ರಜನಿಕಾಂತ್ 'ವೆಟ್ಟೆಯಾನ್' ಚಿತ್ರಕ್ಕೆ ಹುಬ್ಬಳ್ಳಿ ಕನ್ನಡಿಗನ ಕಥೆಯೇ ಪ್ರೇರಣೆ?
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಕ್ರೇಜ್ ಶುರುವಾಗಿದೆ. ದಸರಾ ಸಂಭ್ರಮದಲ್ಲಿ ಮುಂದಿನ ವಾರ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ರಜನಿಕಾಂತ್ ಅಬ್ಬರಿಸಿದ್ದಾರೆ. ಪೊಲೀಸ್ ಎನ್ಕೌಂಟರ್ ಸರೀನಾ? ತಪ್ಪಾ? ಎನ್ನುವ ಚರ್ಚೆ ಚಿತ್ರದಲ್ಲಿದ ನಡೆದಿದೆ.
ಈ ಹಿಂದೆ 'ಜೈಭೀಮ್' ಚಿತ್ರ ಕಟ್ಟಿಕೊಟ್ಟಿದ್ದ ಜ್ಞಾನವೇಲ್ 'ವೆಟ್ಟೆಯಾನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಮರ್ಷಿಯಲ್ ಅಂಶಗಳ ಜೊತೆ ಒಂದೊಳ್ಳೆ ಸಂದೇಶವನ್ನು ತೆರೆಗೆ ತರುವಂತೆ ಕಾಣುತ್ತಿದೆ. ಚಿತ್ರದಲ್ಲಿ ಬಿಗ್ಬಿ ಅಮಿತಾಬ್ ಬಚ್ಚನ್ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ರಜನಿಕಾಂತ್ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಕೆಲವೊಮ್ಮೆ ಎನ್ಕೌಂಟರ್ ಅತ್ಯಗತ್ಯ ಎಂದು ನಂಬಿದ ಎಸ್ಪಿ ಅಜಿತ್ ಐಪಿಎಸ್ ನಂಬಿದ್ದಾನೆ. ಆದರೆ ಹೀರೊಯಿಸಂ ತೋರಿಸಲು ಪೊಲೀಸರು ಎನ್ಕೌಂಟರ್ ಅಸ್ತ್ರ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ ನ್ಯಾಯಮೂರ್ತಿ ಸತ್ಯದೇವ್ (ಅಮಿತಾಬ್ ಬಚ್ಚನ) ವಾದ. ಪೊಲೀಸರಿಂದ ಸಂಕಷ್ಟಕ್ಕೆ ಸಿಲುಕಿದವರ ಪರ ನಿಲ್ಲುವ ಪಾತ್ರದಲ್ಲಿ ನಟಿಸಿದ್ದಾರೆ.
ಒಂದರ್ಥದಲ್ಲಿ 'ವೆಟ್ಟೆಯಾನ್' ಸಿನಿಮಾ ಕಥೆ ಎಸ್ಪಿ ಅಜಿತ್ ಐಪಿಎಸ್ ವರ್ಸಸ್ ಸತ್ಯದೇವ್ ನಡುವಿನ ಸಂಘರ್ಷದ ಕಥೆ ಎನ್ನುವಂತೆ ಕಾಣುತ್ತದೆ. ಇದನ್ನು ಬಿಟ್ಟು ಸಾಕಷ್ಟು ವಿಚಾರಗಳ ಮೇಲೆ ಸಿನಿಮಾ ಬೆಳಕು ಚೆಲ್ಲುವಂತೆ ಕಾಣುತ್ತಿದೆ. ಪ್ರತಿಭಟನಾಕಾರರು "ಗಲ್ಲಿಗೇರಿಸಿ ಗಲ್ಲಿಗೇರಿಸಿ ಅಪರಾಧಿಯನ್ನು ಗಲ್ಲಿಗೇರಿಸಿ, ಬಂಧಿಸಿ ಬಂಧಿಸಿ ಅಪರಾಧಿಯನ್ನು ಬಂಧಿಸಿ" ಎಂದು ಘೋಷಣೆ ಕೂಗುವುದರೊಂದಿಗೆ ಟ್ರೈಲರ್ ಶುರುವಾಗುತ್ತದೆ.

