ವಿಜಯ್ಗೆ ವೋಟ್ ಹಾಕಬೇಡಿ ಎನ್ನುತ್ತಿರುವ ಸತ್ಯರಾಜ್; ವಿಜಯ್ಗೆ ವೋಟ್ ಹಾಕಿ ಎಂದ ಮಗ
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೆರಡು ದಿನ ಬಾಕಿಯಿಕೆ. ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ನಡುವೆ ಈ ಬಾರಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಕಣದಲ್ಲಿದೆ. ದಳಪತಿ ಎಂಟ್ರಿ ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸಿದೆ. ಏಪ್ರಿಲ್ 23ರಂದು ಮತದಾನ ನಡೆಯಲಿದೆ. 3 ಪಕ್ಷದ ನಾಯಕರು ಮತಬೇಟೆ ನಡೆಸಿದ್ದಾರೆ.
ಡಿಎಂಕೆ ಪಕ್ಷಕ್ಕೆ ನಟ ಸತ್ಯರಾಜ್ ಹಾಗೂ ಪ್ರಕಾಶ್ ರಾಜ್ ಬೆಂಬಲ ಸೂಚಿಸಿದ್ದಾರೆ. ಮತಯಾಚನೆ ಮಾಡಿದ್ದಾರೆ. ವಿಜಯ್ ಪಕ್ಷಕ್ಕೆ ಮತ ಹಾಕಬೇಡಿ ಎಂದು ಕೂಡ ಹೇಳುತ್ತಿದ್ದಾರೆ. ಸ್ಟಾಲಿನ್ ಅವರನ್ನೇ ಮತ್ತೆ ಮುಖ್ಯಮಂತ್ರಿ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ವಿಜಯ್ ಪೊಲಿಟಿಕಲ್ ಎಂಟ್ರಿ ಬಗ್ಗೆ ಸತ್ಯರಾಜ್ ವ್ಯಂಗ್ಯವಾಡಿದ್ದಾರೆ. ಆದರೆ ಅವರ ಮಗ ಸಿಬಿ ಸತ್ಯರಾಜ್ ಮಾತ್ರ ಟಿವಿಕೆ ವಿಜಯ್ ಪರ ಬ್ಯಾಟ್ ಬೀಸಿದ್ದಾರೆ.

ಇತ್ತೀಚೆಗೆ ನಟ ವಿಜಯ್ ಬಗ್ಗೆ ವೇದಿಕೆಯಲ್ಲಿ ನಟ ಸತ್ಯರಾಜ್ ಟೀಕಿಸಿದ್ದರು. ವಿಜಯ್ ಒಳ್ಳೆ ನಟ, ಆತನ ಸಿನಿಮಾ ನಾನು ಇಷ್ಟಪಟ್ಟು ನೋಡ್ತೀನಿ. ಆದರೆ ಆತ ರಾಜಕೀಯರಂಗಕ್ಕೆ ಬಂದ ಮೇಲೆ ಬದಲಾಗಿಬಿಟ್ಟಿದ್ದಾರೆ. ಸ್ಟಾಲಿನ್ ಅಂಕಲ್ ಎಂದು ಸಿಎಂ ಬಗ್ಗೆ ವ್ಯಂಗ್ಯ ಮಾಡಿ ಮಾತನಾಡಿದ್ದು ಸರಿಯಲ್ಲ ಎಂದಿದ್ದರು. ಇದೇ ವಿಜಯ್ ತಮ್ಮ 'ದಳಪತಿ' ಸಿನಿಮಾ ಬಿಡುಗಡೆಗೆ ಸಮಸ್ಯೆ ಆಗಿದ್ದಾಗ ಜಯಲಲಿತಾ ಅವರ ಬಳಿ ಕೈಕಟ್ಟಿ ಮನವಿ ಮಾಡಿದ್ದರು. ಆಗ ಜಯಲಲಿತಾ ಆಂಟಿ ಎಂದು ಕರೆದಿದ್ದರೆ ವಿಜಯ್ ಪರಿಸ್ಥಿತಿ ಏನಾಗುತ್ತಿತ್ತು ಎಂದಿದ್ದರು.
