್ನ ಮಾಡುತ್ತಿದ್ದರು.

ರಜನಿಕಾಂತ್ ಏನಂದ್ರು?
ಜೈಲರ್ ಆಡಿಯೋ ಲಾಂಚ್ ವೇದಿಕೆಯಲ್ಲಿ ಮಾತನಾಡಿದ ರಜನಿಕಾಂತ್, "ಮೊದಲ ಬಾರಿಗೆ 'ಹುಕುಂ' ಹಾಡಿನ ಸಾಹಿತ್ಯ ಕೇಳಿದಾಗ ನಾನು ಶಾಕ್ ಆಗಿದ್ದೆ. ಹಾಡಿನಲ್ಲಿ ಸೂಪರ್ ಸ್ಟಾರ್ ಪದವನ್ನು ತೆಗೆದುಹಾಕಲು ನಾನು ಕೇಳಿದ್ದೆ. ಸೂಪರ್ ಸ್ಟಾರ್ ಟೈಟಲ್ ನನಗೆ ಸದಾ ಕಷ್ಟ ಎನಿಸುತ್ತದೆ. ಸಣ್ಣದೊಂದು ಕಥೆ ಹೇಳ್ತೀನಿ ಒಂದು ಕಾಡಲ್ಲಿ ಹದ್ದು ಹಾಗೂ ಕಾಗೆ ಇರುತ್ತವೆ. ಕಾಗೆ ಯಾವಾಗಲೂ ಹದ್ದಿಗಿಂತ ಎತ್ತರದಲ್ಲಿ ಹಾರಲು ಪ್ರಯತ್ನಿಸುತ್ತದೆ. ಆದರೆ ಯಾವತ್ತಿಗೂ ಅದು ಸಾಧ್ಯವಿಲ್ಲ" ಎಂದಿದ್ದರು. ಇದನ್ನು ಕೇಳಿ ಕೆಲವರು ರಜನಿಕಾಂತ್ ಪರೋಕ್ಷವಾಗಿ ವಿಜಯ್ನ ಕುಟುಕಿದ್ದಾರೆ ಎಂದು ಅಂದುಕೊಂಡಿದ್ದರು.
ವಿಜಯ್ ಫ್ಯಾನ್ಸ್ ಸೈಲೆಂಟ್!
ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ಸ್ಟಾರ್ ಟೈಟಲ್ ವಿಜಯ್ಗೆ ಕೊಡಬೇಕು. ಈಗ ಅವರೇ ಸೂಪರ್ ಸ್ಟಾರ್ ಎನ್ನುತ್ತಿದ್ದರು ಈಗ ಸೈಲೆಂಟ್ ಆಗಿದ್ದಾರೆ. ರಜನಿಕಾಂತ್ ಆಡಿಯೋ ಲಾಂಚ್ ವೇದಿಕೆಯಲ್ಲಿ ಮಾತನಾಡಿದ್ದನ್ನು ಎಲ್ಲರೂ ಬೆಂಬಲಿಸಿದ್ದರು. ಅದೇ ಕಾರಣಕ್ಕೆ ವಿಜಯ್ ಅಭಿಮಾನಿಗಳು ಸುಮ್ಮನಾಗಿದ್ದಾರೆ. ನಾವು ಯಾವತ್ತೂ ಆ ರೀತಿ ಸೂಪರ್ ಸ್ಟಾರ್ ಟೈಟಲ್ ಕೇಳಲೇಯಿಲ್ಲ ಎನ್ನುವಂತೆ ಈಗ ಮಾತನಾಡುತ್ತಿದ್ದಾರೆ ಎಂದು ರಜನಿಕಾಂತ್ ಅಭಿಮಾನಿಗಳು ಹೇಳುತ್ತಿದ್ದಾರೆ.
ರಾಜಕೀಯಕ್ಕಾಗಿ ಈ ಕಿರಿಕ್?
ದಳಪತಿ ವಿಜಯ್ ಶೀಘ್ರದಲ್ಲೇ ಹೊಸ ಪಕ್ಷ ಕಟ್ಟಿ ತಮಿಳುನಾಡು ರಾಜಕೀಯರಂಗಕ್ಕೆ ಧುಮುಕುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ರಜನಿಗಿಂತ ತಾನೇ ದೊಡ್ಡ ನಟ ಎಂದು ಬಿಂಬಿಸಿಕೊಳ್ಳಲು ಬೇಕಂತಲೇ ವಿಜಯ್ ಸೂಪರ್ ಸ್ಟಾರ್ ಟೈಟಲ್ ಕ್ಯಾತೆಯನ್ನು ಪ್ರಚೋದಿಸುತ್ತಿದ್ದಾರೆ ಅನ್ನೋದು ಕೆಲವರ ವಾದ. 'ಲಿಯೋ' ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ರಜನಿಕಾಂತ್ ಹೇಳಿಕೆಗೆ ವಿಜಯ್ ಕೂಡ ಟಾಂಗ್ ಕೊಡುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಆದರೆ ಈ ಹಿಂದೆ ಸಾಕಷ್ಟು ಸಂದರ್ಭಗಳಲ್ಲಿ ರಜನಿಕಾಂತ್ ಒಬ್ಬರೇ ಸೂಪರ್ ಸ್ಟಾರ್ ಎಂದು ಸ್ವತಃ ವಿಜಯ್ ಕೂಡ ಹೇಳಿದ್ದರು.


Click it and Unblock the Notifications











