"ದೇವರ ಹೆಸರಲ್ಲಿ ರಾಜಕೀಯವೇ, ಪೆರಿಯಾರ್ ಸಿದ್ಧಾಂತ ನಂಬಿದ ನಮ್ಮತ್ರ ಇದೆಲ್ಲಾ ಬೇಡ"; ಸತ್ಯರಾಜ್
ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ 'ಮುರುಗನ್ ಮಾನಾಡು' ಆಧ್ಯಾತ್ಮಿಕ ಕಾರ್ಯಕ್ರಮ ನಡೆಯಿತು. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆವೇಶಭರಿತ ಭಾಷಣ ಮಾಡಿದ್ದರು. ಈ ಬಗ್ಗೆ ಪರೋಕ್ಷವಾಗಿ ತಮಿಳು ನಟ ಸತ್ಯರಾಜ್ ಪ್ರತಿಕ್ರಿಯಿಸಿದ್ದಾರೆ.
ಚೆನ್ನೈನ ಕಲೈವಾನರ್ ಆರಂಗ್ನಲ್ಲಿ ತಮಿಳುನಾಡು ಲಿಬರೇಶನ್ ಟೈಗರ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ, ಪಾಂಡಿಚೇರಿ ಮಾಜಿ ಮುಖ್ಯಮಂತ್ರಿ ವೈತಿಲಿಂಗಂ ಅವರಿಗೆ ಕಾಮರಾಜ್ ಪ್ರಶಸ್ತಿ ಹಾಗೂ ನಟ ಸತ್ಯರಾಜ್ ಅವರಿಗೆ ಪೆರಿಯಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇದಿಕೆಯಲ್ಲಿ ನಟ ಸತ್ಯರಾಜ್ ಮಾತನಾಡಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

"ತಮಿಳುನಾಡಿನಲ್ಲಿ ದೇವರ ಹೆಸರಿನಲ್ಲಿ ರಾಜಕೀಯ ಮಾಡಿದರೆ ಸುಮ್ಮನಿರಲ್ಲ" ಎಂದು ಸತ್ಯರಾಜ್ ಎಚ್ಚರಿಕೆ ನೀಡಿದ್ದಾರೆ. ಪೆರಿಯಾರ್ ಸಿದ್ಧಾಂತ ನಂಬಿರುವ ನಮ್ಮನ್ನು ಯಾರು ಮೋಸ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ತಮಿಳುನಾಡಿನ ಜನ ಬಹಳ ಬುದ್ಧಿವಂತರು. ನಿಮ್ಮ ಆಟ ಇಲ್ಲಿ ನಡೆಯುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಅಸ್ತಿತ್ವ ಸ್ಥಾಪಿಸಲು ಪ್ರಯತ್ನಿಸುತ್ತಿರುವುದು ಗೊತ್ತೇಯಿದೆ. ಕಳೆದ ಚುನಾವಣೆಗಳಲ್ಲಿ ಈ ಪ್ರಯತ್ನ ಹೆಚ್ಚಾಗಿತ್ತು. ಆದರೆ ಪ್ರಯೋಜನವಾಗಲಿಲ್ಲ.
ಆಂಧ್ರದಲ್ಲಿ ಬಿಜೆಪಿ ಹಾಗೂ ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಡಿಸಿಎಂ ಪಕ್ಷ ಅಲಂಕರಿಸಿದ್ದಾರೆ. ಇತ್ತೀಚೆಗೆ ಪವನ್ ಸನಾತನ ಧರ್ಮದ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡುತ್ತಾ ಬಂದಿದ್ದಾರೆ. ಸನಾತನ ಧರ್ಮದ ತಂಟೆಗೆ ಬಂದರೆ ಸುಮ್ಮನಿರಲ್ಲ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ 'ಮುರುಗನ್ ಮಾನಾಡು' ಕಾರ್ಯಕ್ರಮದಲ್ಲಿ ಪವನ್ ಹೇಳಿಕೆ ಸದ್ದು ಮಾಡ್ತಿದೆ. ಅದರ ಬೆನ್ನಲ್ಲೇ ಈಗ ನಟ ಸತ್ಯರಾಜ್ ಪ್ರತಿಕ್ರಿಯಿಸಿದ್ದಾರೆ.
"ನಮಗೆ ದೇವರು ಇದ್ದಾರಾ? ಇಲ್ವಾ? ಎನ್ನುವುದು ಒಂದು ಪ್ರಶ್ನೆಯೇ ಅಲ್ಲ. ಜಾತಿ, ಧರ್ಮ ಇಟ್ಟುಕೊಂಡು ತಮಿಳು ರಾಷ್ಟ್ರೀಯತೆ ಹೇಗೆ ಸಾಧ್ಯ? ಮರ್ಯಾದ ಹತ್ಯೆ ಹೇಗೆ ನಡೆಯುತ್ತದೆ. ಚೀನಾ, ಜಪಾನ್ನವರು ಬಂದು ಇಲ್ಲಿ ಕೊಲ್ಲುತ್ತಾರಾ? ತಮಿಳಿಗನನ್ನು ತಮಿಳಿಗನೇ ಕೊಲ್ಲುತ್ತಿದ್ದಾನೆ. ಹಾಗಿದ್ದಮೇಲೆ ಜಾತಿ ನಾಶವಾಗದೇ ತಮಿಳು ರಾಷ್ಟ್ರೀಯತೆ ಹೇಗೆ? ಜಾತಿ ಹೆಸರಿನಲ್ಲಿ ತುಳಿಯಲು ಬಂದರೆ ಸುಮ್ಮನಿರಲ್ಲ" ಎಂದು ಸತ್ಯರಾಜ್ ಎಚ್ಚರಿಕೆ ನೀಡಿದ್ದಾರೆ.
