ಮನೆಯಲ್ಲಿ ಪ್ರತಿಷ್ಠಾಪಿಸಿದ ರಜನಿಕಾಂತ್ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಸಂಕ್ರಾಂತಿ ಆಚರಿಸಿದ ಅಭಿಮಾನಿ
ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿ ಬಳಗ ಎಂಥದ್ದು ಎನ್ನುವುದು ಗೊತ್ತೇಯಿದೆ. ದೇಶ ವಿದೇಶಗಳಲ್ಲಿ ತಲೈವಾ ಅಭಿಮಾನಿಗಳಿದ್ದಾರೆ. ಬಾಲಿವುಡ್, ಸ್ಯಾಂಡಲ್ವುಡ್ ಸ್ಟಾರ್ ನಟ-ನಟಿಯರು ಸಹ ರಜನಿಕಾಂತ್ಗೆ ಅಭಿಮಾನಿಗಳು ಅನ್ನೋದು ಗೊತ್ತೆಯಿದೆ. ನೆಚ್ಚಿನ ನಟನಿಗಾಗಿ ದೇವಸ್ಥಾನ ಕಟ್ಟಿರುವ ಅಭಿಮಾನಿಗಳು ಇದ್ದಾರೆ.
ತಮ್ಮ ವಿಭಿನ್ನ ಸ್ಟೈಲ್, ನಟನೆ ಹಾಗೂ ಸರಳ ಸಜ್ಜನ ವ್ಯಕ್ತಿತ್ವದಿಂದ ರಜನಿಕಾಂತ್ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಾರೆ. ಮಧುರೆ ಮೂಲದ ಕಾರ್ತಿಮ್ ಎಂಬ ಅಭಿಮಾನಿಯೊಬ್ಬರು ತಮ್ಮ ಮನೆಯಲ್ಲೇ ನಟ ರಜನಿಕಾಂತ್ಗಾಗಿ ದೇವಸ್ಥಾನ ಕಟ್ಟಿಸಿದ್ದಾರೆ. ಆ ದೇವಸ್ಥಾನದಲ್ಲಿ 250 ಕೆಜಿ ತೂಕದ ತಲೈವಾ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ಆದಿಶೇಷನ ನೆರಳಿನಲ್ಲಿ ರಜನಿಕಾಂತ್ ಇರುವಂತೆ ಪ್ರತಿಮೆಯನ್ನು ಇಟ್ಟು ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಈ ವರ್ಷ ರಜನಿಕಾಂತ್ ವಿಗ್ರಹಕ್ಕೆ ಪೂಜೆ ಮಾಡಿ ಕಾರ್ತಿಕ್ ಸಂಕ್ರಾಂತಿ ಆಚರಿಸಿದ್ದಾರೆ.

ರಜನಿಕಾಂತ್ ಅಭಿಮಾನಿ ಕಾರ್ತಿಕ್ ಸುಗ್ಗಿ ಹಬ್ಬ ಆಚರಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಲೈವಾ ವಿಗ್ರಹಕ್ಕೆ ಅರಸಿನ, ಹಾಲಿನ ಅಭಿಷೇಕ ಮಾಡಿ ಹೂವಿನ ಹಾರ ಹಾಕಿ ಹಣ್ಣು, ನೈವೇದ್ಯ ಇಟ್ಟು ಆರತಿ ಬೆಳಕಿ ಪೂಜೆ ಮಾಡಿದ್ದಾರೆ. ಕಾರ್ತಿಕ್ ನೆಚ್ಚಿನ ನಟನಿಗಾಗಿ ದೇವಸ್ಥಾನ ನಿರ್ಮಿಸಿದ್ದು ಈ ಹಿಂದೆ ಸುದ್ದಿ ಆಗಿತ್ತು.
ನಮಗೆ ರಜನಿಕಾಂತ್ ದೇವರ ಸಮಾನ. ಹಾಗಾಗಿ ಅವರಿಗೆ ದೇವಸ್ಥಾನ ಕಟ್ಟಿಸಿರುವುದಾಗಿ ಕಾರ್ತಿಕ್ ಹೇಳಿದ್ದರು. ದೇವಸ್ಥಾನದಲ್ಲಿ ದೇವರನ್ನು ಪೂಜಿಸುವಂತೆ ಮನೆಮಂದಿಯೆಲ್ಲಾ ನಮ್ಮ ಮನೆಯಲ್ಲಿ ರಜನಿಕಾಂತ್ ಅವರನ್ನು ಆರಾಧಿಸುತ್ತೇವೆ. ಚಿಕ್ಕಂದಿನಿಂದಲೂ ನನಗೆ ರಜನಿಕಾಂತ್ ಸಿನಿಮಾಗಳು ಅಂದ್ರೆ ಬಹಳ ಇಷ್ಟ. ಅಪ್ಪ- ಅಮ್ಮನಿಗೂ ರಜನಿಕಾಂತ್ ಇಷ್ಟ. ನಾನು ಪ್ಯಾರಾ ಮಿಲಿಟರಿಯಲ್ಲಿ ಸೇವೆ ಸಲ್ಲಿಸುವಾಗಲೂ ತಲೈವಾ ಸಿನಿಮಾಗಳನ್ನು ತಪ್ಪದೇ ನೋಡುತ್ತಿದ್ದೆ. ರಜನಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಅವರೆಲ್ಲರಿಗಿಂತ ನಾನು ಭಿನ್ನ ಹೇಗೆ? ಎಂದು ತೋರಿಸಲು ದೇವಸ್ಥಾನ ನಿರ್ಮಿಸಿದ್ದಾಗಿ ಕಾರ್ತಿಕ್ ಹೇಳಿದ್ದರು.

