ತಮಿಳುನಾಡಲ್ಲಿ "ನಿಮ್ಮ ಅಪ್ಪನಿಗೆ ಹುಟ್ಟಿದ್ರೆ ಬಂದ್ ಮಾಡ್ಸ" ಎಂದು ಡೈಲಾಗ್ ಬಿಟ್ಟಿದ್ದ ರಿಷಬ್: ವಿಡಿಯೋ ವೈರಲ್
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಕಳೆದ ಆರೇಳು ತಿಂಗಳಿನಿಂದ ಸದ್ದು ಮಾಡ್ತಾನೆ ಇದೆ. ಕನ್ನಡ ಮಾತ್ರವಲ್ಲದೇ ಹಲವು ಭಾಷೆಗಳಿಗೆ ಡಬ್ ಆಗಿ ಸಕ್ಸಸ್ ಕಂಡಿದೆ. ಇನ್ನು ಚಿತ್ರಕ್ಕೆ ಸಿಕ್ಕ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ರಜನಿ, ಕಮಲ್ ಸೇರಿದಂತೆ ದಿಗ್ಗಜರೇ ರಿಷಬ್ ಶೆಟ್ಟಿಗೆ ಬಹುಪರಾಕ್ ಎಂದಿದ್ದಾರೆ. ಸದ್ಯ ಪ್ರೀಕ್ವೆಲ್ ಕೆಲಸಗಳು ನಡೀತಿದ್ದು ಶೀಘ್ರದಲ್ಲೇ ಸೆಟ್ಟೇರಲಿದೆ.
ಇಟಲಿ ಹಾಗೂ ಸ್ಪ್ಯಾನಿಷ್ ಭಾಷೆಗಳಿಗೆ ಸಿನಿಮಾ ಡಬ್ ಆಗ್ತಿದ್ದು ಶೀಘ್ರದಲ್ಲೇ ಯೂರೋಪ್ ದೇಶಗಳಲ್ಲಿ ಸಿನಿಮಾ ತೆರೆಕಾಣಲಿದೆ. ಕಳೆದ ವರ್ಷ ದಸರಾ ಸಂಭ್ರಮದಲ್ಲಿ ಸೆಪ್ಟೆಂಬರ್ 30ಕ್ಕೆ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿತ್ತು. ನೋಡ ನೋಡುತ್ತಲೇ ಪರಭಾಷೆಗಳಿಂದ ಡಬ್ ಮಾಡಿ ರಿಲೀಸ್ ಮಾಡುವಂತೆ ಬೇಡಿಕೆ ಶುರುವಾಯಿತು. ಎರಡೇ ವಾರದಲ್ಲಿ ಸಿನಿಮಾ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಸೂಪರ್ ಹಿಟ್ ಆಯಿತು. ರಿಷಬ್ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಎನಿಸಿಕೊಂಡರು. ಇದೀಗ ರಿಷಬ್ಗೆ ಅಕ್ಕಪಕ್ಕದ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮನೆಗೆ ಆಹ್ವಾನಿಸಿ, ರಿಷಬ್ ಶೆಟ್ಟಿಗೆ ಸನ್ಮಾನ ಮಾಡಿದ್ದರು. ಅದ್ಭುತ ಸಿನಿಮಾ, ಉತ್ತಮ ಪರಿಶ್ರಮ ಎಂದು ಕೊಂಡಾಡಿದ್ದರು. ತಮಿಳುನಾಡಿನಲ್ಲಿ ಕೆಲವೇ ದಿನಗಳ ಹಿಂದೆ ನಡೆದ ಬಿಹೈಂಡ್ವುಡ್ಸ್ ಗೋಲ್ಡ್ ಐಕಾನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಭಾಗಿ ಆಗಿದ್ದರು. 