"ನೀವು ನಮಗೆ ಮೋಸ ಮಾಡುತ್ತಿದ್ದೇವೆ ಎಂದುಕೊಂಡು ನೀವು ಮೋಸ ಹೋಗಬೇಡಿ. ಮುರುಗ(ಸುಬ್ರಮಣ್ಯಸ್ವಾಮಿ)ನಿಗಾಗಿ ಒಂದು ಕಾರ್ಯಕ್ರಮ ಮಾಡಿಬಿಟ್ವಿ. ಇವರನ್ನೆಲ್ಲಾ ಯಾಮಾರಿಸಿಬಿಟ್ವಿ ಎಂದುಕೊಂಡಿದ್ದರೆ ನಿಮ್ಮ ತಮ್ಮ. ನನಗೆ ದೇವರಲ್ಲಿ ನಂಬಿಕೆ ಇಲ್ಲ. ಹೇಗೆ ನೋಡಿದರೂ ಮುರುಗ ನಮ್ಮವನು. ಸುಮ್ಮನಿದ್ದು ನಿನಗೆ ಶಿಕ್ಷೆ ಕೊಡುತ್ತಾರೆ. ತಮಿಳುನಾಡು ಪ್ರಗತಿಗೆ ಪೆರಿಯಾರ್, ಅಂಬೇಡ್ಕರ್ ಸಿದ್ಧಾಂತಗಳು ಕಾರಣ" ಎಂದು ಸತ್ಯರಾಜ್ ಹೇಳಿದ್ದಾರೆ.
'ಮುರುಗನ್ ಮಾನಾಡು' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಎಪಿ ಡಿಸಿಎಂ ಪವನ್ ಕಲ್ಯಾಣ್ ಆಸ್ತಿಕವಾದ ಹಾಗೂ ನಾಸ್ತಿಕ ವಾದದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪವನ್ ಸನಾತನ ಧರ್ಮದ ಬಗ್ಗೆ ಮಾತನಾಡಿ ಆಡಳಿತರೂಢ ಡಿಎಂಕೆ ಪಕ್ಷವನ್ನು ಟೀಕಿಸಿದ್ದರು. ನಾಸ್ತಿಕರು ಮತ್ತು ಜಾತ್ಯತೀತರ ಬಗ್ಗೆ ಮಾತನಾಡಿದ್ದರು. ನಾಸ್ತಿಕರು ಯಾವುದೇ ದೇವರನ್ನು ನಂಬಬೇಕಾಗಿಲ್ಲ, ಆದರೆ ಇಲ್ಲಿ ದೇಶದ ಸಮಸ್ಯೆ ಏನಂದ್ರೆ ಒಬ್ಬ ಮುಸ್ಲಿಂ, ಮುಸ್ಲಿಂ ಆಗಿ ಇರಬಹುದು, ಒಬ್ಬ ಕ್ರಿಶ್ಚಿಯನ್ ಕೂಡ ಕ್ರಿಶ್ಚಿಯನ್ ಆಗಿ ಇರಬಹುದು. ಆದರೆ ಒಬ್ಬ ಹಿಂದೂ, ಹಿಂದೂ ಆಗಿ ಇದ್ದರೆ ಇವರಿಗೆ ಸಮಸ್ಯೆ ಅದೇ ವಿಪರ್ಯಾಸ ಎಂದಿದ್ದರು.
ಪವನ್ ಹೇಳಿಕೆಯನ್ನು ಕೆಲ ತಮಿಳು ರಾಜಕೀಯ ಮುಖಂಡರು ಟೀಕಿಸಿದ್ದರು. ಆತನಿಗೂ ತಮಿಳುನಾಡಿಗೂ ಏನು ಸಂಬಂಧ. ನಮ್ಮ ಬಗ್ಗೆ ಆತ ಇಲ್ಲಿ ಯಾಕೆ ಬಂದು ಮಾತನಾಡುತ್ತಾರೆ ಎಂದು ಅಸಮಾಧಾನ ಹೊರ ಹಾಕಿದ್ದರು. ಸತ್ಯರಾಜ್ ಕೂಡ ಪರೋಕ್ಷವಾಗಿ ಕುಟುಕುವ ಪ್ರಯತ್ನ ಮಾಡಿದ್ದಾರೆ.


Click it and Unblock the Notifications











