ತಮಿಳು ವೇದಿಕೆಯಲ್ಲಿ ಕನ್ನಡ ಹಾಡು ಹಾಡಿ ಗೆದ್ದ ಶಿವಾನಿಗೆ ಭಾರೀ ಅವಕಾಶ ಕೊಟ್ಟ ಸ್ಟಾರ್ ನಟ
ಗಾಯನ ಕ್ಷೇತ್ರಕ್ಕೆ ಬರಬೇಕು ಎಂದುಕೊಳ್ಳುವವರಿಗೆ ಜೀ ವಾಹಿನಿಯ ಸರಿಗಮಪ ಶೋ ದೊಡ್ಡ ವೇದಿಕೆಯಾಗಿದೆ. ಈ ಶೋಗೆ ಬಂದು ಹಾಡಿ ಗೆದ್ದವರು ಮುಂದೆ ಸಿನಿಮಾಗಳಲ್ಲಿ ಹಾಡಲು ಅವಕಾಶ ಗಿಟ್ಟಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಸಂಚಿತ್ ಶೆಟ್ಟಿ ಸೇರಿ ಹಲವರು ಸರಿಗಮಪ ಶೋ ಮೂಲಕ ಬೆಳಕಿಗೆ ಬಂದವರು.
ಜೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 19ರಲ್ಲಿ ಚಿಕ್ಕಮಗಳೂರಿನ ಶಿವಾನಿ ನವೀನ್ ರನ್ನರ್ ಅಪ್ ಆಗಿದ್ದರು. ಈಗ ಈಕೆ ತಮಿಳು ಸರಿಗಮಪ ಸೀನಿಯರ್ಸ್ ಶೋನಲ್ಲಿ ತಮ್ಮ ಗಾಯನದಿಂದ ಮೋಡಿ ಮಾಡುತ್ತಿದ್ದಾರೆ. 5ನೇ ಸೀಸನ್ ಆಡಿಷನ್ ವೇಳೆಯೇ 'ಸೋಜುಗದ ಸೂಜು ಮಲ್ಲಿಗೆ' ಹಾಡು ಹಾಡಿ ಶಿವಾನಿ ಕಮಾಲ್ ಮಾಡಿದ್ದರು. ತಮಿಳು ವೇದಿಕೆಯಲ್ಲಿ ಆಕೆಯ ಕನ್ನಡ ಗಾಯನಕ್ಕೆ ತೀರ್ಪುಗಾರರು ಫಿದಾ ಆಗಿದ್ದರು.

ಶಿವಾನಿ ಹಾಡಿದ 'ಸೋಜುಗದ ಸೂಜು ಮಲ್ಲಿಗೆ' ಹಾಡು ಕೇಳಿ ತಮಿಳಿನ ಖ್ಯಾತ ನಟ ಆಕೆಗೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಈ ವಿಚಾರವನ್ನು ಸೆಮಿಫೈನಲ್ ವೇಳೆ ತೀರ್ಪುಗಾರ್ತಿ ಶ್ವೇತಾ ಮೋಹನ್ ಹೇಳಿದ್ದಾರೆ. ಇದನ್ನು ಕೇಳಿ ಶಿವಾನಿ ನವೀನ್ ಅಚ್ಚರಿಗೊಂಡಿದ್ದಾರೆ. ಅಷ್ಟೇ ಅಲ್ಲ, ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ನಟಿ, ಗಾಯಕಿ ಆಂಡ್ರಿಯಾ ಕೂಡ ಅವಕಾಶ ಕೊಡುವುದಾಗಿ ಹೇಳಿದ್ದಾರೆ.
ತಮಿಳು ಸರಿಗಮಪ ಸೀಸನ್-5ರ ಫಿನಾಲೆಗೆ ಚಿಕ್ಕಮಗಳೂರಿನ ಹುಡುಗಿ ಶಿವಾನಿ ನವೀನ್ ಆಯ್ಕೆ ಆಗಿದ್ದಾರೆ. ಆಕೆ ಜೊತೆ ಇನ್ನು 5 ಮಂದಿ ಫಿನಾಲೆ ಟಿಕೆಟ್ ಪಡೆದಿದ್ದಾರೆ. ಸೆಮಿ ಫೈನಲ್ನಲ್ಲಿ 'ಮಯ್ಯ ಮಯ್ಯ' ಹಾಡು ಹಾಡಿ ಶಿವಾನಿ ಕಮಾಲ್ ಮಾಡಿದ್ದರು. ಈ ಮೂಲಕ ಆಕೆಗೆ ಫಿನಾಲೆಗೆ ಹೋಗುವ ಅವಕಾಶ ಸಿಕ್ಕಿತ್ತು. ಆಕೆಯ ಗಾಯನಕ್ಕೆ ಮತ್ತೊಮ್ಮೆ ತೀರ್ಪುಗಾರರು, ಇತರೆ ಸ್ಪರ್ಧಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಇನ್ನು ಮತ್ತೊಮ್ಮೆ 'ಸೋಜುಗದ ಸೂಜು ಮಲ್ಲಿಗೆ' ಹಾಡು ಹಾಡುವಂತೆ ನಿರೂಪಕಿ ಕೇಳಿದಾಗ ಶಿವಾನಿ ಮತ್ತೆ ತಮ್ಮ ಕಂಚಿನ ಕಂಠದಲ್ಲಿ ಆ ಹಾಡು ಹಾಡಿ ಎಲ್ಲರನ್ನು ಮಂತ್ರಮಗ್ಧರನ್ನಾಗಿಸಿದರು.
