"ಯಾವುದೇ ದಾಖಲೆ ಬರೆಯುವುದು ನಟ, ನಿರ್ದೇಶಕ, ನಿರ್ಮಾಪಕನ ಕೈಯಲ್ಲಿ ಇಲ್ಲ"; ರಿಷಬ್ ಶೆಟ್ಟಿ
ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳ ರೆಕಾರ್ಡ್ಸ್ ಬಗ್ಗೆ ಅಭಿಮಾನಿಗಳು ಮಾತನಾಡುತ್ತಾರೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ವೀವ್ಸ್, ಲೈಕ್ಸ್ ಅಂತೆಲ್ಲಾ ಸಾಕಷ್ಟು ದಾಖಲೆಗಳ ಬಗ್ಗೆ ಚರ್ಚೆ ನಡೆಯುತ್ತದೆ. ಇನ್ನು ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆಯೂ ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಈ ದಾಖಲೆಗಳೆಲ್ಲಾ ಫಿಲ್ಮ್ ಮೇಕರ್ಸ್ ಕೈಯಲ್ಲಿ ಇಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
'ಕಾಂತಾರ- 1' ಸಿನಿಮಾ ಮುಗಿಸಿ ರಿಷಬ್ ಶೆಟ್ಟಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಇದೇ ಚಿತ್ರದ ಗುಂಗಿನಲ್ಲಿ ಇದ್ದರು. ಅದಕ್ಕೂ ಮುನ್ನ 2 ವರ್ಷ 'ಕಾಂತಾರ' ಚಿತ್ರಕ್ಕೆ ಕೆಲಸ ಮಾಡಿದ್ದರು. ಶೀಘ್ರದಲ್ಲೇ 'ಜೈ ಹನುಮಾನ್' ಸಿನಿಮಾ ಆರಂಭಿಸಲಿದ್ದಾರೆ. ಇದೆಲ್ಲದರ ನಡುವೆ ಇತ್ತೀಚೆಗೆ ಚೆನ್ನೈನಲ್ಲಿ ನಡೆದ 'ಬಿಹೈಂಡ್ವುಡ್ಸ್ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ರಿಷಬ್ ಭಾಗಿ ಆಗಿದ್ದರು.

ತಮಿಳುನಾಡಿನಲ್ಲಿ ಕೂಡ 'ಕಾಂತಾರ' ಸರಣಿ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದೆ. ಆದರೆ ಚಾಪ್ಟರ್-1 ಪ್ರಚಾರದಲ್ಲಿ ರಿಷಬ್ ಶೆಟ್ಟಿ ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಕರೂರು ಕಾಲ್ತುಳಿತ ಪ್ರಕರಣದ ಬೆನ್ನಲ್ಲೇ ಸಿನಿಮಾ ಬಿಡುಗಡೆ ಆಗಿತ್ತು. ಇಂತಹ ಸಮಯದಲ್ಲಿ ಅಲ್ಲಿಗೆ ಹೋಗಿ ಸಿನಿಮಾ ಪ್ರಚಾರ ಮಾಡದಿರಲು ಚಿತ್ರತಂಡ ನಿರ್ಧರಿಸಿತ್ತು. 'ಬಿಹೈಂಡ್ವುಡ್ಸ್ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ. ಚಿತ್ರಕ್ಕೆ ತಮಿಳು ಪ್ರೇಕ್ಷಕರ ಕೊಟ್ಟ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.
ವೇದಿಕೆಯಲ್ಲಿ 'ಗ್ರೇಟೆಸ್ಟ್ ಕಲ್ಟ್ ಮೂವಿ ಮೇಕರ್ ಗೋಲ್ಡ್ ಮೆಡಲ್' ರಿಷಬ್ ಶೆಟ್ಟಿ ಅವರಿಗೆ ಸಿಕ್ಕಿದೆ. ಪದಕ ಸ್ವೀಕರಿಸಿ ಸಾಕಷ್ಟು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. 'ತುಗ್ಲಕ್' ಚಿತ್ರದಲ್ಲಿ ನಾಲಿಗೆ ಕಚ್ಚಿ ತಲೆ ತಿರುಗಿಸಿ ರಿಷಬ್ ಶೆಟ್ಟಿ ನಟನೆಯ ವೀಡಿಯೋ ಮೀಮ್ ಆಗಿ ವೈರಲ್ ಆಗ್ತಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ರಿಷಬ್ ಮಾತನಾಡಿದ್ದಾರೆ. ನಟ ಯಶ್ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದಾರೆ.