'ಕಾಂತಾರ' ಚಿತ್ರದ ಸನ್ನಿವೇಶಗಳನ್ನು ರೀ ಕ್ರಿಯೇಟ್ ಮಾಡಿ ಟ್ರಿಬ್ಯೂಟ್ ನೀಡಲಾಗಿತ್ತು. ರಿಷಬ್ ಶೆಟ್ಟಿಗೆ 'ಸೆನ್ಸೇಷನ್ ಆಫ್ ಇಂಡಿಯನ್ ಸಿನಿಮಾ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ರಿಷಬ್ ಶೆಟ್ಟಿ ಕನ್ನಡದಲ್ಲಿ ನಮಸ್ಕಾರ ಹೇಳಿ, ತಮಿಳಿನಲ್ಲಿ ಮಾತನಾಡಿದರು. ಚಿತ್ರಕ್ಕೆ ಎಲ್ಲರಿಂದ ಸಿಕ್ಕ ರೆಸ್ಪಾನ್ಸ್ಗೆ ಧನ್ಯವಾದ ತಿಳಿಸಿದರು. ಸಾಕಷ್ಟು ಜನ ಖ್ಯಾತ ಕಲಾವಿದರು ತಂತ್ರಜ್ಞರು ನನಗೆ ಕರೆ ಮಾಡಿ ಅಭಿನಂದಿಸಿದರು. ಆದರೆ ಎಲ್ಲರಿಗಿಂತ ಮೊದಲು ರಜನಿ ಸರ್ ಗೋಲ್ಡ್ ಮೆಡಲ್ ಕೊಟ್ಟರು. ಅದು ಮರೆಯಲಾಗದ ಪ್ರಶಸ್ತಿ. ರಜನಿ ಸರ್, ಕಮಲ್ ಸರ್ ಇಬ್ಬರು ಇಷ್ಟ ಅಂದ್ರು. ಇನ್ನು ವೇದಿಕೆಯಲ್ಲಿ ಡೈಲಾಗ್ ಹೇಳುವಂತೆ ಕೇಳಿದಾಗ ತಮಿಳಿನಲ್ಲಿ ನಾನು ಡಬ್ ಮಾಡಲಿಲ್ಲ. ಬೇಕಿದ್ದರೆ ಕನ್ನಡದಲ್ಲೇ ಡೈಲಾಗ್ ಹೇಳ್ತಿನಿ ಅಂದ್ರು.

"ಹೀಗೆ ಮುಂದುವರಿತಾ ಇದ್ರೆ, ನಿಮ್ಮ ಆಚರಣೆ, ಆಡಂಬರ ಎಲ್ಲಾ ಬಂದ್ ಮಾಡ್ಸಿಬಿಡ್ತೀನಿ.(ಕಿಶೋರ್ ಡೈಲಾಗ್) ನಿನ್ನ ಅಪ್ಪನಿಗೆ ಹುಟ್ಟಿದ್ರೆ ಬಂದ್ ಮಾಡ್ಸ. ಇಲ್ಲಿಂದ ಜೀವಂತ ಹೇಗೆ ಹೋಗ್ತೀಯಾ ನಾನು ನೋಡ್ತೇನೆ" ಎಂದು ಡೈಲಾಗ್ ಹೇಳಿ ನೆರೆದವರ ಗಮನ ಸೆಳೆದರು. ನಯನತಾರ, ಅಲ್ಲು ಅರ್ಜುನ್, ಮಣಿರತ್ನಂ, ತ್ರಿಶಾ, ಎ. ಆರ್ ರಹಮಾನ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಈ ಪ್ರಶಸ್ತಿ ಸಮಾರಂಭದಲ್ಲಿ ಭಾಗಿ ಆಗಿದ್ದರು. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಿದೆ.
ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡಿದ 'ಕಾಂತಾರ' ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಎನಿಸಿಕೊಂಡಿತ್ತು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಈ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದರು. ಅಚ್ಯುತ್ ಕುಮಾರ್, ಕಿಶೋರ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದರು. ಬುಕ್ಮೈ ಶೋ, ಐಎಂಡಿಬಿ ರೇಟಿಂಗ್ನಲ್ಲೂ ಸಿನಿಮಾ ದಾಖಲೆ ಬರೆದಿತ್ತು. ಮುಂದಿನ ವರ್ಷ ಚಿತ್ರದ ಪ್ರೀಕ್ವೆಲ್ ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications











