"ತಮಿಳುನಾಡಿನಲ್ಲಿ ಪುನೀತ್ ಅಣ್ಣ ಶಿವಣ್ಣ ಅಂತಾರೆ.. ಅಂತಹ ತಮ್ಮ ಸಿಕ್ಕಿದ್ದಕ್ಕೆ ಹೆಮ್ಮೆಪಡುತ್ತೀನಿ": ಶಿವಣ್ಣ
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಈಗ ಪರಭಾಷಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ಜೊತೆ ನಟಿಸಿರುವ 'ಜೈಲರ್' ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಧನುಷ್ ಜೊತೆಗೆ ನಟಿಸುತ್ತಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ 'ಜೈಲರ್' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಫ್ಯಾಮಿಲಿ ಸಮೇತ ಶಿವಣ್ಣ ಹಾಜರಾಗಿದ್ದರು. ವೇದಿಕೆ ಏರಿ ಮಾತನಾಡಿದ್ದರು.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಆಕ್ಷನ್ ಎಂಟರ್ಟೈನರ್ 'ಜೈಲರ್' ಚಿತ್ರದಲ್ಲಿ ಶಿವಣ್ಣ ಪುಟ್ಟ ಪಾತ್ರ ಮಾಡಿದ್ದಾರೆ. ಮಂಗಳೂರಿನಲ್ಲಿ ಆ ಸನ್ನಿವೇಶಗಳ ಚಿತ್ರೀಕರಣ ನಡೆದಿತ್ತು. ಇನ್ನು ತಮಿಳಿನ ಬಿಹೈಂಡ್ವುಡ್ಸ್ ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ಶಿವಣ್ಣ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಚಿಕ್ಕಂದಿನಿಂದಲೂ ತಮಿಳುನಾಡು ಜೊತೆಗಿನ ನಂಟು, ರಜಿನಿಕಾಂತ್ ಹಾಗೂ ಕಮಲ್ ಹಾಸನ್ ಮೇಲಿನ ಅಭಿಮಾನ ಹೀಗೆ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಸಂದರ್ಶನದ ವೇಳೆ ಪುನೀತ್ ರಾಜ್ಕುಮಾರ್ ಹೆಸರು ಪ್ರಸ್ತಾಪವಾಯಿತು. "ಕೃಷ್ಣಗಿರಿಯಲ್ಲಿ ಮಲ್ಲಿಗೆ ಹೂವಿನ ತೋಟದಲ್ಲಿ 'ವೇದ' ಸಿನಿಮಾ ಚಿತ್ರೀಕರಣ ನಡೀತು. 2 ದಿನ ಅಲ್ಲೇ ಇದ್ದೆವು. ಅಲ್ಲಿನ ಹೋದಾಗ ಅಲ್ಲಿನ ಜನ ನಮ್ಮ ಮೇಲೆ ತೋರಿದ ಪ್ರೀತಿ ಮರೆಯೋಕೆ ಸಾಧ್ಯವಿಲ್ಲ. ಅಲ್ಲಿನ ಜನ ನನ್ನ ನೋಡಿ ಇವ್ರು ಪುನೀತ್ ಅವ್ರ ಅಣ್ಣ, ಪುನೀತ್ ಅಣ್ಣ ಎನ್ನುತ್ತಿದ್ದರು. ಅದು ನನ್ನ ಮನಸ್ಸಿಗೆ ತಟ್ಟಿತು. ನನ್ನ ತಮ್ಮ ಎಷ್ಟು ಜನರ ಹೃದಯಕ್ಕೆ ಎಷ್ಟು ಬೇಗ ಹತ್ತಿರವಾಗಿದ್ದಾನೆ ಅನ್ನಿಸುತ್ತದೆ"
"ನಿಜಕ್ಕೂ ಅಂತಹ ತಮ್ಮನಿಗೆ ಅಣ್ಣನಾಗಿದ್ದಕ್ಕೆ ಬಹಳ ಹೆಮ್ಮೆಪಡುತ್ತೇನೆ. ಯಾಕಂದರೆ ಅಂತ ಪ್ರೀತಿ ಅವನು ಸಂಪಾದಿಸಿದ್ದಾನೆ. ಆ ರೀತಿ ಗುರ್ತಿಸಿಕೊಳ್ಳುವುದು ತುಂಬಾ ಚೆನ್ನಾಗಿರುತ್ತದೆ. ಶಿವರಾಜ್ಕುಮಾರ್ ಎನಿಸಿಕೊಳ್ಳುವುದಕ್ಕಿಂತ ಪುನೀತ್ ರಾಜ್ಕುಮಾರ್ ಅಣ್ಣ ಎನಿಸಿಕೊಳ್ಳುವುದು ಬಹಳ ಚೆನ್ನಾಗಿದೆ. 'ಕ್ಯಾಪ್ಟನ್ ಮಿಲ್ಲರ್' ಶೂಟಿಂಗ್ ವೇಳೆ ಕುಟ್ರಾಲಂಗೆ ಹೋಗಿದ್ದೆ. ಅಲ್ಲೂ ಜನ ಅದೇ ಪ್ರೀತಿ ತೋರಿಸುತ್ತಾರೆ. ಅದೆಲ್ಲಾ ಬಹಳ ಖುಷಿಯಾಗುತ್ತದೆ" ಎಂದಿದ್ದಾರೆ.
