ಮುಗ್ಗರಿಸಿದ 'ಲಾಲ್ ಸಲಾಂ'.. ಪ್ರೇಕ್ಷಕರ 'ಕೊರತೆ'.. ಪ್ರದರ್ಶನ 'ರದ್ದು' ; 'ರಜಿನಿಕಾಂತ್' ಗೆ ಭಾರೀ ಮುಖಭಂಗ..!
ಸೂಪರ್ ಸ್ಟಾರ್ ರಜಿನಿಕಾಂತ್ ಸಿನಿಮಾಗಳೆಂದರೆ ಅಲ್ಲಿ ಹಬ್ಬದ ವಾತಾವರಣ ಇರುತ್ತೆ. ಅಭಿಮಾನದ ಜಾತ್ರೆ ನಡೆಯುತ್ತೆ. ಟಿಕೆಟ್ ಬೆಲೆ ಗಗನಕ್ಕೇರಿರುತ್ತೆ. ಇನ್ನೂ ರಜಿನಿಕಾಂತ್ ಸಿನಿಮಾ ಅಂದರೆ ವ್ಯಾಪಾರ - ವ್ಯವಹಾರ ಎಲ್ಲವೂ ಮೊದಲೇ ನಡೆದಿರುತ್ತೆ. ದಾಖಲೆಯ ಮೊತ್ತಕ್ಕೆ ಚಿತ್ರದ ಹಕ್ಕುಗಳು ಬಿಡುಗಡೆಗೆ ಮುನ್ನವೇ ಬಿಕರಿಯೂ ಆಗಿರುತ್ತವೆ. ಆದರೆ ಲಾಲ್ ಸಲಾಂ ಇದಕ್ಕೆ ತದ್ವಿರುದ್ಧ.
ಯಾಕೆಂದರೆ ಲಾಲ್ ಸಲಾಂ ಚಿತ್ರಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿಲ್ಲ. ಚಿತ್ರಮಂದಿರದ ಮುಂದೆ ಅಭಿಮಾನದ ಜಾತ್ರೆ ಕೂಡ ನಡೆದಿಲ್ಲ. ಒಂದರ್ಥದಲ್ಲಿ ಲಾಲ್ ಸಲಾಂ ರಜಿನಿಯ ತಾಕತ್ತಿಗೆ ಸವಾಲು ಹಾಕಿದೆ. ಯಾಕೆಂದರೆ ಪ್ರೇಕ್ಷಕರ ಕೊರತೆಯ ಕಾರಣಕ್ಕೆ ಅನೇಕ ಕಡೆ ಚಿತ್ರದ ಪ್ರದರ್ಶನವನ್ನ ರದ್ದು ಮಾಡಲಾಗಿದೆ.

ಹೌದು, ಅಚ್ಚರಿ ಅನಿಸಿದರೂ ಇದು ನಿಜಾ. ತಮಿಳುನಾಡಿನಲ್ಲಿ ಉತ್ತಮವಾದ ಆರಂಭ ಪಡೆದ ಚಿತ್ರಕ್ಕೆ, ಆಂಧ್ರದಲ್ಲಿ ಭಾರೀ ಭಯಂಕರ ಹಿನ್ನಡೆಯಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಅನೇಕ ಕಡೆ ಲಾಲ್ ಸಲಾಂ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನ ರದ್ದು ಮಾಡಲಾಗಿದೆ.
ಆಂಧ್ರ ಹಾಗೂ ತೆಲಂಗಾಣದಲ್ಲಿ ಹರಿದಾಡ್ತಿರುವ ಸುದ್ದಿಯ ಪ್ರಕಾರ, ಲಾಲ್ ಸಲಾಂ ಚಿತ್ರಕ್ಕೆ ಭಾರೀ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಿನ ಪ್ರೇಕ್ಷಕರಲ್ಲಿ ರಜಿನಿಯ ಮೊಯ್ದೀನ್ ಭಾಯ್ ಅವತಾರ ಕಣ್ತುಂಬಿಕೊಳ್ಳುವ ಯಾವ ಆಸಕ್ತಿಯೂ ಇಲ್ಲ.
ಇದಕ್ಕೆ ಪೂರಕವಾಗಿ ಹೈದ್ರಾಬಾದ್ ನ ಅನೇಕ ಕಡೆ ಲಾಲ್ ಸಲಾಂ ಚಿತ್ರದ ತೆಲುಗು ಅವತರಣಿಕೆಯ ಪ್ರದರ್ಶನ ರದ್ದಾಗಿವೆ. ಪ್ರೇಕ್ಷಕರ ಕೊರತೆಯಿಂದ ಚಿತ್ರ ಪ್ರದರ್ಶನ ಮಾಡಲು ಮುಂದಾಗದ ಅಲ್ಲಿನ ಚಿತ್ರಮಂದಿರದವರು ಮುಂಗಡ ಟಿಕೆಟ್ ಖರೀದಿಸಿದ್ದ ಬೆರಳಣಿಕೆಯಷ್ಟು ಜನಕ್ಕೆ ಹಣವನ್ನೂ ಮರುಪಾವತಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಇಂಥಹದ್ದೊಂದು ಪ್ರತಿಕ್ರಿಯೆಯನ್ನ ನಿರೀಕ್ಷೆ ಮಾಡದ ಚಿತ್ರಮಂದಿರದ ಮಾಲೀಕರು, ಸದ್ಯಕ್ಕೆ ದಿಕ್ಕೆಟ್ಟು ಕುಂತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ರಜಿನಿ ಮುಂದೆ ಮತ್ತೆ ಹೈದ್ರಾಬಾದ್ ನ ವಿತರಕರು ಹಾಗೂ ಪ್ರದರ್ಶಕರು ಧರಣಿ ಕುಳಿತರು ಕೂರಬಹುದು. ಆ ಎಲ್ಲ ಲಕ್ಷಣ ಸದ್ಯಕ್ಕೆ ದಟ್ಟವಾಗಿ ಕಂಡು ಬರುತ್ತಿವೆ ಎಂಬ ಅಭಿಪ್ರಾಯವನ್ನ ತೆಲುಗು ಉದ್ಯಮದವರು ಇದೇ ಸಮಯದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
40 ನಿಮಿಷದ ಪಾತ್ರ 40 ಕೋಟಿ
ಮೊಯ್ದೀನ್ ಭಾಯ್ ಪಾತ್ರದಲ್ಲಿ ಸೂಪರ್ಸ್ಟಾರ್ ರಜಿನಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೇವಲ 10-15 ನಿಮಿಷದ ಪಾತ್ರ ಅಲ್ಲ. ಹೆಚ್ಚು ಕಡಿಮೆ 40 ನಿಮಿಷಗಳ ಅವಧಿಯ ಪಾತ್ರದಲ್ಲಿ. ಆದರೂ, ರಜಿನಿಗೆ ಜೈಕಾರ ಹಾಕಲು ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲ. ಇದು ದುರಂತ ಅಲ್ಲದೇ ಇನ್ನೇನು..?

