ಬಿಲ್ಕಿಸ್ ಬಾನು ಬಗ್ಗೆ ಖುಷ್ಬು ಟ್ವೀಟ್: ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ದೇಶದಾದ್ಯಂತ ಚರ್ಚೆಯಲ್ಲಿರುವ ಬಿಲ್ಕಿಸ್ ಬಾನು ಪ್ರಕರಣದ ಬಗ್ಗೆ ನಟಿ, ರಾಜಕಾರಣಿ ಖುಷ್ಬು ಸುಂದರ್ ಟ್ವೀಟ್ ಮಾಡಿದ್ದಾರೆ. ಆದರೆ ಇವರ ಟ್ವೀಟ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಲ್ಕಿಸ್ ಬಾನು ಅತ್ಯಾಚಾರಿಗಳಿಗೆ ಕ್ಷಮೆ ನೀಡಿ ಶಿಕ್ಷೆಯಿಂದ ಬಿಡುಗಡೆ ಮಾಡಿರುವ ಕುರಿತಂತೆ ಆಕ್ರೋಶ ಹೊರಹಾಕಿರುವ ಖುಷ್ಬು ಸುಂದರ್, ''ಅತ್ಯಾಚಾರ, ಹಲ್ಲೆ, ಕ್ರೌರ್ಯ ಅನುಭವಿಸಿ ಜೀವನ್ಮರಣ ಹೋರಾಟಕ್ಕೆ ಸಿಲುಕಿದ್ದ ಮಹಿಳೆಗೆ ನ್ಯಾಯ ಸಿಗಬೇಕು. ಆ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ ಮುಕ್ತವಾಗಿ ಹೋಗಬಾರದು. ಹಾಗೆ ಮಾಡಿದರೆ ಅದು ಮನುಕುಲಕ್ಕೆ ಮತ್ತು ಹೆಣ್ಣಿಗೆ ಮಾಡಿದ ಅವಮಾನ. ಬಿಲ್ಕಿಸ್ ಬಾನು ಅಥವಾ ಯಾವುದೇ ಮಹಿಳೆಯೇ ಆಗಿರಲಿ ರಾಜಕೀಯ ಮತ್ತು ಸಿದ್ಧಾಂತಗಳನ್ನು ಮೀರಿ ಬೆಂಬಲ ನೀಡಬೇಕು, ನ್ಯಾಯ ಸಿಗಬೇಕು'' ಎಂದಿದ್ದಾರೆ.
ಬಿಲ್ಕಿಸ್ ಬಾನುಗೆ ಬೆಂಬಲ ನೀಡಿಯೇ ಖುಷ್ಬು ಟ್ವೀಟ್ ಮಾಡಿದ್ದಾರಾದರೂ ಹಲವು ನೆಟ್ಟಿಗರು ಖುಷ್ಬು ಸುಂದರ್ ವಿರುದ್ಧ ಕಮೆಂಟ್ ಮಾಡಿದ್ದಾರೆ. ಅದಕ್ಕೆ ಕಾರಣ ಅವರ ಪಕ್ಷ.

ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆಯನ್ನು ಹೆಚ್ಚಾಗಿ ಸಂಭ್ರಮಿಸುತ್ತಿರುವುದು ಬ ಇಜೆಪಿ ಬೆಂಬಲಿದ ಸಂಘಟನೆಗಳ ಸದಸ್ಯರು ಮತ್ತು ಸ್ವತಃ ಬಿಜೆಪಿ ಸದಸ್ಯರು. ಹಾಗಾಗಿ ಬಿಜೆಪಿ ಸದಸ್ಯೆಯಾಗಿರುವ ಖುಷ್ಬು ಸುಂದರ್ ಮಾಡಿರುವ ಟ್ವೀಟ್ ಬಗ್ಗೆ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.
''ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆಯನ್ನು ಸಂಭ್ರಮಿಸುತ್ತಿರುವ ನಿಮ್ಮದೇ ಪಕ್ಷದ ನಾಯಕರನ್ನೇಕೆ ನೀವು ಟ್ಯಾಗ್ ಮಾಡಿಲ್ಲ. ಅವರಿಗೆ ಕ್ಷಮೆ ನೀಡಿದವರನ್ನೇಕೆ ನೀವು ಟ್ಯಾಗ್ ಮಾಡಿಲ್ಲ. ನೀವು ಬಿಜೆಪಿ ಸಂಸ್ಖೃತಿಯ ವಿರುದ್ಧ ಟ್ವೀಟ್ ಮಾಡುತ್ತಿದ್ದೀರ ಎಂಬ ಕಾರಣಕ್ಕೆ ಅವರನ್ನು ಟ್ಯಾಗ್ ಮಾಡಿಲ್ಲವೇ? ಘಟನೆ ನಡೆದು ಒಂದು ವಾರದ ಬಳಿಕ ನೀವು ಅರೆ ಮನಸ್ಸಿನಿಂದ ಈ ಟ್ವೀಟ್ ಅನ್ನು ಮಾಡಿದ್ದೀರ'' ಎಂದು ನೆಟ್ಟಿಗರೊಬ್ಬರು ತಪರಾಕಿ ಹಾಕಿದ್ದಾರೆ.
