ಅನಾರೋಗ್ಯದ ನಡುವೆಯೂ ಅಪ್ಪು ಮನೆಗೆ ಬರುತ್ತಿದ್ದಾರೆ ರಜನೀಕಾಂತ್
ಸೂಪರ್ ಸ್ಟಾರ್ ರಜನೀಕಾಂತ್ ಕೆಲವು ದಿನಗಳ ಹಿಂದಷ್ಟೆ ಚೆನ್ನೈನ ಕಾವೇರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಅಪ್ಪು ನಿಧನ ಹೊಂದಿದಾಗ ರಜನೀಕಾಂತ್ ಇನ್ನೂ ಆಸ್ಪತ್ರೆಯಲ್ಲಿದ್ದರು, ಹಾಗಾಗಿ ಅವರು ಅಂತಿಮ ದರ್ಶನಕ್ಕೆ ಬರಲಾಗಿರಲಿಲ್ಲ.
ಆದರೆ ಈಗ ರಜನೀಕಾಂತ್ ಅಪ್ಪು ನಿವಾಸಕ್ಕೆ ಬರಲಿದ್ದಾರೆ. ಈ ಬಗ್ಗೆ ರಜನೀಕಾಂತ್ ಅವರ ಆತ್ಮೀಯ ಗೆಳೆಯ ರಾಜ್ ಬಹದ್ದೂರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇಂದು ರಜನೀಕಾಂತ್ ನಟಿಸಿರುವ 'ಅಣ್ಣಾತೆ' ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ಶೋ ನೋಡಲು ಆಗಮಿಸಿದ್ದ ರಾಜ್ ಬಹದ್ದೂರ್ ಮಾಧ್ಯಮಗಳೊಟ್ಟಿಗೆ ಮಾತನಾಡಿ, ''ಅಪ್ಪು ನಿಧನ ಹೊಂದಿದಾಗ ರಜನೀಕಾಂತ್ ಆಸ್ಪತ್ರೆಯಲ್ಲಿದ್ದ. ಅವರು ಗುಣಮುಖರಾದ ಕೂಡಲೇ ಬೆಂಗಳೂರಿಗೆ ಆಗಮಿಸಿ ಅಪ್ಪು ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ'' ಎಂದರು.
''ರಜನೀಕಾಂತ್ಗೆ ಪುನೀತ್ ಅಂದ್ರೆ ಪ್ರಾಣ. ರಜನೀ ಯಾವಾಗಲೇ ಬೆಂಗಳೂರಿಗೆ ಬಂದರು ನಾನೂ, ಅವನು ಅಣ್ಣಾವ್ರ ಮನೆಗೆ ಹೋಗುತ್ತಿದ್ದೆವು, ಅಣ್ಣಾವ್ರು ಕಾಲವಾದ ಮೇಲೂ ನಾವು ಅವರ ಮನೆಗೆ ಹೋಗುತ್ತಿದ್ದೆವು. ರಜನೀಕಾಂತ್ ಅನ್ನು ನೋಡಿದ ಕೂಡಲೇ ಅಪ್ಪು ಓಡಿ ಬಂದು ಅಂಕಲ್ ಎಂದು ತಬ್ಬಿಕೊಂಡು, ಕಾಲುಮುಟ್ಟಿ ಆಶೀರ್ವಾದ ಪಡೆಯುತ್ತಿದ್ದರು. ರಜನೀ ಸಹ ಅಪ್ಪು ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು'' ಎಂದರು ರಾಜ್ ಬಹದ್ದೂರ್.

''ಪುನೀತ್ ನಿಧನದ ಸುದ್ದಿ ಕೇಳಿ ರಜನೀಕಾಂತ್ ಬಹಳ ಬೇಸರಪಟ್ಟುಕೊಂಡ. ಅಷ್ಟು ಬೇಸರಪಟ್ಟುಕೊಂಡಿದ್ದನ್ನು ನಾನು ನೋಡಿಲ್ಲ. ''ಇನ್ನೂ ಚಿಕ್ಕ ವಯಸ್ಸು, ಇನ್ನೂ ಹುಡುಗ, ಚೆನ್ನಾಗಿ ಬೆಳೆಯುತ್ತಿದ್ದ, ಆದರೆ ದೇವರು ಅನ್ಯಾಯ ಮಾಡಿಬಿಟ್ರು ಎಂದು ರಜನೀಕಾಂತ್ ಹೇಳಿದ'' ಎಂದು ರಜನೀ ಹೇಳಿದ ಮಾತುಗಳನ್ನು ರಾಜ್ ಬಹದ್ದೂರ್ ಹಂಚಿಕೊಂಡಿದ್ದಾರೆ.
ರಜನೀಕಾಂತ್ ಆರೋಗ್ಯದ ಬಗ್ಗೆಯೂ ಮಾತನಾಡಿದ ರಾಜ್ ಬಹದ್ಧೂರ್, ''ರಜನೀ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಆರೋಗ್ಯವಾಗಿದ್ದಾನೆ. ಒಂದು ವಾರ ವಿಶ್ರಾಂತ ತೆಗೆದುಕೊಳ್ಳುವಂತೆ ವೈದ್ಯರು ಹೇಳಿದ್ದಾರೆ ಹಾಗಾಗಿ ಆತ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನೆ. ಯಾರೂ ಆತಂಕ ಪಡುವಂಥಹಾ ಅವಶ್ಯಕತೆ ಇಲ್ಲ. ಆತ ಗಟ್ಟಿಮುಟ್ಟಾಗಿದ್ದಾನೆ'' ಎಂದಿದ್ದಾರೆ ರಾಜ್ ಬಹದ್ಧೂರ್.
ಶಿವರಾಜ್ ಕುಮಾರ್ ಸಹ ನಿನ್ನೆಯಷ್ಟೆ ರಜನೀಕಾಂತ್ ಬಗ್ಗೆ ಮಾತನಾಡಿದ್ದರು. ''ಪುನೀತ್ ನಿಧನದ ವಿಷಯ ತಿಳಿದು ಆಸ್ಪತ್ರೆಯಲ್ಲಿದ್ದ ರಜನೀಕಾಂತ್ ತೀವ್ರವಾಗಿ ದುಃಖ ಪಟ್ಟುಕೊಂಡರಂತೆ. ಅವರ ಬಾಯಿಂದ ಮಾತೇ ಹೊರಡಲಿಲ್ಲ ಎಂದು ಅವರ ಪತ್ನಿ ಮತ್ತು ಮಗಳು ಹೇಳಿದರು. ಇಬ್ಬರೂ ನಮಗೆ ಕರೆ ಮಾಡಿ ಮಾತನಾಡಿದ್ದಾರೆ'' ಎಂದಿದ್ದರು.
ರಜನೀಕಾಂತ್ ಮತ್ತು ಡಾ.ರಾಜ್ಕುಮಾರ್ ನಡುವೆ ಗಾಢವಾದ ಬಾಂಧವ್ಯವಿತ್ತು. ರಜನೀಕಾಂತ್, ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದವರು. ರಾಜ್ಕುಮಾರ್ ಕುಟುಂಬದ ಎಲ್ಲ ಶುಭ ಕಾರ್ಯಕ್ರಮಗಳಿಗೂ ರಜನೀಕಾಂತ್ ತಪ್ಪದೇ ಹಾಜರಾಗುತ್ತಿದ್ದರು.


Click it and Unblock the Notifications











