ಕಮಲ್ ಹಾಸನ್ ನಂಬಿ ಕಂಗಾಲಾದ ಅಭ್ಯರ್ಥಿಗಳು ; ಉಳಗನಾಯಗನ್ ಕಟ್ಟಿದ 'ಎಂಎನ್ಎಂ' ಪಕ್ಷದಲ್ಲೇ ಭುಗಿಲೆದ್ದ ಆಕ್ರೋಶ
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ.
ಹಾಗಂಥ ಇಲ್ಲಿ ಎಲ್ಲರೂ ಗೆದ್ದಿಲ್ಲ. ತಮಿಳುನಾಡಿನ ಜನ ಯಾರನ್ನು ಸುಲಭವಾಗಿ ತಲೆ ಮೇಲೆ ಹೊತ್ತು ಮೆರೆಸಿಲ್ಲ. ಹೀಗಾಗಿಯೇ ದಳಪತಿ ವಿಜಯ್ ಮೇಲೀಗ ಎಲ್ಲರ ಕಣ್ಣಿದೆ. ವಿಜಯ್ ಜನನಾಯಕನಾಗಿ ಹೊರ ಹೊಮ್ಮುತ್ತಾರಾ..? ಅಥವಾ ಕೇವಲ ಬೆಳ್ಳಿತೆರೆಯ ಕಥಾನಾಯಕನಾಗಿರುತ್ತಾರಾ..? ಎನ್ನುವುದಕ್ಕೆ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆಯಾದರು ಸದ್ಯ ಕಮಲ್ ಹಾಸನ್ ವಿರುದ್ಧ
ಜನ ಕೆಂಡ ಕಾರುತ್ತಿದ್ದಾರೆ. ಉಳಗನಾಯಗನ್ ಕಮಲ್ ಹಾಸನ್ ಮತ್ತು ಅವರ ಅಭಿಮಾನಿಗಳ ಪಾಲಿಗಿದು ನಿಜಕ್ಕೂ ಮುಜುಗರದ ವಿಷಯ.

ಹೌದು, ಆಗಲೇ ಹೇಳಿದಂತೆ 2026ರ ವಿಧಾನಸಭಾ ಚುನಾವಣೆಗೆ ಪಕ್ಕದ ತಮಿಳುನಾಡಿನಲ್ಲಿ ವೇದಿಕೆ ಸಿದ್ಧವಾಗಿದೆ. ವಿಜಯ್ ಅಖಾಡಕ್ಕೆ ಧುಮುಕಿಯಾಗಿದೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಕಮಲ್ ಹಾಸನ್ ಆಕ್ಟರ್, ಡೈರೆಕ್ಟರ್ ಮಾತ್ರ ಅಲ್ಲ. ಪೊಲಿಟಿಕಲ್ ಲೀಡರ್ ಕೂಡ ಹೌದು.
2018ರಲ್ಲಿ 'ಮಕ್ಕಳ್ ನೀಧಿ ಮೈಯಂ' ಎಂಬ ಪಕ್ಷವನ್ನು ಕಮಲ್ ಸ್ಥಾಪನೆ ಮಾಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ 38 ಕ್ಷೇತ್ರಗಳಿಂದ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ.. ಫಲಿತಾಂಶ ಮಾತ್ರ ಶೂನ್ಯ.
2021ರಲ್ಲಿನ ತಮಿಳುನಾಡು ವಿಧಾನ ಸಭಾ ಚುನಾವಣೆಯ ಫಲಿತಾಂಶ ಕೂಡ ಭಿನ್ನವಾಗಿರಲಿಲ್ಲ. ಖುದ್ದು ಕಮಲ್ ಹಾಸನ್ ಸೋಲಿನ ದರ್ಶನ ಮಾಡಬೇಕಾಯ್ತು.
2024ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆಗೆ ಬೆಂಬಲ ನೀಡಿದ ಕಮಲ್ ಹಾಸನ್ ಸದ್ಯ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಇಷ್ಟೇ ಅಲ್ಲ ಈ ಚುನಾವಣೆಯಲ್ಲಿ ಕಮಲ್ ಹಾಸನ್ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ, ಡಿಎಂಕೆಗೆ ಬೇಷರತ್ ಬೆಂಬಲ ಘೋಷಿಸಿದ್ದಾರೆ.