ಆಂಧ್ರ -ತೆಲಂಗಾಣದಲ್ಲಿ ಕೋಟಿ ಲೂಟಿ ಮಾಡಿದ್ದ ಜೈಲರ್
ಜೈಲರ್ ಚಿತ್ರ ತೆರೆಗೆ ಬಂದಾಗ ಆಂಧ್ರ ಹಾಗೂ ತೆಲಂಗಾಣದಲ್ಲಿ ಕಂಡು ಬಂದಿದ್ದ ವಾತಾವರಣವೇ ಬೇರೆ. ತಮ್ಮ ನೆಲದ ನಾಯಕ ಮೆಗಾ ಸ್ಟಾರ್ ಚಿರಂಜೀವಿಯನ್ನೇ ಅಲ್ಲಿನ ಪ್ರೇಕ್ಷಕರು ಆಗ ಕಡೆಗಣಿಸಿದ್ದರು. ಚಿರಂಜೀವಿ ಅಭಿನಯದ ಭೋಲಾ ಶಂಕರ್ ಮುಂದೆ ತೆರೆಗೆ ಬಂದಿದ್ದ ಜೈಲರ್ ಚಿತ್ರವನ್ನ ಗೆಲ್ಲಿಸಿದ್ದರು.
ರಜಿನಿ ಮುಡಿಗೆ 47 ಕೋಟಿಯ ಹಾರವನ್ನ ಹಾಕಿ ವಿಜಯೋತ್ಸವ ಆಚರಿಸಿದ್ದರು. ಲಾಲ್ ಸಲಾಂ ಚಿತ್ರಕ್ಕೂ ಇಂಥಹದ್ದೇ ಒಂದು ಸ್ವಾಗತ ಸಿಗುವ ನಿರೀಕ್ಷೆ ರಜಿನಿ ಪುತ್ರಿ ಐಶ್ವರ್ಯ ಹಾಗೂ ಚಿತ್ರತಂಡಕ್ಕೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ರಜಿನಿಗೆ ಭಾರೀ ಮುಖಭಂಗವೂ ಆಗಿದೆ.
ಒಟ್ಟಿನಲ್ಲಿ ಲಾಲ್ ಸಲಾಂ ಚಿತ್ರ ಆಂಧ್ರ ಹಾಗೂ ತೆಲಂಗಾಣದಲ್ಲಿ ಪ್ರೇಕ್ಷಕರನ್ನ ಸೆಳೆಯುವಲ್ಲಿ ವಿಫಲವಾಗಿದೆ. ಅನೇಕ ಕಡೆ ಪ್ರದರ್ಶನ ಕೂಡ ರದ್ದಾಗಿದೆ. ಇನ್ನೇನ್ ಇದ್ದರೂ ಪವಾಡ ನಡೆಯಬೇಕು. ಆಗಲೇ ಹೈದ್ರಾಬಾದ್ ಪ್ರಾಂತ್ಯದಲ್ಲಿ ಚಿತ್ರ ಚೇತರಿಸಿಕೊಳ್ಳಲು ಸಾಧ್ಯವೆಂಬ ಮಾತು ಕೇಳಿ ಬರುತ್ತಿದೆ.


Click it and Unblock the Notifications











