'ಯಶ್' ನಿರ್ಮಾಣದ 'ರಾಮಾಯಣ' ಚಿತ್ರಕ್ಕೆ 'ಮಾಂಸ' ತ್ಯಜಿಸಿದರೇ ಸಾಯಿ ಪಲ್ಲವಿ, ಸಿಟ್ಟಾಗಿದ್ದೇಕೆ ಸಹಜ ಸುಂದರಿ..?
ನಿಜ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ನೀಡಲು ಹೋಗುವುದಿಲ್ಲ.
ಹಾಗಂಥ ಪದೇ ಪದೇ ಕೆಣಕಿದರೆ ಕೆಲವರು ಸುಮ್ಮನೆ ಕೂಡ ಇರುವುದಿಲ್ಲ. ಪಿತ್ತ ನೆತ್ತಿಗೇರಿ ತರಾಟೆಯನ್ನು ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವೊಮ್ಮೆ ಕಾನೂನು ಹೋರಾಟಕ್ಕೂ ಮುಂದಾಗುತ್ತಾರೆ. ಇದಕ್ಕೆ ಸಾಯಿ ಪಲ್ಲವಿ ಸದ್ಯದ ಉದಾಹರಣೆ. ಹೌದು, ತಮ್ಮ ಸಹಜ ಅಭಿನಯ ಮತ್ತು ಸಹಜ ಸೌಂದರ್ಯದಿಂದ ಕೇವಲ ದಕ್ಷಿಣದಲ್ಲಿ ಅಷ್ಟೇ ಅಲ್ಲ, ಉತ್ತರದಲ್ಲಿ ಕೂಡ ಅನೇಕರ ಹೃದಯಕ್ಕೆ ಕನ್ನ ಹಾಕಿರುವ ಸಾಯಿ ಪಲ್ಲವಿ ಮೊದಲಿಂದ ತಾವಾಯ್ತು ತಮ್ಮ ಕೆಲಸವಾಯ್ತು ಎನ್ನುವ ಮನೋಭಾವದವರು. ಯಾರ ಜೊತೆ ತಂಟೆ-ತಕರಾರುಗಳನ್ನು ಮಾಡಿಕೊಳ್ಳದೇ ವಿವಾದಗಳಿಂದ ದೂರ ಇರಲು ಬಯಸುವ ಸಾಯಿ ಪಲ್ಲವಿ ಈಗ ಕೆರಳಿದ್ದಾರೆ. ಖಡಕ್ ಉತ್ತರವನ್ನು ನೀಡಿದ್ದಾರೆ.

ಹೌದು, ಸಾಯಿ ಪಲ್ಲವಿ ರಾಮಾಯಾಣ ಚಿತ್ರದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಕುರಿತು ಮೊದಲಿಂದ ಪರ -ವಿರೋಧ ಚರ್ಚೆ ನಡೆಯುತ್ತಾನೇ ಇದೆ. ಇದರ ನಡುವೆ ರಾಮಾಯಣ ಚಿತ್ರಕ್ಕೋಸ್ಕರ ಸಾಯಿ ಪಲ್ಲವಿ ಸಸ್ಯಾಹಾರಿಯಾಗಿ ಬದಲಾಗಿದ್ದಾರೆ ಎನ್ನುವ ಸುದ್ದಿಯನ್ನು ತಮಿಳಿನ ಮಾಧ್ಯಮವೊಂದು ಪ್ರಕಟಿಸಿದೆ. ಈ ಮೂಲಕ ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಮಾಡಿದೆ. ಯಾಕೆಂದರೆ ಮೊದಲಿಂದ ಕೂಡ ಸಾಯಿ ಪಲ್ಲವಿ ಸಸ್ಯಾಹಾರಿ.
