ತಮಿಳು ನಟ ಶಶಿಕುಮಾರ್ ಜೊತೆ ಚಿತ್ರೀಕರಣ ಆರಂಭಿಸಿದ ಸತೀಶ್ ನೀನಾಸಂ
ಕನ್ನಡ ನಟ ಸತೀಶ್ ನೀನಾಸಂ ತಮಿಳು ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ತಮಿಳಿನಲ್ಲಿ ಚೊಚ್ಚಲ ಸಿನಿಮಾ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಮುಗಿಸಿದ್ದ ಸತೀಶ್ ನೀನಾಸಂ ಈಗ ತಮಿಳು ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ಸ್ಟಾರ್ ತಮಿಳು ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಂಡಿರುವ ಫೋಟೋವನ್ನು ಚಿತ್ರದ ನಿರ್ದೇಶಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟ ಶಶಿಕುಮಾರ್ ಹಾಗೂ ಸತೀಶ್ ನೀನಾಸಂ ಇದ್ದಾರೆ.
ಅನಿಸ್ ಅಬ್ಬಾಸ್ ಎಂಬ ಯುವ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಶಶಿಕುಮಾರ್ ನಾಯಕರಾಗಿದ್ದಾರೆ. ಷೇಕ್ಸ್ಪಿಯರ್ ಕಥೆಯಿಂದ ಸ್ಫೂರ್ತಿಗೊಂಡಿರುವ ಈ ಸಿನಿಮಾದಲ್ಲಿ ಸತೀಶ್ ನೀನಾಸಂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಖೈದಿ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರಕ್ಕೆ ಪಗೈವಾನುಲು ಅರುಲ್ವಾಯ್ (Pagaivanulu Arulvai) ಎಂದು ಹೆಸರಿಟ್ಟಿದ್ದು, ಈ ಕುರಿತು ನಿರ್ದೇಶಕ ಅನಿಸ್ ಅಬ್ಬಾಸ್ ಸಂತಸ ಹಂಚಿಕೊಂಡಿದ್ದಾರೆ.
''ಪಗೈವಾನುಲು ಅರುಲ್ವಾಯ್ (Pagaivanulu Arulvai) ಚಿತ್ರದ ಮುಂದಿನ ಶೆಡ್ಯೂಲ್ ಆರಂಭವಾಗಿದೆ. 2021ರಲ್ಲಿ ಚಿತ್ರೀಕರಣ ಆರಂಭಿಸಿರುವುದು ಖುಷಿ ತಂದಿದೆ. ಕನ್ನಡ ನಟ ಸತೀಶ್ ನೀನಾಸಂ ಅವರು ಮೊಟ್ಟ ಮೊದಲ ಸಲ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರನ್ನು ನಮ್ಮ ಚಿತ್ರತಂಡ ಸ್ವಾಗತಿಸಿದೆ'' ಎಂದು ಪೋಸ್ಟ್ ಹಾಕಿದ್ದಾರೆ.
ಸತೀಶ್ ನೀನಾಸಂ, ಶಶಿಕುಮಾರ್ ಜೊತೆ ಬಿಂದು ಮಾಧವಿ, ವಾಣಿ ಭೋಜನ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ನಾಸರ್ ಮತ್ತು ಜಯಪ್ರಕಾಶ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಗಿಬ್ರನ್ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ಕಾರ್ತಿಕ್ ಕೆ ಥಿಳ್ಳೈ ಅವರ ಛಾಯಾಗ್ರಹಣವಿದ್ದು, ಕಾಶಿ ವಿಶ್ವನಾಥನ್ ಅವರ ಸಂಕಲನ ಇದೆ.
ಇನ್ನು ಕನ್ನಡದಲ್ಲಿ ಸತೀಶ್ ನೀನಾಸಂ ಸತತವಾಗಿ ಸಿನಿಮಾ ಮಾಡ್ತಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಶೂಟಿಂಗ್ ಮುಗಿದಿದೆ. ಮ್ಯಾಟ್ನಿ ಹಾಗೂ ದಸರಾ ಚಿತ್ರಗಳ ಶೂಟಿಂಗ್ ಮಾಡ್ತಿದ್ದಾರೆ. ಗೋದ್ರಾ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.


Click it and Unblock the Notifications











