ಸನಾತನ ಧರ್ಮ ನಿಮೂರ್ಲನೆ ಆಗಬೇಕು ಎಂದ ಉದಯನಿಧಿ ಸ್ಟಾಲಿನ್ ಧೈರ್ಯ ಮೆಚ್ಚಬೇಕು; ಸತ್ಯರಾಜ್
ತಮಿಳು ನಟ, ರಾಜಕೀಯ ನಾಯಕ ಉದಯನಿಧಿ ಸ್ಟಾಲಿನ್ ಮತ್ತೊಮ್ಮೆ ಸನಾತನ ಧರ್ಮದ ಬಗ್ಗೆ ಮಾತನಾಡಿವುದು ವಿವಾದಕ್ಕೆ ಕಾರಣವಾಗಿದೆ. ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಇತ್ತೀಚೆಗೆ ತಮಿಳುನಾಡು ಸದನದಲ್ಲೇ ಅವರು ಹೇಳಿದ್ದಾರೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ತಮಿಳು ನಟ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಇದನ್ನು ಬೆಂಬಲಿಸಿದ್ದಾರೆ.
ಮೊದಲಿನಿಂದಲೂ ಸತ್ಯರಾಜ್ ಡಿಎಂಕೆ ಪಕ್ಷವನ್ನು ಬೆಂಬಲಿಸುತ್ತಾ ಬರ್ತಿದ್ದಾರೆ. ಪೆರಿಯಾರ್, ಅಣ್ಣಾದೊರೆ, ಎಂಜಿಆರ್, ಕರುಣಾನಿಧಿ ಅವರನ್ನು ಅನುಸರಿಸುತ್ತಿದ್ದಾರೆ. ಇವತ್ತಿಗೂ ಡಿಎಂಕೆ ಪಕ್ಷವನ್ನು ಬಿಟ್ಟುಕೊಡುವುದಿಲ್ಲ. ಸತ್ಯರಾಜ್ ಮಗಳು ದಿವ್ಯಾ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ಐಟಿ ವಿಭಾಗದ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಂದೆ, ಮಗಳು ಡಿಎಂಕೆ ಪಕ್ಷದ ಗೆಲುವಿಗೆ ಶ್ರಮಿಸಿದ್ದರು. ಆದರೆ ಮಗ ಸಿಬಿ ರಾಜ್ ಮಾತ್ರ ಟಿವಿಕೆ ಪಕ್ಷ ಬೆಂಬಲಿಸಿದ್ದು ಚರ್ಚೆ ಹುಟ್ಟು ಹಾಕಿತ್ತು.

ಚುನಾವಣೆಯಲ್ಲಿ ಸೋಲುಂಡ ಡಿಎಂಕೆ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದೆ. ಈ ಹಿಂದೆ ಡಿಎಂಕೆ ಸರ್ಕಾರದಲ್ಲಿ ಸಚಿವನಾಗಿ ಡಿಸಿಎಂ ಆಗಿ ಸೇವೆ ಸಲ್ಲಿಸಿದ್ದ ಉದಯನಿಧಿ ಸ್ಟಾಲಿನ್ ಈಗ ವಿರೋಧ ಪಕ್ಷದ ನಾಯಕನ ಸ್ಥಾನ ವಹಿಸಿಕೊಂಡಿದ್ದಾರೆ. ಸದನದಲ್ಲಿ ಆಡಳಿಕ ಪಕ್ಷವನ್ನು ಆಗಾಗ್ಗೆ ತಿವಿಯುವ ಪ್ರಯತ್ನ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ಸದನದಲ್ಲಿ ಭಾಷಣ ಮುಗಿಸುವ ವೇಳೆ "ತಮಿಳು ಏಳ್ಗೆ, ತಮಿಳುನಾಡ ಬಾಳ್ಗೆ, ಜನರನ್ನು ವಿಭಜಿಸುವ ಸನಾತನ ಧರ್ಮ ಕಂಡಿತ ನಿರ್ಮೂಲನೆ ಆಗಬೇಕು. ನಮಸ್ಕಾರ.. ಧನ್ಯವಾದ" ಎಂದಿದ್ದರು.