''ಬಹಳ ತಡವಾಯ್ತು. ಹೀಗೆ ತಡವಾಗಿ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮ್ಮ ವಿಶ್ವಾಸಾರ್ಹತೆಯನ್ನು ನೀವು ಕಳೆದುಕೊಂಡಿರಿ. ಆದರೆ ಈ ಟ್ವೀಟ್ ಮಾಡುವ ಮೂಲಕ ನಿಮ್ಮ ಪಕ್ಷದ ಇತರೆ ನಾಯಕರು, ಮಹಿಳಾ ಸದಸ್ಯೆಯರಿಗಿಂತಲೂ ನೀವು ಭಿನ್ನ ಎಂಬುದನ್ನು ತೋರಿಸಿದ್ದೀರಿ. ಒಂದು ಆಶಾ ಕಿರಣ ಮೂಡುಸಿದ್ದೀರಿ'' ಎಂದಿದ್ದಾರೆ ಮತ್ತೊಬ್ಬ ನೆಟ್ಟಿಗರು.
90ರ ದಶಕದಲ್ಲಿ ಉಚ್ರಾಯ ಸ್ಥಿತಿಯಲ್ಲಿದ್ದ ನಟಿ ಖುಷ್ಬು ಸುಂದರ್ 2000 ಬಳಿಕ ಸಿನಿಮಾ ಅವಕಾಶಗಳು ಕಡಿಮೆಯಾದಾಗ ರಾಜಕೀಯ ಸೇರಿ ಸಕ್ರಿಯ ರಾಜಕಾರಿಣಿಯಾದರು. 2010 ರಲ್ಲಿ ಮೊದಲ ಬಾರಿಗೆ ಡಿಎಂಕೆ ಪಕ್ಷ ಸೇರಿದ ಖುಷ್ಬು ಅವರನ್ನು ಆಗ ಮಾಜಿ ಸಿಎಂ ಕರುಣಾನಿಧಿ ಅವರೇ ಸ್ವಾಗತಿಸಿದ್ದರು. ನಾಲ್ಕು ವರ್ಷಗಳ ಬಳಿಕ ಡಿಎಂಕೆ ಬಿಟ್ಟು ಕಾಂಗ್ರೆಸ್ ಸೇರಿದ ಖುಷ್ಬುಗೆ ಅಲ್ಲಿಯೂ ಅದ್ಧೂರಿ ಸ್ವಾಗತವೇ ಸಿಕ್ಕಿತ್ತು.
ಆದರೆ 2020 ರಲ್ಲಿ ಖುಷ್ಬು ಮತ್ತೆ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು. ಇದೀಗ ಬಿಜೆಪಿ ಸದಸ್ಯೆಯಾಗಿರುವ ಖುಷ್ನು ಕಳೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನಪ್ಪಿದ್ದಾರೆ.
2002 ರ ಗೋಧ್ರ ಹತ್ಯಾಕಾಂಡದ ಸಮಯದಲ್ಲಿ ಬಿಲ್ಕಿಸ್ ಬಾನು ಅನ್ನು ಅತ್ಯಾಚಾರ ಮಾಡಲಾಗಿತ್ತು. ಆಕೆಯ ಮೇಲೆ ಅತ್ಯಾಚಾರ ಮಾಡಿದ 11 ಮಂದಿಯನ್ನು ಇತ್ತೀಚೆಗಷ್ಟೆ ಗೋದ್ರಾ ಸಬ್ ಜೈಲಿನಿಂದ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಹೀಗೆ ಹೊರಬಂದ ಅತ್ಯಾಚಾರಿಗಳನ್ನು ಹಾರ ಹಾಕಿ ಸನ್ಮಾನಿಸಿ ಸ್ವಾಗತಿಸಲಾಗಿದೆ. ಬಿಜೆಪಿಗೆ ಬೆಂಬಲ ನೀಡುವ ಸಂಘಟನೆಗಳ ಸದಸ್ಯರು ಈ ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾರೆ. ಈ ಅತ್ಯಾಚಾರಿಗಳಿಗೆ ಕ್ಷಮೆ ನೀಡಿರುವುದು ಗುಜರಾತ್ನ ಬಿಜೆಪಿ ಸರ್ಕಾರ.


Click it and Unblock the Notifications











