ತಮಿಳು ಸಿನಿಮಾದ ಚಿತ್ರೀಕರಣ ಮುಗಿಸಿದ ಸತೀಶ್ ನೀನಾಸಂ
ಕನ್ನಡದ ನಟ ಸತೀಶ್ ನೀನಾಸಂ ಸದ್ದಿಲ್ಲದೆ ತಮ್ಮ ಚೊಚ್ಚಿಲ ತಮಿಳಿನ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ.
ನಟ ಸತೀಶ್ ನೀನಾಸಂ ಅವರು ಈ ವರ್ಷದ ಆರಂಭದಲ್ಲಿ 'ಪಗೈವಾನುಕು ಅರುಲ್ವಾಯ್' ತಮಿಳು ಸಿನಿಮಾದ ಎರಡನೇ ಶೆಡ್ಯೂಲ್ನಲ್ಲಿ ನಟಿಸಲು ಆರಂಭಿಸಿದ್ದರು. ಖ್ಯಾತ ನಟ ಶಶಿಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ನಟ ಸತೀಶ್ ಅವರದ್ದೂ ಸಹ ಪ್ರಧಾನ ಪಾತ್ರವೇ.
ಸಿನಿಮಾದ ಚಿತ್ರೀಕರಣ ಮುಗಿಸಿರುವ ಖುಷಿಯನ್ನು ಚಿತ್ರದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ನಟ ಸತೀಶ್ ಅವರು ಹಂಚಿಕೊಂಡಿದ್ದಾರೆ. ಶಶಿಕುಮಾರ್, ಸತೀಶ್ ನೀನಾಸಂ ಜೊತೆಗೆ ಬಿಂದು ಮಾಧವಿ ಹಾಗೂ ವಾಣಿ ಭೋಜನ್ ಅವರು ಸಿನಿಮಾದಲ್ಲಿ ನಟಿಸಿದ್ದಾರೆ.

''ಪಗೈವಾನುಕು ಅರುಲ್ವಾಯ್' ಸಿನಿಮಾದ ಚಿತ್ರೀಕರಣ ಮುಗಿದಿದೆ. ನಿಮ್ಮೊಂದಿಗೆ ಕೆಲಸ ಮಾಡಿದ್ದು ಅದ್ಭುತವಾದ ಅನುಭವ. ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದ ಚಿತ್ರತಂಡದ ಎಲ್ಲರಿಗೂ ಧನ್ಯವಾದ' ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ ನಟ ನೀನಾಸಂ ಸತೀಶ್.
ಈ ಸಿನಿಮಾದ ಕತೆಯು ಷೇಕ್ಸ್ಫಿಯರ್ ಅವರ ಕತೆಯಿಂದ ಪ್ರೇರಣೆಗೊಂಡಿದೆ ಎನ್ನಲಾಗುತ್ತಿದ್ದು. ನೀನಾಸಂ ಸತೀಶ್ ಅವರು ಜೈಲು ಖೈದಿಯೊಬ್ಬನ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ.
Recommended Video
ಕನ್ನಡದ 'ಪೆಟ್ರೊಮ್ಯಾಕ್ಸ್' ಸಿನಿಮಾವನ್ನು ಸತೀಶ್ ನೀನಾಸಂ ಈಗಾಗಲೇ ಮುಗಿಸಿದ್ದಾರೆ. ನೀರ್ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಶೀಘ್ರದಲ್ಲಿಯೇ ಘೋಷಣೆ ಆಗಲಿದೆ.


Click it and Unblock the Notifications