ಇವರ ಈ ನಡೆ ಈಗ ಹಲವರನ್ನು ಕೆರಳಿಸಿದೆ. ಯಾಕೆಂದರೆ, ರಾಜ್ಯಸಭಾ ಸದಸ್ಯರಾಗಿದ್ದರು ಕೂಡ ಕಮಲ್ ಹಾಸನ್ ಈ ಬಾರಿಯ ಚುನಾವಣೆಯ ಅಖಾಡಕ್ಕೆ ಬರುತ್ತಾರೆ ಎನ್ನುವ ನಿರೀಕ್ಷೆ ಹಲವರಲ್ಲಿತ್ತು. ತಾವು ಸ್ಫರ್ಧೆ ಮಾಡದಿದ್ದರೂ ಕೂಡ ಬೇರೆಯವರಿಗೆ ಅವಕಾಶವನ್ನಾದರೂ ಕೊಡುತ್ತಾರೆ ಎನ್ನುವ ಭರವಸೆ ಇತ್ತು. ಈ ಭರವಸೆಯೊಂದಿಗೆ ಹಲವರು ಕಮಲ್ ಹಾಸನ್ ಅವರ 'ಮಕ್ಕಳ್ ನೀಧಿ ಮೈಯಂ' ಪಕ್ಷದ ಅಭ್ಯರ್ಥಿಗಳು ತಯಾರಿಯನ್ನು ಮಾಡಿಕೊಳ್ಳುತ್ತಿದ್ದರು.
ಇನ್ನು ಕೆಲ ದಿನಗಳ ಹಿಂದೆಯಷ್ಟೇ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿಗಳಿಂದ ಅರ್ಜಿ ಶುಲ್ಕವನ್ನು ಕೂಡ 'ಮಕ್ಕಳ್ ನೀಧಿ ಮೈಯಂ' ಪಕ್ಷ ಸಂಗ್ರಹ ಮಾಡಿತ್ತು. 2026ರ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದ ಸುಮಾರು 60ಕ್ಕೂ ಹೆಚ್ಚು ಆಕಾಂಕ್ಷಿಗಳು ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಕನಸಿನೊಂದಿಗೆ 50,000 ರೂಪಾಯಿಗಳ ಅರ್ಜಿ ಶುಲ್ಕವನ್ನು ಪಾವತಿಸಿದ್ದರು.
ಆದರೆ, ಈಗ ಇದ್ದಕ್ಕಿದ್ದಂತೆ ಕಮಲ್ ಹಾಸನ್ ಈ ಚುನಾವಣೆಯ ರಣಕಣದಿಂದ ಹಿಂದೆ ಸರಿದಿದ್ದಾರೆ. ತಮ್ಮ ಪಕ್ಷವನ್ನು ಈ ಬಾರಿಯ ಚುನಾವಣೆಯ ಕಣಕ್ಕಿಳಿಸದೇ ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಬೆಂಬಲ ನೀಡಿದ್ದಾರೆ. ಇದರಿಂದ ಆಘಾತಕ್ಕೊಳಗಾಗಿರುವ ಅಭ್ಯರ್ಥಿಗಳು ಸದ್ಯ ಕಮಲ್ ಹಾಸನ್ ವಿರುದ್ಧ ಸಿಡಿದೆದ್ದಿದ್ದಾರೆ. ನಮ್ಮ ಹಣ ನಮಗೆ ಮರಳಿ ಕೊಡಿ ಎಂದು ಪಕ್ಷದ ಕಚೇರಿಗೆ ಅಲೆಯುತ್ತಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಈ ಹಣ ನೀಡಿದ್ದೆವು. ಈಗ ಪಕ್ಷವೇ ಸ್ಪರ್ಧಿಸುತ್ತಿಲ್ಲ ಎಂದ ಮೇಲೆ ನಮ್ಮ ಹಣವನ್ನು ನಮಗೆ ವಾಪಸ್ ನೀಡುವುದು ನ್ಯಾಯಯುತವಲ್ಲವೇ? ಎಂದು ಕಮಲ್ ಹಾಸನ್ ಅವರಿಗೆ ಪ್ರಶ್ನೆ ಮಾಡುತ್ತಿರುವ ಅಭ್ಯರ್ಥಿಗಳು, ಕಮಲ್ ಹಾಸನ್ ನಮಗೆಲ್ಲಾ ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಈ ಬೆಳವಣಿಗೆಯಿಂದ ಕಮಲ್ ಹಾಸನ್ ಅವರ ರಾಜಕೀಯ ನೈತಿಕತೆಯ ಕುರಿತು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. 2018ರಲ್ಲಿ ಪಾರದರ್ಶಕ ರಾಜಕೀಯದ ಭರವಸೆಯೊಂದಿಗೆ ಪಕ್ಷ ಸ್ಥಾಪಿಸಿದ ಕಮಲ್ ಹಾಸನ್ ಈಗ ಅಭ್ಯರ್ಥಿಗಳ ಹಣದ ವಿಷಯದಲ್ಲಿ ಮೌನ ವಹಿಸಿರುವುದರಿಂದ ವಿರೋಧಿಗಳಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಕಮಲ್ ಹಾಸನ್ ಅವರು ಕೇವಲ ಡಿಎಂಕೆ ಪರ ಪ್ರಚಾರ ಮಾಡುವ "ಸ್ಟಾರ್ ಪ್ರಚಾರಕ"ರಾಗಿ ಸೀಮಿತರಾಗುತ್ತಿದ್ದಾರೆಯೇ ಎಂಬ ಚರ್ಚೆ ತಮಿಳುನಾಡು ರಾಜಕೀಯದಲ್ಲಿ ಜೋರಾಗಿ ಕೇಳಿಬರುತ್ತಿದೆ.


Click it and Unblock the Notifications











