ರಜನಿಗೆ ವಿಲನ್ ಆಗುವ ಆಫರ್ ರಿಜೆಕ್ಟ್ ಮಾಡಿದ್ರು ರಕ್ಷಿತ್
ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ಮಾಡಬೇಕು ಎನ್ನುವುದು ಎಷ್ಟೋ ಕಲಾವಿದರ ಆಸೆ ಆಗುತ್ತಿರುತ್ತದೆ. ಎಷ್ಟೋ ಸ್ಟಾರ್ ಗಳು ಅವರ ಜೊತೆಗೆ ಒಂದು ಸಿನಿಮಾ ಸಿಕ್ಕರೆ ಸಾಕು ಎಂದು ಕಾಯುತ್ತಿದ್ದಾರೆ. ಹೀಗಿರುವಾಗ ಕನ್ನಡ ನಟ ರಕ್ಷಿತ್ ಶೆಟ್ಟಿ ಅವರಿಗೆ ರಜನಿಕಾಂತ್ ಜೊತೆಗೆ ನಟಿಸುವ ಅವಕಾಶ ಹುಡುಕಿಕೊಂಡು ಬಂದಿತ್ತು.
ರಕ್ಷಿತ್ ಶೆಟ್ಟಿಗೆ ರಜನಿಕಾಂತ್ ಜೊತೆಗೆ ನಟಿಸುವ ಚಾನ್ಸ್ ಸಿಕ್ಕರೆ ಬಿಡುವುದುಂಟೆ ಎಂದು ನೀವು ಅಂದುಕೊಳ್ಳಬಹುದು. ಆದರೆ, ತಮಗೆ ಬಂದ ಅವಕಾಶವನ್ನು ರಕ್ಷಿತ್ ಶೆಟ್ಟಿ ನಿರಾಕರಿಸಿದ್ದರು. ರಜನಿಕಾಂತ್ 'ಪೆಟ್ಟಾ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸುವ ಅವಕಾಶ ಬಂದಿದ್ದು, ಆದರೆ, ಒಂದು ಕಾರಣದಿಂದ ಅವರು ಆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ.
ಸದ್ಯ, 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ತಮಿಳು ಸಂದರ್ಶನ ಮಾತನಾಡಿರುವ ರಕ್ಷಿತ್ ತಮಿಳು ಆಫರ್ ವಿಷಯವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

'ಪೆಟ್ಟಾ' ಸಿನಿಮಾ ಆಫರ್ ಬಂದಿತ್ತು
ರಜನಿಕಾಂತ್ ನಾಯಕನಾಗಿ ನಟಿಸಿದ 'ಪೆಟ್ಟಾ' ಸಿನಿಮಾದಲ್ಲಿ ನಟಿಸುವ ಅವಕಾಶ ರಕ್ಷಿತ್ ಶೆಟ್ಟಿಗೆ ಬಂದಿತ್ತು. 'ಪೆಟ್ಟಾ' ಚಿತ್ರದ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಹಾಗೂ ರಕ್ಷಿತ್ ಶೆಟ್ಟಿ ಇಬ್ಬರು ಒಳ್ಳೆಯ ಸ್ನೇಹಿತರು. ಹೀಗಾಗಿ, ತಮ್ಮ ಸಿನಿಮಾದ ಒಂದು ಪಾತ್ರಕ್ಕಾಗಿ ರಕ್ಷಿತ್ ಶೆಟ್ಟಿರನ್ನು ಸಂಪರ್ಕ ಮಾಡಿದ್ದರು. ಆದರೆ, ರಕ್ಷಿತ್ ಶೆಟ್ಟಿ ಈ ಸಿನಿಮಾವನ್ನು ನಿರಾಕರಿಸಿದರು.

'ಅವನೇ ಶ್ರೀಮನ್ನಾರಾಯಣ' ಚಿತ್ರದ ಕೆಲಸ ಇತ್ತು
'ಪೆಟ್ಟಾ' ಚಿತ್ರದ ಸಮಯದಲ್ಲಿಯೇ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ಬ್ಯುಸಿ ಇದ್ದರು. 'ಅವನೇ ಶ್ರೀಮನ್ನಾರಾಯಣ' ತಮ್ಮ ಕನಸಿನ ಸಿನಿಮಾ ಆಗಿರುವ ಕಾರಣ ಅದಕ್ಕೆ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ಈ ಸಿನಿಮಾದ ಸಮಯದಲ್ಲಿಯೇ 'ಪೆಟ್ಟಾ'ದಲ್ಲಿ ನಟಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ರಕ್ಷಿತ್ ಆ ಸಿನಿಮಾದಿಂದ ಹಿಂದೆ ಬಂದರು.

ರಕ್ಷಿತ್ ಜಾಗಕ್ಕೆ ವಿಜಯ್ ಸೇತುಪತಿ ಬಂದ್ರು
ರಕ್ಷಿತ್ ಶೆಟ್ಟಿ ನಟಿಸಬೇಕಾಗಿದ್ದ ಪಾತ್ರಕ್ಕೆ ನಂತರ ವಿಜಯ್ ಸೇತುಪತಿಗೆ ಆಫರ್ ನೀಡಲಾಗಿತ್ತು. ಕಾರ್ತಿಕ್ ಸುಬ್ಬರಾಜು ಅವಕಾಶವನ್ನು ವಿಜಯ್ ಸೇತುಪತಿ ಒಪ್ಪಿಕೊಂಡರು. ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡರು. ಈ ಸಿನಿಮಾ ವಿಜಯ್ ಸೇತುಪತಿ ಮತ್ತಷ್ಟು ಹೆಸರು, ಅಭಿಮಾನಿ ಬಹಳವನ್ನು ತಂದುಕೊಟ್ಟಿತು. 'ಪೆಟ್ಟಾ' ಸಿನಿಮಾ ಹಿಟ್ ಆಯ್ತು.

ಮುಂದೆ ಒಳ್ಳೆಯ ಅವಕಾಶ ಸಿಗಬಹುದು
ರಜನಿಕಾಂತ್ ಅವರ ಜೊತೆಗೆ ಕಾಣಿಸಿಕೊಳ್ಳುವುದು ಒಳ್ಳೆಯ ಅವಕಾಶ. ಆದರೆ, ಆ ಸಮಯದಲ್ಲಿ ನಾನು ಆ ಸಿನಿಮಾ ಮಾಡಿದ್ದರೆ, 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಇನ್ನಷ್ಟು ತಡ ಆಗುತ್ತಿತ್ತು. ಆ ಸಿನಿಮಾಗಾಗಿ ನಾನು ಅಭಿಮಾನಿಗಳನ್ನು ಮತ್ತಷ್ಟು ಕಾಯಿಸಲು ಇಷ್ಟ ಪಡಲಿಲ್ಲ. ಹಾಗಾಗಿ ಆ ಅವಕಾಶ ಬಿಟ್ಟೆ. ಮುಂದೆ ಇಂತಹ ಒಳ್ಳೆಯ ಅವಕಾಶ ಮತ್ತೆ ಸಿಗಬಹುದು ಎಂದು ರಕ್ಷಿತ್ ತಿಳಿಸಿದ್ದಾರೆ.


Click it and Unblock the Notifications