ಇನ್ನು ರಜನಿಕಾಂತ್ ಸಿನಿಮಾಗಳ ವಿಚಾರಕ್ಕೆ ಬಂದರೆ 'ಜೈಲರ್' ಸಕ್ಸಸ್ ಬೆನ್ನಲ್ಲೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ತಲೈವಾ ವಿಶೇಷ ಪಾತ್ರದಲ್ಲಿ ನಟಿಸಿರುವ 'ಲಾಲ್ ಸಲಾಮ್' ಸಿನಿಮಾ ಮುಂದಿನ ತಿಂಗಳು ತೆರೆಗೆ ಬರುತ್ತಿದೆ. ಪುತ್ರಿ ಐಶ್ವರ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 90ರ ದಶಕದ ಕಥೆ ಚಿತ್ರದಲ್ಲಿದೆ. ಕ್ರಿಕೆಟ್ ಸುತ್ತಾ ಸಿನಿಮಾ ಕಥೆ ಸಾಗಲಿದ್ದು ಮೊಹಿದ್ದೀನ್ ಭಾಯ್ ಎನ್ನುವ ಪಾತ್ರದಲ್ಲಿ ರಜನಿಕಾಂತ್ ಮಿಂಚಿದ್ದಾರೆ. ಕ್ರಿಕೆಟ್ ದಂತಕತೆ ಕಪಿಲ್ ದೇವ್ ಸಹ ಕಾಣಿಸಿಕೊಂಡಿದ್ದಾರೆ.
ಜ್ಞಾನವೇಲ್ ನಿರ್ದೇಶನದಲ್ಲಿ ಸದ್ಯ 'ವೆಟೆಯಾನ್' ಚಿತ್ರದಲ್ಲಿ ಸೂಪರ್ ಸ್ಟಾರ್ ನಟಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಚಿತ್ರಕ್ಕಿದೆ. ಕೆಲ ದಿನಗಳ ಹಿಂದೆ ಬಂದಿದ್ದ ಚಿತ್ರದ ಟೀಸರ್ಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು.
ತಲೈವಾ ನಟನೆಯ 171ನೇ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಲಿದ್ದಾರೆ. ಇನ್ನು 'ಜೈಲರ್' ನಿರ್ದೇಶಕ ನೆಲ್ಸನ್ ಮತ್ತೆ ಸೂಪರ್ ಸ್ಟಾರ್ ಜೊತೆ ಕೆಲಸ ಮಾಡುವ ಸಾಧ್ಯತೆಯಿದೆ. ವೆಟೆಯಾನ್ ಸಿನಿಮಾ ಈ ವರ್ಷಾಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆಯಿದೆ. ಮೇ ವೇಳೆಗೆ ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.


Click it and Unblock the Notifications











