'ಗೇಮ್ ಚೇಂಜರ್' ಬಿಡುಗಡೆಗೆ ವಿಘ್ನ; ಅಡ್ಡಕತ್ತರಿಯಲ್ಲಿ ಸಿಲುಕಿದ ನಿರ್ದೇಶಕ ಶಂಕರ್
ರಾಮ್ಚರಣ್ ನಟನೆಯ 'ಗೇಮ್ ಚೇಂಜರ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆ ಆಗಬೇಕಿದೆ. ಆದರೆ ಕೊನೆ ಕ್ಷಣದಲ್ಲಿ ಸಂಕಷ್ಟ ಎದುರಾಗಿದೆ. ಸಿನಿಮಾ ಬಿಡುಗಡೆ ಆಗುವುದು ಕಷ್ಟ ಎನ್ನುವಂತಹ ಸ್ಥಿತಿ ಎದುರಾಗಿದೆ. ಅದಕ್ಕೆ ಕಾರಣ ತಮಿಳಿನ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ. ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾದ ಬಳಿಕ ಏನಿದು ಸಮಸ್ಯೆ ಎಂದು ಸಿನಿರಸಿಕರು ಬೇಸರಗೊಂಡಿದ್ದಾರೆ.
ತಮಿಳು ನಿರ್ದೇಶಕ ಶಂಕರ್ ಚೊಚ್ಚಲ ತೆಲುಗು ಸಿನಿಮಾ 'ಗೇಮ್ ಚೇಂಜರ್'. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ಅಂತೂ ಇಂತೂ ಈಗ ಬಿಡುಗಡೆಗೆ ಸಜ್ಜಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಚಿತ್ರದಲ್ಲಿ ತಂದೆ ಮಗನಾಗಿ ದ್ವಿಪಾತ್ರದಲ್ಲಿ ರಾಮ್ಚರಣ್ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ.

ಶಂಕರ್ ನಿರ್ದೇಶನದ ಸಿನಿಮಾ ಆಗಿರುವುದರಿಂದ ತಮಿಳುನಾಡಿನಲ್ಲಿ ಕೂಡ ದೊಡ್ಡದಾಗಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಆದರೆ ಸಿನಿಮಾ ಬಿಡುಗಡೆಗೆ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಅಡ್ಡಗಾಲು ಹಾಕಿದೆ. ಕಮಲ್ ಹಾಸನ್ ನಟನೆಯ 'ಇಂಡಿಯನ್-3' ಚಿತ್ರವನ್ನು ಶಂಕರ್ ಪೂರ್ಣಗೊಳಿಸಬೇಕಿದೆ. ಅದಕ್ಕೂ ಮುನ್ನ 'ಗೇಮ್ ಚೇಂಜರ್' ಚಿತ್ರ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ತಮಿಳು ನಿರ್ಮಾಪಕರ ಸಂಘವನ್ನು ಲೈಕಾ ಕೋರಿದೆ.
'ಇಂಡಿಯನ್ -2' ಹಾಗೂ ಪಾರ್ಟ್-3 ಚಿತ್ರಗಳನ್ನು ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಪಾರ್ಟ್-2 ಹೀನಾಯವಾಗಿ ಸೋತಿದ್ದರಿಂದ ಪಾರ್ಟ್-3 ಪಕ್ಕಕ್ಕಿಟ್ಟು 'ಗೇಮ್ ಚೇಂಜರ್' ಸಿನಿಮಾ ಮುಗಿಸಿದ್ದರು. ಆದರೆ ಇದ್ದಕ್ಕಿದ್ದಂತೆ 'ಇಂಡಿಯನ್ -3' ಸಿನಿಮಾ ಮುಗಿಸಿ ಕೊಡಬೇಕು ಎಂದು ಲೈಕಾ ಬೇಡಿಕೆ ಇಟ್ಟಿದೆ. ಆದರೆ ಯಾವುದೇ ಕಾರಣಕ್ಕೆ ತಮಿಳುನಾಡಿನಲ್ಲಿ 'ಗೇಮ್ ಚೇಂಜರ್' ಬಿಡುಗಡೆ ತಡೆಯಲು ಸಾಧ್ಯವಿಲ್ಲ ಎನ್ನಲಾಗ್ತಿದೆ. ಕಾನೂನಾತ್ಮಕವಾಗಿಯೂ ಲೈಕಾ ಬೇಡಿಕೆಗೆ ಪುರಸ್ಕಾರ ಸಿಗುವುದಿಲ್ಲ ಎನ್ನುವ ವಾದ ಕೇಳಿಬರ್ತಿದೆ.