ಕೊನೆಯಲ್ಲಿ ಮಾತನಾಡುತ್ತಾ "ಯಾವುದೇ ಸಿನಿಮಾ ದಾಖಲೆ ಬರೆಯುವುದು ನಟ, ನಿರ್ದೇಶಕ, ನಿರ್ಮಾಪಕನ ಕೈಯಲ್ಲಿ ಇಲ್ಲ. ಅದೆಲ್ಲವೂ ಪ್ರೇಕ್ಷಕರಿಂದ ಮಾತ್ರ ಸಾಧ್ಯ, ನಮ್ಮ ಸಿನಿಮಾ ಇಟ್ಟುಕೊಂಡು ಅವ್ರು ದಾಖಲೆ ಬರೆಯುತ್ತಾರೆ ಅಷ್ಟೇ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಆ ಎಲ್ಲಾ ಕ್ರೆಡಿಟ್ ಪ್ರೇಕ್ಷಕರಿಗೆ ಸಲ್ಲಬೇಕು ಎಂದಿದ್ದಾರೆ. 'ಕಾಂತಾರ' ಜರ್ನಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ.
ನಟ ಯಶ್ ಅವರನ್ನು ಬಹಳ ಹಿಂದೆ ಭೇಟಿ ಮಾಡಿದ್ದಾಗಿ ರಿಷಬ್ ಶೆಟ್ಟಿ ನೆನಪಿಸಿಕೊಂಡಿದ್ದಾರೆ. ಆಗಿನ್ನು ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಯಶ್ ಅವ್ರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಸಮಯ. ಆಗ ಅಪ್ಪು ವೆಂಕಟೇಶ್ ಬಳಿ ಇಬ್ಬರೂ ಸ್ಟಂಟ್ಸ್ ಕಲಿಯುತ್ತಿದ್ದೆವು. ಪ್ರಸನ್ನ ಥಿಯೇಟರ್ ಮುಂಭಾಗದಲ್ಲಿ ತಾಲೀಮು ನಡೀತಿತ್ತು. ಅಲ್ಲಿ ಮೊದಲ ಬಾರಿಗೆ ಯಶ್ ಅವರನ್ನು ಭೇಟಿ ಮಾಡಿದ್ದು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಬಳಿಕ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಸಿನಿಮಾ ಮಾಡಿದಾಗ ಅವ್ರು ಸಿನಿಮಾ ನೋಡುವಂತೆ ಕೇಳಲು ಹೋದಾಗಲೇ ಅವರನ್ನು ವೈಯಕ್ತಿಕವಾಗಿ ಭೇಟಿ ಆಗಿದ್ದು ಎಂದಿದ್ದಾರೆ. 'ಕಾಂತಾರ' ಚಿತ್ರಕ್ಕೆ 'KGF' ದಾರಿ ತೋರಿಸಿಕೊಟ್ಟಿತ್ತು. ಹಾಗಾಗಿ ಅವ್ರು ನಂಗೆ ಸೀನಿಯರ್ ಎಂದು ರಿಷಬ್ ಹೇಳಿದ್ದಾರೆ.
ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಿದ್ದ 'ಕಾಂತಾರ- 1' ಸಿನಿಮಾ 800 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ತಿಂಗಳಿಗೂ ಮುನ್ನ ಓಟಿಟಿಗೆ ಬಂದರೂ ಕೆಲವೆಡೆ ಚಿತ್ರಮಂದಿರಗಳಲ್ಲಿ ಸಿನಿಮಾ 50 ದಿನ ಪ್ರದರ್ಶನ ಮುಂದುವರೆಸಿತ್ತು.


Click it and Unblock the Notifications











