"ಐದಾರು ವರ್ಷಗಳಿಂದ ಕನ್ನಡ ಚಿತ್ರರಂಗ ಜೋರಾಗಿ ಸದ್ದು ಮಾಡ್ತಿದೆ, ತಮಿಳು ಚಿತ್ರರಂಗ ಸದಾ ಮೆರೆಯುತ್ತಿದೆ": ಶಿವಣ್ಣ
ಶಿವರಾಜ್ಕುಮಾರ್ ನಟನೆಯ ತಮಿಳು ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ಬಿಡುಗಡೆಗೆ ಸಿದ್ಧವಾಗಿದೆ. ಧನುಷ್ ಹೀರೊ ಆಗಿ ನಟಿಸಿರುವ ಈ ಆಕ್ಷನ್ ಚಿತ್ರದಲ್ಲಿ ಶಿವಣ್ಣ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ ಕೂಡ ಹ್ಯಾಟ್ರಿಕ್ ಹೀರೊ ಭಾಗಿ ಆಗಿದ್ದರು.
ಧನುಷ್ ಹಾಗೂ ಶಿವಣ್ಣ ಇಬ್ಬರು ವೇದಿಕೆ ಏರಿ ತಮ್ಮಿಬ್ಬರ ಆತ್ಮೀಯತೆ ಬಗ್ಗೆ ಮಾತನಾಡಿದರು. ಅವರಿಬ್ಬರ ಮಾತುಗಳು ವೈರಲ್ ಆಗ್ತಿದೆ. ಇನ್ನು ಇಬ್ಬರೂ ಕೂಡ ಚಿತ್ರದ 'ಈರಪ್ಪನೂ' ಹಾಡಿಗೆ ಹೆಜ್ಜೆ ಹಾಕಿದ್ದರು. ಸದ್ಯ ಸಿನಿಮಾ ಪ್ರಚಾರದ ಭಾಗವಾಗಿ ಶಿವಣ್ಣ ಚೆನ್ನೈನಲ್ಲೇ ಬೀಡುಬಿಟ್ಟಿದ್ದಾರೆ. ಸಂದರ್ಶನಗಳಲ್ಲಿ ಭಾಗಿ ಆಗಿ ಸಿನಿಮಾ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡುತ್ತಾ ಬರ್ತಿದ್ದಾರೆ. ಚೆನ್ನೈನಲ್ಲೇ ಹುಟ್ಟಿ ಓದಿ ಬೆಳೆದ ಸೆಂಚುರಿ ಸ್ಟಾರ್ ತಮಿಳು ಸಿನಿಮಾಗಳನ್ನು ಹತ್ತಿರದಿಂದ ನೋಡುತ್ತಾ ಬರ್ತಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಮಿಳು ಚಿತ್ರರಂಗದ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. "ತಮಿಳು ಚಿತ್ರರಂಗ ದೊಡ್ಡದಾಗಿ ಬೆಳೆಯುತ್ತಿದೆ. ಕನ್ನಡ ಚಿತ್ರರಂಗ ಕಳೆದ ಐದಾರು ವರ್ಷಗಳಿಂದ ಬಹಳ ದೊಡ್ಡದಾಗಿ ಸದ್ದು ಮಾಡ್ತಿದೆ. ಆದರೆ ತಮಿಳು ಚಿತ್ರರಂಗ ಮೊದಲಿನಿಂದ ದೊಡ್ಡದಾಗಿದೆ. ಫಿಲ್ಮ್ ಮೇಕರ್ಸ್ ಆಲೋಚನೆಗಳು ದೊಡ್ಡದಾಗಿದೆ"
"ಬಾಲಚಂದರ್ ಸರ್, ಭಾಗ್ಯರಾಜ್ ಸರ್, ಭಾರತೀರಾಜಾ ಎಲ್ಲರೂ ವಿಭಿನ್ನ ಆಲೋಚನೆಗಳಿರುವ ಫಿಲ್ಮ್ ಮೇಕರ್ಸ್. ಬಳಿಕ ಮಣಿರತ್ನಂ, ಶಂಕರ್, ನೆಲ್ಸನ್, ವೆಟ್ರಿಮಾರನ್, ಲೋಕೇಶ್ ಕನಕರಾಜ್ ಎಲ್ಲರೂ ತಮ್ಮದೇ ವಿಭಿನ್ನ ಆಲೋಚನೆ, ಸಿನಿಮಾ ಮೇಕಿಂಗ್ ಮಾಡ್ತಾ ಬರ್ತಿದ್ದಾರೆ. ವಿಜಯ್, ಸೂರ್ಯ, ಧನುಷ್, ಕಾರ್ತಿ, ಆರ್ಯ, ಅಜಿತ್ ಸರ್ ಅವರೆಲ್ಲರ ಜೊತೆಗೆ ಈಗಲೂ ಕಮಲ್ ಸರ್, ರಜನಿ ಸರ್ ಅಗ್ರಸ್ಥಾನದಲ್ಲಿದ್ದಾರೆ. ಇವತ್ತಿನ ಹೊಸ ಕಲಾವಿದರೊಂದಿಗೆ ಪೈಪೋಟಿ ನಡೆಸುತ್ತಿದ್ದಾರೆ. ಕನ್ನಡದಲ್ಲಿ ಹಿರಿಯರು ಇರಬೇಕು ಎನ್ನುವ ಮಾತಿದೆ. ಅದರಂತೆ ಹಿರಿಯರ ನೆರಳಿನಲ್ಲಿ ಬೆಳೆಯಬೇಕು" ಎಂದಿದ್ದಾರೆ.