ತಮಿಳುನಾಡಿನದ ಸಿನಿಮಾ ಪ್ರದರ್ಶಕರು ಕೂಡ ಲೈಕಾ ಸಂಸ್ಥೆ ನಡೆಯನ್ನು ಟೀಕಿಸುತ್ತಿದ್ದಾರೆ. 'ಗೇಮ್ ಚೇಂಜರ್' ಸಿನಿಮಾ ಬಿಡುಗಡೆಗೆ ಬಹಳ ದಿನಗಳಿಂದ ತಯಾರಿ ನಡೀತಿದೆ. ಸಾಕಷ್ಟು ಈವೆಂಟ್ ಮಾಡಿ ಚಿತ್ರದ ಪ್ರಚಾರ ಮಾಡಲಾಗಿತ್ತು. ಆಗ ಸುಮ್ಮನಿದ್ದ ಲೈಕಾ ಸಿನಿಮಾ ಬಿಡುಗಡೆಗೆ ನಾಲ್ಕೈದು ದಿನ ಬಾಕಿ ಇರುವಾಗ ಚಕಾರ ಎತ್ತಿರುವುದು ಸರಿಯಲ್ಲ. ಇದರಲ್ಲಿ ದುರುದ್ದೇಶ ಬಿಟ್ಟರೆ ಬೇರೇನು? ಇಲ್ಲ ಎಂದು ಹೇಳುತ್ತಿದ್ದಾರೆ.
ಚೆನ್ನೈನಲ್ಲಿ 'ಗೇಮ್ ಚೇಂಜರ್' ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ನಡೀತಿದೆ. ದಳಪತಿ ವಿಜಯ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರುತ್ತಾರೆ ಎನ್ನಲಾಗ್ತಿದೆ. ಶಂಕರ್ ಹಾಗೂ ದಿಲ್ ರಾಜು ಜೊತೆ ವಿಜಯ್ ಉತ್ತಮ ಒಡನಾಟ ಹೊಂದಿದ್ದಾರೆ, ಹೈದರಾಬಾದ್ನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್ಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅತಿಥಿಯಾಗಿ ಬಂದಿದ್ದರು, ಕಾರ್ಯಕ್ರಮ ಯಶಸ್ವಿಯಾಗಿತ್ತು. ಅದೇ ರೀತಿ ಚೆನ್ನೈ ಈವೆಂಟ್ ಗೆಲ್ಲಿಸೋ ಪ್ರಯತ್ನ ನಡೀತಿದೆ.
ಬಹುಕೋಟಿ ವೆಚ್ಚದಲ್ಲಿ 'ಗೇಮ್ ಚೇಂಜರ್' ಚಿತ್ರ ನಿರ್ಮಾಣವಾಗಿದೆ. ಚಿತ್ರದಲ್ಲಿ ರಾಮ್ಚರಣ್ ಜೊತೆ ಕಿಯಾರಾ ಅಡ್ವಾನಿ ನಾಯಕಿಯಾಗಿ ನಟಿಸಿದ್ದಾರೆ. ಸುನಿಲ್, ಬ್ರಹ್ಮಾನಂದಂ, ಎಸ್. ಜೆ ಸೂರ್ಯ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. 75 ಕೋಟಿ ಸುರಿದು ಚಿತ್ರದ ಹಾಡುಗಳನ್ನು ಸೆರೆಹಿಡಿದಿರುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಕತೆ ಚಿತ್ರದಲ್ಲಿದೆ.
IPS ಅಧಿಕಾರಿ ಹಾಗೂ ಭ್ರಷ್ಟ ರಾಜಕಾರಣಿ ನಡುವಿನ ಪೈಪೋಟಿಯ ಕಥೆ ಚಿತ್ರದಲ್ಲಿದೆ. ಜೊತೆಗೆ ಒಂದು ಸೇಡಿನ ಎಳೆಯೂ ಕತೆಯಲ್ಲಿದೆ. ಭಿನ್ನ ವಿಭಿನ್ನ ಗೆಟಪ್ಗಳಲ್ಲಿ ಚರಣ್ ಮಿಂಚಿದ್ದಾರೆ. ಟ್ರೈಲರ್ ಹಿಟ್ ಆಗಿದೆ. ತಮನ್ ಸಂಗೀತ ಚಿತ್ರಕ್ಕಿದೆ. ಇನ್ನು ಕಮಲ್ ಹಾಸನ್ ನಟಿಸಿರುವ 'ಇಂಡಿಯನ್-3' ನೇರವಾಗಿ ಓಟಿಟಿಗೆ ಬರುತ್ತದೆ ಎನ್ನಲಾಗಿತ್ತು. ಆದರೆ ಚಿತ್ರಮಂದಿರದಲ್ಲೇ ಬಿಡುಗಡೆ ಪ್ರಯತ್ನ ಶುರುವಾಗಿದೆ.


Click it and Unblock the Notifications