ಹೀಗೆ ಟಿವಿಕೆ ಪಕ್ಷದ ಸ್ಥಾಪಕ ವಿಜಯ್ ಬಗ್ಗೆ ಸತ್ಯರಾಜ್ ಕಾಮೆಂಟ್ ಮಾಡುತ್ತಿದ್ದಂತೆ ಮಗ ಸಿಬಿ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದ ಪೋಸ್ಟ್ ವೈರಲ್ ಆಗಿತ್ತು. ವಿಜಯ್ ಫೋಟೊ ಹಾಕಿ ಆಡಿಕೊಳ್ಳುವವರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು. ತಂದೆ ಸತ್ಯರಾಜ್ ಕಾಮೆಂಟ್ ಬೆನ್ನಲ್ಲೇ ಸಿಬಿ ಮಾಡಿದ್ದ ಈ ಪೋಸ್ಟ್ ಚರ್ಚೆ ಹುಟ್ಟು ಹಾಕಿತ್ತು. ಪರೋಕ್ಷವಾಗಿ ವಿಜಯ್ ಪರ ಸಿಬಿ ಮಾತನಾಡಿದ್ದಾರೆ ಎಂದು ಚರ್ಚೆ ಆಗಿತ್ತು. ಇದೀಗ ನೇರವಾಗಿಯೇ ಟಿವಿಕೆ ಪಕ್ಷದ ಅಭ್ಯರ್ಥಿ ಪರ ಸಿಬಿ ಮತಯಾಚಿಸಿದ್ದಾರೆ.
ಚೆನ್ನೈನ ವೇಲಾಚೇರಿ ಕ್ಷೇತ್ರದ ಟಿವಿಕೆ ಪಕ್ಷದ ಅಭ್ಯರ್ಥಿ ಡಿ.ಆರ್. ಆರ್. ಕುಮಾರ್ ಅವರಿಗೆ ಮತ ನೀಡಿ ಎಂದು ಸಿಬಿ ಸತ್ಯರಾಜ್ ವೀಡಿಯೋ ಮಾಡಿ ಮನವಿ ಮಾಡಿದ್ದಾರೆ. ಅರೇ, ವಿಜಯ್ಗೆ ಮತ ಹಾಕಬೇಡಿ ಎಂದು ಸತ್ಯರಾಜ್ ಹೇಳ್ತಿದ್ದಾರೆ. ಆದರೆ ವಿಜಯ್ ಪಕ್ಷಕ್ಕೆ ಮತ ಹಾಕಿ ಅಂತ ಮಗ ಸಿಬಿ ಹೇಳ್ತಿದ್ದಾರೆ.
ವಿಜಯ್ ದೊಡ್ಡ ಅಭಿಮಾನಿ ಸಿಬಿ ಸತ್ಯರಾಜ್. ಮನೆಯಲ್ಲಿ ನನ್ನ ಫೋಟೊಗಳಿಗಿಂತ ಹೆಚ್ಚು ವಿಜಯ್ ಫೋಟೊ ಹಾಕ್ಕೊಂಡಿದ್ದಾನೆ ಎಂದು ಸ್ವತಹ ಸತ್ಯರಾಜ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅಷ್ಟರಮಟ್ಟಿಗೆ ವಿಜಯ್ ಅಂದ್ರೆ ಸಿಬಿಗೆ ಮೊದಲಿನಿಂದಲೂ ಅಭಿಮಾನ. ಅದೇ ಕಾರಣಕ್ಕೆ ಟಿವಿಕೆ ಪರ ಮಾತನಾಡುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ತಮಿಳುನಾಡಿನ 234 ಕ್ಷೇತ್ರಗಳಲ್ಲಿ ಟಿವಿಕೆ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ವಿಜಯ್ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ಒಂದು ಕ್ಷೇತ್ರದಲ್ಲೇ ಗೆಲ್ಲುವ ಭರವಸೆಯಲ್ಲಿದ್ದಾರೆ. ಜನಸೇವೆಗಾಗಿ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಿರುವುದಾಗಿ ವಿಜಯ್ ಹೇಳುತ್ತಿದ್ದಾರೆ. 'ಜನ ನಾಯಗನ್' ಅವರ ಕೊನೆಯ ಸಿನಿಮಾ ಆಗಬಹುದು ಎನ್ನಲಾಗ್ತಿದೆ. ಆದರೆ ಬಿಡುಗಡೆಗೂ ಮುನ್ನ ಈ ಸಿನಿಮಾ ಲೀಕ್ ಆಗಿ ಶಾಕ್ ಕೊಟ್ಟಿತ್ತು. ಮೇ 4ರಂದು ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳಲಿದೆ.


Click it and Unblock the Notifications