Rajinikanth: ರಾಜ್ಯೋತ್ಸವದಲ್ಲಿ ದುರ್ಯೋಧನನಾಗಿ ಅಬ್ಬರಿಸಿದ್ದ ತಲೈವಾ: ದಶಕಗಳ ಬಳಿಕ ಅದೇ ಆರ್ಭಟ ನೋಡಿದವರು ಫಿದಾ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 6 ದಿನಕ್ಕೆ ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ನೆಲ್ಸನ್ ಟೇಕಿಂಗ್, ರಜನಿಕಾಂತ್- ಶಿವರಾಜ್ಕುಮಾರ್ ಪರ್ಫಾರ್ಮನ್ಸ್ಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ 'ಜೈಲರ್' ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದೆ.
ಕೆಲ ದಿನಗಳ ಹಿಂದೆ ನಡೆದ 'ಜೈಲರ್' ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ರಜನಿಕಾಂತ್ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದರು. ಸುಮಾರು 1 ಗಂಟೆಗೂ ಅಧಿಕ ಕಾಲ ವೇದಿಕೆ ಏರಿ ಮಾತನಾಡಿದ್ದರು. ಈ ವೇಳೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಅದರಲ್ಲೂ ಬೆಂಗಳೂರಿನಲ್ಲಿದ್ದ ದಿನಗಳನ್ನು ನೆನಪಿಸಿಕೊಂಡಿದ್ದರು. ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದಾಗ ನಾಟಕಗಳಲ್ಲಿ ನಟಿಸಿದ ಅನುಭವವನ್ನು ಮೆಲುಕು ಹಾಕಿದ್ದರು. ಆ ವಿಡಿಯೋವೊಂದು ಈಗ ಸಖತ್ ವೈರಲ್ ಆಗುತ್ತಿದೆ. ರಾಜ್ಯೋತ್ಸವ ಸಂಭ್ರಮದಲ್ಲಿ ನಡೆದ ಕುರುಕ್ಷೇತ್ರ ನಾಟಕದಲ್ಲಿ ದುರ್ಯೋಧನನಾಗಿ ನಟಿಸಿದ್ದನ್ನು ತಲೈವಾ ಕಣ್ಣಿಗೆ ಕಟ್ಟಿದ್ದಂತೆ ವಿವರಿಸಿದ್ದರು.

"ಕೆಲವರು ಕಲಾವಿದರರಾಗಲು ಸಾಕಷ್ಟು ಕಷ್ಟಪಡುತ್ತಾರೆ. ಕೆಲವರು ಅಚಾನಕ್ ಆಗಿ ಆಗಿ ಸ್ಟಾರ್ಗಳಾಬಿಡುತ್ತಾರೆ. ಅವರಿಗೆ ಎಲ್ಲವೂ ಕೂಡಿ ಬರುತ್ತದೆ. ನನಗೂ ನನಾಗುವ ಆಸೆ ಇರಲಿಲ್ಲ. ಬಹಳ ಸಿನಿಮಾ ನೋಡುತ್ತಿದ್ದೆ. ಕಲಾವಿದರನ್ನಿ ಇಮಿಟೇಟ್ ಮಾಡುತ್ತಿದ್ದೆ. ಆದರೆ ನಟನಾಗುವ ಕನಸು ಕಂಡಿರಲಿಲ್ಲ. ಯಾಕಂದ್ರೆ ನನ್ನ ಇತಿಮಿತಿ ಗೊತ್ತಿತ್ತು. ಆಗಲೇ 85 ಕೆಜಿ ತೂಕ ಇದ್ದೆ. ಹೊಟ್ಟೆ ಮುಂದಕ್ಕೆ ಇತ್ತು. ಬಹಳ ಕಪ್ಪಗಿದ್ದೆ."
