ಇಂಡಿಯನ್ 2 ಸಮಸ್ಯೆ ಬಗೆಹರಿಯಿತಾ? ಮದ್ರಾಸ್ ಕೋರ್ಟ್ ಹೇಳಿದ್ದೇನು?
ಕಮಲ್ ಹಾಸನ್ ಮತ್ತು ಶಂಕರ್ ಕಾಂಬಿನೇಷನ್ನಲ್ಲಿ ತಯಾರಾಗುತ್ತಿದ್ದ ಇಂಡಿಯನ್ 2 ಸಿನಿಮಾ ಆರ್ಥಿಕ ಕಾರಣದಿಂದ ನಿಂತು ಹೋಗಿತ್ತು. ನಿರ್ದೇಶಕ ಶಂಕರ್ ಮತ್ತು ನಿರ್ಮಾಪಕ ಲೈಕಾ ಪ್ರೊಡಕ್ಷನ್ ನಡುವಿನ ಭಿನ್ನಾಭಿಪ್ರಾಯದಿಂದ ಈ ಪ್ರಾಜೆಕ್ಟ್ ಮುಂದುವರಿಯಲಿಲ್ಲ.
ಈ ನಡುವೆ ಇಂಡಿಯನ್ 2 ಸಿನಿಮಾ ಬಿಟ್ಟು ಶಂಕರ್ ಮತ್ತೆರಡು ದೊಡ್ಡ ಪ್ರಾಜೆಕ್ಟ್ಗಳಿಗೆ ಕೈ ಹಾಕಿದ್ದರು. ಅಷ್ಟರಲ್ಲೇ ಎಚ್ಚೆತ್ತುಕೊಂಡ ಲೈಕಾ ಪ್ರೊಡಕ್ಷನ್ ಸಂಸ್ಥೆ ನಿರ್ದೇಶಕ ಶಂಕರ್ ವಿರುದ್ಧ ಮದ್ರಾಸ್ ಹೈ ಕೋರ್ಟ್ನಲ್ಲಿ ಕೇಸ್ ದಾಖಲಿಸಿದರು.
ಇಂಡಿಯನ್ 2 ಸಿನಿಮಾ ಮುಗಿಸುವ ಮುನ್ನ ಬೇರೆ ಯಾವುದೇ ಪ್ರಾಜೆಕ್ಟ್ ಮಾಡುವಂತಿಲ್ಲ ಎಂದು ಲೈಕಾ ಸಂಸ್ಥೆ ನ್ಯಾಯಾಲಯದ ಮೊರೆ ಹೋದರು. ಈ ಅರ್ಜಿ ಸ್ವೀಕರಿಸಿದ್ದ ಮದ್ರಾಸ್ ಹೈ ಕೋರ್ಟ್ ಶಂಕರ್ ಮತ್ತು ನಿರ್ಮಾಪಕರಿಗೆ ಒಂದು ವಾರ ಸಮಯ ನೀಡಿದೆ.

ಒಂದು ವಾರದಲ್ಲಿ ನಿಮ್ಮ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ ಎಂದು ಕಾಲಾವಕಾಶ ನೀಡಿದೆ. ಮುಂದಿನ ವಿಚಾರವನ್ನು ಏಪ್ರಿಲ್ 28ಕ್ಕೆ ಮಾಡಲಾಗುವುದು. ಅಷ್ಟರಲ್ಲೇ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದೆ ಎಂದು ಸೂಚಿಸಿದೆ.
ಇದೀಗ, ಶಂಕರ್ ಇಂಡಿಯನ್ 2 ಸಿನಿಮಾ ಮುಗಿಸಿಕೊಡುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಸ್ಯ ನಟ ವಿವೇಕ್ ಅವರು ಇಂಡಿಯನ್ 2 ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಆದರೆ, ಅವರ ಪಾತ್ರ ಪೂರ್ಣಗೊಳಿಸುವ ಮೊದಲೇ ನಿಧನರಾದ ಹಿನ್ನೆಲೆ ಆ ಪಾತ್ರಕ್ಕೆ ಬೇರೆ ಕಲಾವಿದನನ್ನು ಆಯ್ಕೆ ಮಾಡಿ ಸಿನಿಮಾ ಮುಂದುವರಿಸಲು ನಿರ್ಧರಿಸಿದ್ದಾರೆ.

ಕಮಲ್ ಹಾಸನ್ ಜೊತೆ ನಟಿಸಬೇಕೆಂದು ಬಹಳ ವರ್ಷಗಳಿಂದಲೂ ವಿವೇಕ್ ಕನಸು ಕಾಣುತ್ತಿದ್ದರು. ಇಂಡಿಯನ್ 2 ಚಿತ್ರದ ಮೂಲಕ ಆ ಕ್ಷಣ ಒದಗಿ ಬಂದಿತ್ತು. ದುರಾದೃಷ್ಟವಶಾತ್ ಇತ್ತೀಚಿಗಷ್ಟೆ ವಿವೇಕ್ ಹೃದಯಾಘಾತದಿಂದ ಮೃತಪಟ್ಟರು. ಈಗ ಅವರು ಮಾಡಬೇಕಿದ್ದ ಪಾತ್ರ ಬೇರೆಯವರಿಂದ ಮಾಡಿಸಬೇಕಾದ ಅನಿವಾರ್ಯತೆ ನಿರ್ದೇಶಕರಿಗಿದೆ. ಸದ್ಯಕ್ಕೆ ವಿವೇಕ್ ಅವರ ಪಾತ್ರವನ್ನು ಯಾರು ಮುಂದುವರಿಸಲಿದ್ದಾರೆ ಎನ್ನುವುದು ತಿಳಿದಿಲ್ಲ.
ಇಂಡಿಯನ್ 2 ಚಿತ್ರಕ್ಕಾಗಿ ಶಂಕರ್ ಅವರಿಗೆ 36 ಕೋಟಿ ಸಂಭಾವನೆ ಜೊತೆಗೆ ನೆಟ್ ಕಲೆಕ್ಷನ್ನಲ್ಲಿ ಶೇಕಡಾವಾರು ಗಳಿಕೆ ಹಂಚಿಕೆ ಮಾಡುವ ಒಪ್ಪಂದ ಆಗಿತ್ತು. ಸುಮಾರು 230 ಕೋಟಿ ಬಜೆಟ್ ಈ ಚಿತ್ರಕ್ಕಾಗಿ ಖರ್ಚು ಮಾಡಲಾಗುತ್ತಿದೆ.

Recommended Video
ಪ್ರಸ್ತುತ, ಕಮಲ್ ಹಾಸನ್ ಮಾಸ್ಟರ್ ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ವಿಕ್ರಂ ಸಿನಿಮಾ ಮಾಡ್ತಿದ್ದಾರೆ. ಈ ಕಡೆ ಶಂಕರ್ ಅವರು ರಾಮ್ ಚರಣ್ ಜೊತೆ ಒಂದು ಸಿನಿಮಾ, ಬಾಲಿವುಡ್ ನಟ ರಣ್ವೀರ್ ಸಿಂಗ್ ಜೊತೆ ಒಂದು ಸಿನಿಮಾ ಘೋಷಿಸಿದ್ದಾರೆ. ಈ ನಡುವೆ ಇಂಡಿಯನ್ 2 ಸಿನಿಮಾ ಮುಗಿಸಿಕೊಡಬೇಕಾದ ಒತ್ತಡ ನಿರ್ದೇಶಕರ ಮೇಲಿದೆ.


Click it and Unblock the Notifications