ನೂತನ ಸಿಎಂ ವಿಜಯ್ ಎದುರಲ್ಲೇ ಉದಯನಿಧಿ ಸ್ಟಾಲಿನ್ ಈ ಮಾತು ಹೇಳಿದ್ದರು. ಆದರೆ ಈ ಬಗ್ಗೆ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸದ್ಯ ಸತ್ಯರಾಜ್ ವೀಡಿಯೋ ಮಾಡಿ ಮಾತನಾಡಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನ ವಹಿಸಿಕೊಂಡಿರುವ ಉದಯನಿಧಿ ಸ್ಟಾಲಿನ್ ಅವರನ್ನು ಅಭಿನಂದಿಸಿದ್ದಾರೆ. ಜೊತೆಗೆ ಸನಾತನ ಧರ್ಮ ನಿರ್ಮೂಲನೆ ಆಗಬೇಕು ಎಂದು ಧೈರ್ಯವಾಗಿ ಹೇಳಿದ್ದೀರಾ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆದಿದೆ. ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಇದೆಲ್ಲದರ ನಡುವೆ ನಟ ಸತ್ಯರಾಜ್ ಹೇಳಿಕೆ ವೈರಲ್ ಆಗ್ತಿದೆ. "ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಅವರ ಮೊದಲ ಭಾಷಣವು ಕರ್ತವ್ಯ, ಘನತೆ ಮತ್ತು ಸಂಯಮದಿಂದ ತುಂಬಿತ್ತು" ಎಂದು ನಟ ಸತ್ಯರಾಜ್ ಶ್ಲಾಘಿಸಿದ್ದಾರೆ.
ಜನರನ್ನು ವಿಭಜಿಸುವ ಸನಾತನ ವ್ಯವಸ್ಥೆಯ ನಿರ್ಮೂಲನೆ ಮಾಡಬೇಕು ಎನ್ನುವ ಉದಯನಿಧಿ ಹೇಳಿಕೆ ನಿಜಕ್ಕೂ ಧೈರ್ಯದಿಂದ ಕೂಡಿದೆ. ಸನಾತನ ವ್ಯವಸ್ಥೆಯ ನಿರ್ಮೂಲನೆಯಲ್ಲಿ ಸಾಮಾಜಿಕ ನ್ಯಾಯವೂ ಸೇರಿದೆ ಎಂದಿದ್ದಾರೆ. "ಸಾವಿರ ಕೈಗಳು ಮರೆಮಾಡಿದರೂ ಸೂರ್ಯನ ಕಣ್ಮರೆಯಾಗುವುದಿಲ್ಲ. ಯಾರಾದರೂ ಅಪ್ಪಣೆ ನೀಡಿ ತಡೆದರೂ ಸಾಗರದ ಅಲೆಗಳು ನಿಲ್ಲುವುದಿಲ್ಲ" ಎಂದು ಎಂಜಿಆರ್ ಸಿನಿಮಾ ಗೀತೆಯ ಸಾಲುಗಳನ್ನು ಹೇಳಿ ಸತ್ಯರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮಿಳು ನಟ ಸತ್ಯರಾಜ್ ನೂರಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮೊದಲಿಗೆ ನೆಗೆಟಿವ್ ಪಾತ್ರಗಳ ಮೂಲಕ ಗುರ್ತಿಸಿಕೊಂಡಿದ್ದ ಅವರು ಬಳಿಕ ಹೀರೊ ಆಗಿದ್ದರು. ನಿಧಾನವಾಗಿ ಪೋಷಕ ಪಾತ್ರಗಳಲ್ಲಿ ನಟಿಸಸಲು ಆರಂಭಿಸಿದರು. 'ಬಾಹುಬಲಿ' ಸರಣಿ ಚಿತ್ರಗಳ ಕಟ್ಟಪ್ಪ ಪಾತ್ರ ದೊಡ್ಡ ಬ್ರೇಕ್ ಕೊಟ್ಟಿತ್ತು. ಇವತ್ತಿಗೂ ಪೋಷಕ ಪಾತ್ರಗಳಲ್ಲಿ ಸತ್ಯರಾಜ್ ಮಿಂಚುತ್ತಿದ್ದಾರೆ.
ತಮಿಳು ಮಾತ್ರವಲ್ಲದೇ ತೆಲುಗು, ಹಿಂದಿ, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ಕೂಡ ಸತ್ಯರಾಜ್ ಬಣ್ಣ ಹಚ್ಚಿದ್ದಾರೆ. 1985ರಲ್ಲಿ ಬಂದಿದ್ದ ಕನ್ನಡದ 'ಶಬ್ಬಾಷ್ ವಿಕ್ರಂ' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು.


Click it and Unblock the Notifications