"ಚಿತ್ರರಂಗ ಆಗ ಮದ್ರಾಸ್ನಲ್ಲಿ ಇತ್ತು. ರಾಜ್ ಬಹದ್ದೂರ್, ನನ್ನ ಸ್ನೇಹಿತ. ಬಿಟಿಎಸ್ ಕಂಡೆಕ್ಟರ್. ಆತ ಶ್ರೀಮಂತ. ಆತನಿಗೆ ನಟನಾಗುವ ಖಯಾಲಿ ಇತ್ತು. ಕರ್ನಾಟಕದಲ್ಲಿ ನವೆಂಬರ್ ಸಮಯದಲ್ಲಿ ರಾಜ್ಯೋತ್ಸವ ನಡೆಯುತ್ತದೆ. ಆಗ ಸಾಕಷ್ಟು ನಾಟಕಗಳನ್ನು ಮಾಡುತ್ತಾರೆ. ಒಮ್ಮೆ ಕುರುಕ್ಷೇತ್ರ ನಾಟಕದಲ್ಲಿ ರಾಜ್ ಬಹದ್ಧೂರ್ ಭೀಷ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದ. ನಾಟಕ ಅಭ್ಯಾಸಕ್ಕೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ಅವರು ನಾಟಕ ಅಭ್ಯಾಸ ಮಾಡುವುದನ್ನು ನಾನು ನೋಡುತ್ತ ಕೂರುತ್ತಿದ್ದೆ. ಟೋಪಿ ಮುನಿಯಪ್ಪ ಎಂದು ನಾಟಕದ ಮೇಷ್ಟ್ರು ಇದ್ದರು"

"ಒಮ್ಮೆ ಜರಾಸಂಧವನ್ನು ನೀನು ಮಾಡು ಎಂದು ಮೇಷ್ಟ್ರು ಹೇಳಿದ್ದರು. ನಾನು ಆಗಲ್ಲ ಎಂದೆ. ಆಮೇಲೆ ಅವರು ಒಪ್ಪಿಸಿದರು. ನಾನು ಚೆನ್ನಾಗಿ ಮಾಡಿದೆ. ರಾಜ್ಬಹದ್ದೂರ್ ಶಾಕ್ ಆಗಿದ್ದ. ಬಳಿಕ ನಾನು ತಂಡದ ಸದಸ್ಯನಾದೆ. ನಾಟಕ ಪ್ರದರ್ಶನಕ್ಕೆ 3 ದಿನ ಇರುವಾಗ ದುರ್ಯೋಧನ ಪಾತ್ರಧಾರಿ ಜ್ವರ ಬಂದು ಮಲಗಿಬಿಟ್ಟ. ಹಾಗಾದರೆ ಯಾರು ಆ ಪಾತ್ರ ಮಾಡೋದು ಅಂತ ಬಂದಾಗ ಮೇಷ್ಟ್ರು ನನಗೆ ಮಾಡೋಕೆ ಹೇಳಿದರು. ನಾನು ನನಗೆ ಡೈಲಾಗ್ಸ್, ಹಾಡು ಗೊತ್ತಿಲ್ಲ ಎಂದೆ. ಆಮೇಲೆ ಎಲ್ಲಾ ಸೇರಿ ಒಪ್ಪಿಸಿದರು. ಅಭ್ಯಾಸ ಆರಂಭವಾಯಿತು"
"ದುರ್ಯೋಧನನ ಪಾತ್ರದ ಇಂಟ್ರೊಡಕ್ಷನ್ ಮಾಮೂಲಿಯಂತೆ ಬೇಡ ಎಂದೆ. ನಾನು ಒಂದು ರೀತಿಯಲ್ಲಿ ಸೀನ್ ವಿವರಿಸಿದೆ. ಆ ರೀತಿ ಮಾಡೋಣ ಎಂದೆ. ಮೇಷ್ಟ್ರ ಒಪ್ಪಿದರು. ರಾಜ್ ಬಹದ್ಧೂರ್ ಮಾತ್ರ ಬೇಡ, ಬೇಡ ಎನ್ನುತ್ತಿದ್ದ. ಅಭ್ಯಾಸ ಮಾಡುವುದು ಸುಲಭ. ವೇದಿಕೆಯಲ್ಲಿ ನೂರಾರು ಜನರ ಎದುರು ಮಾಡುವುದು ಕಷ್ಟ ಎನ್ನುತ್ತಿದ್ದ. ನಾನು