ಕನ್ನಡ ಚಿತ್ರರಂಗದ ಬಗ್ಗೆ ಕೂಡ ಶಿವಣ್ಣ ಮಾತನಾಡಿದ್ದಾರೆ. "ಕನ್ನಡ ಚಿತ್ರರಂಗದಲ್ಲಿ ಪುಟ್ಟಣ್ಣ ಕಣಗಾಲ್ ಸರ್, ಪಂತುಲು, ವಿಜಯ ರೆಡ್ಡಿ, ಸೋಮಶೇಖರ್ ಸರ್, ಸಿಂಗೀತಂ ಶ್ರೀನಿವಾಸ್, ಸಿದ್ದಲಿಂಗಯ್ಯ ಹೀಗೆ ದಿಗ್ಗಜ ನಿರ್ದೇಶಕರಿದ್ದರು. ಬಳಿಕ ಪ್ರೇಮ್, ಓಂ ಪ್ರಕಾಶ್, ಉಪೇಂದ್ರ ಹೀಗೆ ಹಲವರು. ಅದರಲ್ಲೂ ಉಪೇಂದ್ರ ಮಾಡಿದ 'ಓಂ' ಸಂಚಲನ ಸೃಷ್ಟಿಸಿತ್ತು. ಇವತ್ತಿಗೂ ಅದು ಅಪ್ಡೇಟೆಡ್ ಸಿನಿಮಾ. ಅದನ್ನು ಯಾರು ಯೋಚಿಸುವುದಕ್ಕೂ ಸಾಧ್ಯವಿಲ್ಲ. ಇವತ್ತಿಗೂ ರೀಮೇಕ್ ಮಾಡಬಹುದು. ಅಷ್ಟು ಅಪ್ಡೇಟ್ ಆಗಿ ಇರುತ್ತದೆ. ಬಳಿಕ ಎ. ಹರ್ಷ, ಪ್ರಶಾಂತ್ ನೀಲ್, ರಾಜ್ ಬಿ. ಶೆಟ್ಟಿ, ರಿಷಬ್ ಶೆಟ್ಟಿ ಹೀಗೆ ಎಲ್ಲರೂ ವಿಭಿನ್ನ ಸಿನಿಮಾಗಳನ್ನು ಮಾಡ್ತಾ ಬಂದಿದ್ದಾರೆ" ಎಂದು ಶಿವಣ್ಣ ವಿವರಿಸಿದ್ದಾರೆ.
ಸಹೋದರ ಪುನೀತ್ ರಾಜ್ಕುಮಾರ್ ಕುರಿತು ಶಿವಣ್ಣ ಮಾತನಾಡಿದ್ದಾರೆ. "ಅವನು ಇಲ್ಲ ಎಂದು ನಾನು ಅಂದುಕೊಳ್ಳುವುದೇ ಇಲ್ಲ. ಹಾಗೆ ಭಾವಿಸುವುದು ತಪ್ಪು. ದಿನಾ ಸಮಾಧಿಗೆ ಹೋಗುವುದು, ಪೂಜೆ ಎಲ್ಲಾ ಮಾಡಿದರೆ ಅವನನ್ನು ದೂರ ಮಾಡಿದಂತೆ ಆಗುತ್ತದೆ. ಆತನ ಆಲೋಚನೆಗಳು ನಮ್ಮಲ್ಲಿ ಇರುವಂತೆ ನೋಡಿಕೊಳ್ಳಬೇಕು. ಅವನ ಎಮೋಷನ್ನ ನಮ್ಮ ಜೀವನ ಪೂರ್ತಿ ಕೊಂಡೊಯ್ಯಬೇಕು. ಆಗಲೇ ಅಪ್ಪು ಅಮರ." ಎಂದು ಶಿವಣ್ಣ ಹೇಳಿದ್ದಾರೆ.
ತಮಿಳಿನಲ್ಲಿ ಮತ್ತೆರಡು ಸಿನಿಮಾಗಳನ್ನು ಸೆಂಚುರಿ ಸ್ಟಾರ್ ಒಪ್ಪಿಕೊಂಡಿದ್ದಾರೆ. 'ಬೈರತಿ ರಣಗಲ್' ಚಿತ್ರದ ಶೇ 60% ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಶಿವಣ್ಣ ಮಾಹಿತಿ ನೀಡಿದ್ದಾರೆ. ಕನ್ನಡದಲ್ಲೂ ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಕರಟಕ ದಮನಕ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ಪ್ರಭುದೇವ ಕೈ ಜೋಡಿಸಿದ್ದಾರೆ.


Click it and Unblock the Notifications











