'ಕೆಜಿಎಫ್ 2' ಬಳಿಕ ಮತ್ತೊಂದು ದಕ್ಷಿಣ ಭಾರತ ಸಿನಿಮಾದಲ್ಲಿ ಸಂಜಯ್ ದತ್ ವಿಲನ್
ನಟ ಸಂಜಯ್ ದತ್ 'ಕೆಜಿಎಫ್ 2' ನಲ್ಲಿ ಅಧೀರನ ಪಾತ್ರ ಮಾಡುವ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಅದ್ಭುತ ನಟನೆ, ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಭಾರಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
'ಅಧೀರ'ನಾಗಿ ಮಿಂಚಿದ ಸಂಜಯ್ ದತ್ಗೆ ಈಗ ಮತ್ತೊಂದು ದಕ್ಷಿಣ ಭಾರತ ಸಿನಿಮಾದ ಆಫರ್ ಬಂದಿದ್ದು, ಆ ಸಿನಿಮಾದಲ್ಲಿಯೂ ವಿಲನ್ ಆಗಿಯೇ ಮಿಂಚಲಿದ್ದಾರೆ ಸಂಜಯ್ ದತ್.
ತಮಿಳಿನ ಸ್ಟಾರ್ ನಟ ವಿಜಯ್ರ ಹೊಸ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡವು ಸಂಜಯ್ ದತ್ ಅವರನ್ನು ಭೇಟಿ ಮಾಡಿದ್ದು ಕತೆಯನ್ನು ಹೇಳಿದೆ. ಸಂಜಯ್ರ ಒಪ್ಪುಗೆಗೆ ಚಿತ್ರತಂಡ ಎದುರು ನೋಡುತ್ತಿದೆ.

ತಮಿಳಿನ ಪ್ರತಿಭಾವಂತ ನಿರ್ದೇಶಕ ಲೋಕೇಶ್ ಕನಕರಾಜನ್, ವಿಜಯ್ರ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಮಾನಗರಮ್', 'ಖೈದಿ' ಹಾಗೂ ಸ್ವತಃ ವಿಜಯ್ ನಟಿಸಿದ್ದ 'ಮಾಸ್ಟರ್' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಲೋಕೇಶ್ ಕನಕರಾಜನ್ ನಾಯಕನಷ್ಟೆ ಪವರ್ಫುಲ್ ಹಾಗೂ ಭಿನ್ನ ಮಾದರಿಯ ವಿಲನ್ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಹಾಗಾಗಿ ಸಂಜಯ್ ದತ್ ಅವರಿಗೆ ಒಳ್ಳೆಯ ಪಾತ್ರವನ್ನೇ ಡಿಸೈನ್ ಮಾಡಿರುತ್ತಾರೆ ಎಂಬ ನಂಬಿಕೆ ಇದೆ.
ವಿಜಯ್ ನಟನೆಯ 'ಮಾಸ್ಟರ್' ಸಿನಿಮಾದಲ್ಲಿ ವಿಜಯ್ ಎದುರು ವಿಜಯ್ ಸೇತುಪತಿ ವಿಲನ್ ಆಗಿದ್ದರು. ವಿಜಯ್ ಪಾತ್ರಕ್ಕಿದ್ದಷ್ಟೆ ಪ್ರಾಮುಖ್ಯತೆ ವಿಲನ್ ಪಾತ್ರಕ್ಕೂ ಇತ್ತು. ಇದೀಗ ಲೋಕೇಶ್ ಕನಕರಾಜನ್ ಕಮಲ್ ಹಾಸನ್ ಜೊತೆಗೆ 'ವಿಕ್ರಂ' ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದಲ್ಲಿ ಕಮಲ್ ಎದುರು ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ.
ಇನ್ನು ಸಂಜಯ್ ದತ್ಗೆ ಬಾಲಿವುಡ್ನಲ್ಲಿಯೇ ಹಲವು ಆಫರ್ಗಳು ಇವೆ ಆದರೆ ಪಾತ್ರಗಳು ಚೆನ್ನಾಗಿದ್ದರಷ್ಟೆ ಬೇರೆ ಭಾಷೆಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರಂತೆ ಸಂಜಯ್. ಹಾಗಾಗಿ ತಮಿಳಿನ ಬಂದಿರುವ ಆಫರ್ ಅನ್ನು ಸಂಜಯ್ ದತ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ.
Recommended Video

ವಿಜಯ್ ಪ್ರಸ್ತುತ ತಮ್ಮ 66ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಆ ಬಳಿಕ ವಿಜಯ್ರ 67ನೇ ಸಿನಿಮಾವನ್ನು ಲೋಕೇಶ್ ಕನಕರಾಜನ್ ನಿರ್ದೇಶನ ಮಾಡಲಿದ್ದಾರೆ.


Click it and Unblock the Notifications