ಶಿವಾನಿ ಹಾಡು ಕೇಳಿ ವೇದಿಕೆ ಏರಿ ಶ್ವೇತಾ ಮೋಹನ್ ಅಭಿನಂದಿಸಿದರು. ಆಡಿಷನ್ ವೇಳೆ ಶಿವಾನಿ 'ಸೋಜುಗದ ಸೂಜು ಮಲ್ಲಿಗೆ' ಹಾಡು ಹಾಡಿದ್ದನ್ನು ನೋಡಿ ಧನುಷ್ ಸರ್ ಮೆಸೇಜ್ ಮಾಡಿದ್ದರು. ಯಾರು ಈ ಹುಡುಗಿ, ಬಹಳ ಚೆನ್ನಾಗಿ ಹಾಡುತ್ತಾಳೆ. ನನ್ನ ಮುಂದಿನ ಸಿನಿಮಾದಲ್ಲಿ ಆಕೆಗೆ ಅವಕಾಶ ಕೊಡುತ್ತೇನೆ ಎಂದು ಮೆಸೇಜ್ ಮಾಡಿ ಹೇಳಿದ್ದಾಗಿ ಶ್ವೇತಾ ವಿವರಿಸಿದ್ದಾರೆ.
ವೇದಿಕೆಗೆ ಬಂದ ಆಂಡ್ರಿಯಾ "ನೀನು ಫಿನಾಲೆಗೆ ಹೋಗದೇ ಇದ್ದರೂ ಪರವಾಗಿಲ್ಲ. ನನ್ನೊಟ್ಟಿಗೆ ಆಲ್ಬಮ್ನಲ್ಲಿ ಹಾಡಬಹುದು ಬಿಡು. ಖಂಡಿತ ನಿನಗೆ ಅವಕಾಶ ಕೊಡುತ್ತೇನೆ" ಎಂದು ಭರವಸೆ ನೀಡಿದ್ದಾರೆ.
ಶಿವಾನಿ ತಂದೆ ನವೀನ್ ಆರ್ಕೇಸ್ಟ್ರಾ ಹಾಡುಗಾರರು. ತಾಯಿಗೂ ಕಲೆಯಲ್ಲಿ ಆಸಕ್ತಿಯಿದೆ. ಹಾಗಾಗಿ ಮಗಳು ಗಾಯನದತ್ತ ಮುಖ ಮಾಡಿದ್ದಳು. ಸರಿಗಮಪ ಕನ್ನಡ ಲಿಟಲ್ ಚಾಂಪ್ಸ್ ವೇದಿಕೆಯಲ್ಲಿ ಅದ್ಭುತವಾಗಿ ಹಾಡಿ ಫಿನಾಲೆ ತಲುಪಿದ್ದರು. ಕೊನೆ ಹಂತದಲ್ಲಿ ರನ್ನರ್ ಅಪ್ ಆಗಿದ್ದರು.
ಅಂದಹಾಗೆ ಶಿವಾನಿ ತಾಯಿ ತಮಿಳುನಾಡು ಮೂಲದವರು. ಹಾಗಾಗಿ ಶಿವಾನಿಗೆ ಮನೆಯಲ್ಲಿ ತಮಿಳು ಸಿನಿಮಾ ನೋಡುವುದು, ಹಾಡುವುದು ಕರಗತವಾಗಿದೆ. ಹಾಗಾಗಿ ತಮಿಳು ಶೋನಲ್ಲಿ ಅವಕಾಶ ಸಿಕ್ಕಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆಕೆ ಟ್ರೋಫಿ ಗೆಲ್ಲಬೇಕು ಎಂದು ಸಾಕಷ್ಟು ಜನ ಕನ್ನಡಿಗರು ಹಾರೈಸುತ್ತಿದ್ದಾರೆ. ಶೀಘ್ರದಲ್ಲೇ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು ಶಿವಾನಿ ಗೆದ್ದು ಬರಲಿ ಎಂದು ಹಾರೈಸೋಣ.


Click it and Unblock the Notifications