ಓಪನಿಂಗ್ ಸೀನ್ನಲ್ಲಿ ಹಿಂದಿನಿಂದ ಮುಂದೆ ತಿರುಗಿ ಡೈಲಾಗ್ ಹೇಳಿ ಗದೆಯನ್ನು ಒಂದು ಕೈಯಿಂದ ಮತ್ತೊಂದು ಕೈಗೆ ಬದಲಾಯಿಸಿಕೊಂಡು ಗಹಗಹಿಸಿ ನಕ್ಕು ಸಿಂಹಾಸನ ಏರುವ ಸನ್ನಿವೇಶ. ರಾಜ್ ಬಹದ್ಧೂರ್ ಗದೆ ಬದಲಾಯಿಸಿಕೊಳ್ಳುವುದು ಬೇಡ ಎನ್ನುತ್ತಲೇ ಇದ್ದ. ಆದರೆ ನಾನು ಕೇಳಲಿಲ್ಲ. ವೇದಿಕೆಯಲ್ಲಿ ಮಾಡಿ ತೋರಿಸಿದೆ."
"ನಾಟಕದ ದಿನ ಬಹಳ ಚೆನ್ನಾಗಿ ನಟಿಸಿದೆ. ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ತು. ಬಳಿಕ ಮೇಕಪ್ ರೂಮ್ ಬಳಿ 50-60 ಜನ ಬಂದು ನನ್ನ ನಟನೆ ಮೆಚ್ಚಿ ಮಾತನಾಡಿಸಿ ಹೋದರು. ಅಂದು ರಾಜ್ ಬಹದ್ದೂರ್, ಅದ್ಭುತವಾಗಿ ನಟಿಸಿದೆ. ನೀನು ಮದ್ರಾಸ್ಗೆ ಹೋಗು. ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಸೇರು ಎಂದ. ಬಳಿಕ ಕುಡಿದು ಮನೆಗೆ ಹೋದಾಗ ಅಣ್ಣ ತಬ್ಬಿಕೊಂಡು ಬಹಳ ಚೆನ್ನಾಗಿ ನಟಿಸಿದೆ. ಈ ಕುಡಿತ ಮಾತ್ರ ಬಿಟ್ಟುಬಿಡು ಎಂದರು. ನಮ್ಮ ಅತ್ತಿಗೆ ಕುಂಬಳಕಾಯಿ ತಂದು ಇಳೆ ತೆಗೆದು ದೃಷ್ಟಿ ತೆಗೆದರು. ಅಲ್ಲಿಂದ ಮುಂದೆ ನಾನು ಮದ್ರಾಸ್ಗೆ ಬಂದೆ. ನಟನೆಗೆ ಕಲಿತೆ" ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ರಜನಿಕಾಂತರ್ ವೇದಿಕೆಯಲ್ಲಿ ದುರ್ಯೋಧನನ ಪಾತ್ರವನ್ನು ಅಭಿನಯಿಸಿ ತೋರಿಸಿದ ಪರಿಗೆ ನೆರೆದವರು ಮನಸೋತಿದ್ದರು. ಸ್ವತಃ ರಜನಿಕಾಂತ್ ಸಹೋದರ ಸತ್ಯ ನಾರಾಯಣ ಕೂಡ ಇದನ್ನು ವೇದಿಕೆ ಮುಂದೆ ಕೂತು ವೀಕ್ಷಿಸಿದ್ದಾರೆ. ರಜನಿಕಾಂರ್ ಪತ್ನಿ ಲತಾ, ಮಕ್ಕಳು ಎಲ್ಲರೂ ಆ ಸುಂದರ ಕ್ಷಣಗಳಿಗೆ ಸಾಕ್ಷಿ ಆಗಿದ್ದರು. ಆ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.


Click it and Unblock the Notifications