ಆದರೆ. ಸಾಯಿ ಪಲ್ಲವಿ ಮೊದಲಿಂದ ಮಾಂಸಾಹಾರ ಸೇವನೆ ಮಾಡುತ್ತಾರೆ, ರಾಮಾಯಣ ಚಿತ್ರಕ್ಕೆ ಸಸ್ಯಾಹಾರಿಯಾಗಿದ್ದಾರೆ ಎಂದು ಬಿಂಬಿಸುವ ಪ್ರಯತ್ನವನ್ನು ಈ ವರದಿ ಮೂಲಕ ಮಾಡಲಾಗಿದೆ. ಹೀಗಾಗಿಯೇ ಸುದ್ದಿಯನ್ನು ಓದಿ ಕೋಪಗೊಂಡಿರುವ ಸಾಯಿ ಪಲ್ಲವಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸಾಯಿ ಪಲ್ಲವಿ ಸಾಮಾನ್ಯವಾಗಿ ಆಧಾರರಹಿತ ವದಂತಿಗಳನ್ನು, ಸುಳ್ಳು ಸುದ್ದಿಗಳನ್ನು ನೋಡಿದಾಗ ಬಹುತೇಕ ಸಂದರ್ಭದಲ್ಲಿ ನಾನು ಮೌನವಾಗಿರಲು ಬಯಸುತ್ತೇನೆ. ಆದರೆ ನಿರಂತರವಾಗಿ ಇದು ನಡೆಯುತ್ತಲೇ ಇದೆ. ನಿಲ್ಲುವ ಯಾವ ಲಕ್ಷಣ ಕೂಡ ಕಂಡು ಬರುತ್ತಿಲ್ಲ. ಅದರಲ್ಲಿಯೂ ನನ್ನ ಚಿತ್ರಗಳ ಬಿಡುಗಡೆಯ ಸಂದರ್ಭದಲ್ಲಿ ಹೊಸ ಚಿತ್ರದ ಘೋಷಣೆಯ ಸಂದರ್ಭದಲ್ಲಿ ಈ ತರಹದ ಸುದ್ದಿಗಳು ಹೆಚ್ಚೆಚ್ಚು ಬರುತ್ತವೆ ಎಂದಿರುವ ಸಾಯಿ ಪಲ್ಲವಿ ನಾನು ಇನ್ಮುಂದೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಯಾವುದೇ ಪ್ರತಿಷ್ಠಿತ ಮಾಧ್ಯಮಗಳು ಅಥವಾ ಪೇಜ್ಗಳು ಗಾಸಿಪ್ ಹೆಸರಿನಲ್ಲಿ ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಬರೆದರೆ ನಾನು ಮೌನವಾಗಿರುವುದಿಲ್ಲ. ಕಾನೂನು ಪ್ರಕಾರ ಕ್ರಮವನ್ನು ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ಸಾಯಿ ಪಲ್ಲವಿಯ ಈ ಟ್ವೀಟ್ ಕುರಿತು ವ್ಯಾಪಕವಾದ ಚರ್ಚೆ ಕೂಡ ನಡೆಯುತ್ತಿದೆ. ವೈರಲ್ ಕೂಡ ಆಗುತ್ತಿದೆ. ಹಲವು ಅಭಿಪ್ರಾಯಗಳು ಕೂಡಾ ವ್ಯಕ್ತವಾಗಿವೆ. ಅಂದ್ಹಾಗೇ ಸಾಯಿ ಪಲ್ಲವಿ ಮತ್ತು ರಣ್ಬೀರ್ ಕಪೂರ್ ಅಭಿನಯದಲ್ಲಿ ಸಿದ್ಧವಾಗುತ್ತಿರುವ ರಾಮಾಯಣ ಚಿತ್ರಕ್ಕೆ ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಬಂಡವಾಳವನ್ನು ಹೂಡುವುದರ ಜೊತೆಯಲ್ಲಿ ರಾವಣನ ಪಾತ್ರವನ್ನು ಕೂಡ ಮಾಡುತ್ತಿದ್ದಾರೆ. ಸನ್ನಿ ಡಿಯೋಲ್ ಚಿತ್ರದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವಿಶ್ವದೆಲ್ಲೆಡೆ ಇರುವ ಅತ್ಯತ್ತಮ ಇರುವ ತಂತ್ರಜ್ಞರು ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ


Click it and Unblock the Notifications