"ಪೊರ್ಕಿಗಳನ್ನು ಎನ್ಕೌಂಟರ್ ಮಾಡಬೇಕು" ಎನ್ನುವ ಆಕ್ರೋಶವೂ ವ್ಯಕ್ತವಾಗುತ್ತದೆ. ವಾರದಲ್ಲಿ ಎನ್ಕೌಂಟರ್ ಮಾಡಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದಾಗ 3ನೇ ದಿನದಲ್ಲಿ ಇಲಾಖೆಗೆ ಒಳ್ಳೆ ಹೆಸರು ಬರುತ್ತದೆ ಎನ್ನುವ ಡೈಲಾಗ್ನೊಂದಿಗೆ ಎಸ್ಪಿ ಅಜಿತ್ ಐಪಿಎಸ್ ಎಂಟ್ರಿ ಆಗುತ್ತದೆ. ಅಷ್ಟಕ್ಕೂ ಆ ಕೊಲೆ ಹೇಗಾಯಿತು, ಮುಂದೆ ಪೊಲೀಸ್ ಇಲಾಖೆ ಅದನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಗೊತ್ತಾಗುತ್ತದೆ.
ಸದ್ಯ 'ವೆಟ್ಟೆಯಾನ್' ಟ್ರೈಲರ್ನಲ್ಲಿರುವ ಈ ಸನ್ನಿವೇಶ ಹೈದರಾಬಾದ್ ದಿಶಾ ಅತ್ಯಾಚಾರಿಗಳ ಎನ್ಕೌಂಟರ್ ಘಟನೆಯನ್ನು ನೆನಪಿಸುವಂತಿದೆ. ಪಶು ವೈದ್ಯೆ ದಿಶಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಪೊಲೀಸರು ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದರು. ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದವರು ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್. ಮುಂದೆ ಈ ಎನ್ಕೌಂಟರ್ ಬಗ್ಗೆ ಮಾನವ ಹಕ್ಕುಗಳ ಆಯೋಗ ವಿಚಾರಣೆ ಹಾಗೂ ತನಿಖೆ ನಡೆದಿತ್ತು.
ಇನ್ನು 2008ರಲ್ಲಿ ಹೈದರಾಬಾದ್ ವಾರಂಗಲ್ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಆ ಸಮಯದಲ್ಲಿ ವರಂಗಲ್ ಎಸ್ಪಿ ಆಗಿ ವಿಶ್ವನಾಥ್ ಸಜ್ಜನರ್ ಸೇವೆ ಸಲ್ಲಿಸಿದ್ದರು. ಆರೋಪಿಗಳನ್ನು ಸ್ಥಳ ಮಹಜರು ಮಾಡಲು ಕರೆದೊಯ್ದ ಸಮಯದಲ್ಲಿ ಆತ್ಮರಕ್ಷಣೆ ಹೆಸರಿನಲ್ಲಿ ಪಾತಕಿಗಳನ್ನು ಹೊಡೆದುರುಳಿಸಿದ್ದರು. ಒಟ್ಟಾರೆ ಇದೇ ವಿಶ್ವನಾಥ್ ಸಜ್ಜನರ್ ಅವರ ದಕ್ಷತೆ 'ವೆಟ್ಟೆಯಾನ್' ಕಥೆಗೆ ಸ್ಫೂರ್ತಿ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಬರೀ ಎನ್ಕೌಂಟರ್ ಸುತ್ತಾ 'ವೆಟ್ಟೆಯಾನ್' ಕಥೆ ಇರಲ್ಲ. ಇದರಲ್ಲಿ ಬೇರೆ ಬೇರೆ ವಿಚಾರಗಳು ಇವೆ. ಮುಖ್ಯವಾಗಿ ದೊಡ್ಡ ಉದ್ಯಮಿ ನಟರಾಜ್(ರಾನಾ ದಗ್ಗುಬಾಟಿ) ಪಾತ್ರವೂ ಹೈಲೆಟ್ ಆಗಿ ಕಾಣುತ್ತಿದೆ. ಒಂದು ಎಜ್ಯೂಕೇಷನ್ ಆಪ್ ಸಂಸ್ಥೆಯ ಮಾಲೀಕನಾಗಿ ರಾಣ ಕಾಣಿಸಿಕೊಂಡಿದ್ದು ಆತನ ವಿರುದ್ಧವೂ ಎಸ್ಪಿ ಅಜಿತ್ ಐಪಿಎಸ್ ಹೋರಾಟ ಚಿತ್ರದಲ್ಲಿದೆ. ಕಳ್ಳನ ಪಾತ್ರದಲ್ಲಿ ಫಹಾದ್ ಫಾಸಿಲ್ ಮಿಂಚಿದ್ದಾರೆ. ಆತನ ಪಾತ್ರ ಕಥೆಗೆ ಹೇಗೆ ತಿರುವು ಕೊಡುತ್ತದೆ ಕಾದು ನೋಡಬೇಕಿದೆ.
ಅನಿರುದ್ದ್ ರವಿಚಂದರ್ 'ವೆಟ್ಟೆಯಾನ್' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಇತ್ತೀಚೆಗೆ ರಜನಿಕಾಂತ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











