ವಿಜ್ಞಾನಿಯ ಮೇಲೆ ದೇಶದ್ರೋಹ ಆರೋಪ: ಸಿನಿಮಾ ಆಗಿದೆ ಅಪರೂಪದ ನಿಜ ಘಟನೆ
ರೈತ, ಸೈನಿಕನ ನಂತರ ಭಾರತೀಯ ಪ್ರಜೆಗಳು ಹೆಚ್ಚು ಗೌರವದಿದ್ದರೆ ಅದು ನಮ್ಮ ವಿಜ್ಞಾನಿಗಳಿಗೆ. ಆದರೆ ದೇಶದ ಅಭಿವೃದ್ಧಿಗೆ ಪಾಲು ನೀಡಿದ ವಿಜ್ಞಾನಿಯೊಬ್ಬರ ಮೇಲೆ ದೇಶದ್ರೋಹ ಆರೋಪ ಹೊರಿಸಿ ಅವರನ್ನು ಅಮಾನವೀಯವಾಗಿ ಹಿಂಸಿಸಿದ್ದ ಪ್ರಕರಣವೊಂದು ಇದೇ ದೇಶದಲ್ಲಿ ನಡೆದಿತ್ತು. ಆ ಘಟನೆ ಈಗ ಸಿನಿಮಾ ಆಗಿದೆ.
ಇಸ್ರೋದ ಪ್ರತಿಭಾವಂತ ರಾಕೆಟ್ ವಿಜ್ಞಾನಿ, ಕ್ರಯೋಜೆನಿಕ್ ಎಂಜಿನ್ ವಿಭಾಗದ ಮುಖ್ಯಸ್ಥರಾಗಿದ್ದ ನಂಬಿ ನಾರಾಯಣನ್ ಅವರ ಜೀವನದಲ್ಲಿ ನಡೆದ ನಿಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಒಂದು ನಿರ್ಮಾಣವಾಗಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.
ಪ್ರತಿಭಾವಂತ ವಿಜ್ಞಾನಿ ನಂಬಿ ನಾರಾಯಣನ್ ಅವರ ಮೇಲೆ ಗೂಢಚಾರಿಕೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು. ಅಷ್ಟೇ ಅಲ್ಲದೆ ಜೈಲಿನಲ್ಲಿ ಅವರ ಮೇಲೆ ತೀವ್ರತರ ಹಲ್ಲೆ ಮಾಡಲಾಗಿತ್ತು. ದೇಶವೇ ಅವರನ್ನು ದೇಶದ್ರೋಹಿ ಎಂದು ಕರೆದಿತ್ತು. ಆದರೆ ಅವರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಸಿಬಿಐ ಹಾಗೂ ಸುಪ್ರೀಂಕೋರ್ಟ್ ಹೇಳಿತು. ಅವರ ಮಾನ ಹಾಗೂ ದೈಹಿಕ ಹಾನಿಗೆ ಪರಿಹಾರವಾಗಿ 50 ಲಕ್ಷ ನೀಡುವಂತೆ ಕೇರಳ ಸರ್ಕಾರಕ್ಕೆ ಸೂಚಿಸಿತು. ಅಂತೆಯೇ ಕೇರಳ ಸರ್ಕಾರವು 2018 ರಲ್ಲಿ 1.30 ಕೋಟಿ ಹಣವನ್ನು ಪರಿಹಾರವಾಗಿ ನಂಬಿ ಅವರಿಗೆ ನೀಡಿತು.

ನಂಬಿ ಅವರ ಜೀವನವನ್ನು ಆಧರಿಸಿ ತಮಿಳಿನ ಖ್ಯಾತ ನಟ ಆರ್.ಮಾಧವನ್ ಚಿತ್ರಕತೆ ಬರೆದು ನಿರ್ದೇಶನ ಮಾಡಿ 'ರಾಕೆಟ್ರಿ; ದಿ ನಂಬಿ ಎಫೆಕ್ಟ್' ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ನಂಬಿ ಪಾತ್ರದಲ್ಲಿ ಸ್ವತಃ ಆರ್.ಮಾಧವನ್ ನಟಿಸಿದ್ದಾರೆ. ಸಿನಿಮಾದಲ್ಲಿ ಅವರ ಜೊತೆಗೆ ಅತಿಥಿ ಪಾತ್ರದಲ್ಲಿ ನಟ ಸೂರ್ಯ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ಸಹ ಇದ್ದಾರೆ.
ಸಿನಿಮಾದ ಟ್ರೇಲರ್ ಇಂದಷ್ಟೆ ಬಿಡುಗಡೆ ಆಗಿದೆ. 'ಒಂದು ನಾಯಿಯನ್ನು ಕೊಲ್ಲಬೇಕೆಂದರೆ ಅದಕ್ಕೆ ಹುಚ್ಚು ಎಂಬ ಪಟ್ಟ ಕಟ್ಟಿದರೆ ಸಾಕು, ಹಾಗೆಯೇ ಒಬ್ಬ ವ್ಯಕ್ತಿ ಮತ್ತೆ ತಲೆ ಎತ್ತದಂತೆ ಮಾಡಿಬಿಡಲು ಅವನಿಗೆ ದೇಶದ್ರೋಹಿ ಪಟ್ಟ ಕಟ್ಟಿದರೆ ಸಾಕು' ಎಂಬ ಚುರುಕಾದ ಸಂಭಾಷಣೆಗಳು ಟ್ರೇಲರ್ನಲ್ಲಿ ಗಮನ ಸೆಳೆಯುತ್ತಿವೆ.
Recommended Video
'ರಾಕೆಟ್ರಿ; ದಿ ನಂಬಿ ಎಫೆಕ್ಟ್' ಸಿನಿಮಾದಲ್ಲಿ ಆರ್.ಮಾಧವನ್ ಜೊತೆಗೆ ಸಿಮ್ರಾನ್, ರಜಿತ್ ಕಪೂರ್, ರವಿ ರಾಘವೇಂದ್ರ, ಮಿಶಾ ಘೋಷಲ್ ಸೇರಿ ಇನ್ನೂ ಕೆಲವರು ವಿದೇಶಿ ನಟರು ಸಹ ನಟಿಸಿದ್ದಾರೆ. ಸಿನಿಮಾವನ್ನು ಆರ್.ಮಾಧವನ್, ವರ್ಗೀಸ್ ಮೂಲನ್, ವಿಜಯ್ ಮೂಲನ್ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