ಚೆನ್ನೈನಲ್ಲಿ ಹುಟ್ಟಿ ಬೆಳೆದ ಶಿವಣ್ಣ ನಿರರ್ಗಳವಾಗಿ ತಮಿಳು ಮಾತನಾಡುಯತ್ತಾರೆ. ಚೆನ್ನೈಗೆ ಹೋದಾಗಲೆಲ್ಲಾ ಅಲ್ಲಿ ಬಸ್ ಏರಿ ಓಡಾಡಬೇಕು ಎನಿಸುತ್ತೆ. ಕೆಲವೊಮ್ಮೆ ಕಂಡೆಕ್ಟರ್ ಏನ್ ಸರ್ ನೀವು ಬಸ್ನಲ್ಲಿ ಎಂದು ಕೇಳ್ತಾರೆ. ಹಳೆಯದೆಲ್ಲಾ ಮರೆಯೋಕೆ ಸಾಧ್ಯವಿಲ್ಲ. ಇನ್ನು ರಜನಿಕಾಂತ್ ಸರ್ ಸ್ಟೈಲ್ ಬಹಳ ಇಷ್ಟ. ಆ ಸ್ಟೈಲ್ ಅವರಿಗೆ ಮಾತ್ರ ಚೆಂದ. ರಜನಿ ಸರ್ ಭೇಟಿಯಾದ ಕೂಡಲೇ ಅಪ್ಪಿಕೊಳ್ಳುತ್ತಾರೆ. ಅಂತಹದೊಂದು ಬಾಂಧವ್ಯ ನಮ್ಮ ಕುಟುಂಬದ ಜೊತೆಗಿದೆ"

"ಶಬರಿಮಲೆಗೆ ಚಿಕ್ಕಂದಿನಲ್ಲಿ ನಾನು, ಅಪ್ಪಾಜಿ, ರಜನಿ ಸರ್ ಎಲ್ಲರೂ ಒಟ್ಟಿಗೆ ಹೋಗುತ್ತಿದ್ದೆವು. ನನ್ನ ಕೈಹಿಡಿದು ರಜನಿ ಸರ್ ಕರೆದುಕೊಂಡು ಹೋಗುತ್ತಿದ್ದರು. ಅವರು ನನ್ನ ಚಿಕ್ಕಪ್ಪ ಇದ್ದಂತೆ. 'ಜೈಲರ್' ಚಿತ್ರದಲ್ಲಿ ಚಿಕ್ಕ ಪಾತ್ರ ನನ್ನದು. ಹತ್ತು ಹನ್ನೆರಡು ನಿಮಿಷ ನನ್ನ ಪಾತ್ರ ಇರುತ್ತದೆ. ಅವರೊಟ್ಟಿಗೆ ಚಿತ್ರೀಕರಣನ ಅನುಭವ ಮರೆಯೋಕೆ ಆಗೋದಿಲ್ಲ. ಮಂಗಳೂರಿನಲ್ಲಿ ಶೂಟಿಂಗ್ ವೇಳೆ ಒಂದೇ ಹೋಟೆಲ್ನಲ್ಲಿ ಉಳಿದುಕೊಂಡಿದ್ದೆವು. ರಜನಿ ಸರ್ಗೆ ಫಿಶ್ ಕರಿ ತಗೊಂಡು ಹೋದೆ. ಮೊದಲಿಗೆ ಎಣ್ಣೆ ಪದಾರ್ಥ ಬೇಡ ಅಂದ್ರು. ಚೆನ್ನಾಗಿರುತ್ತದೆ ನೋಡಿ ಎಂದೆ. ನಂತರ ತಿಂದು ಬಹಳ ಚೆನ್ನಾಗಿದೆ ಅಂದ್ರು. ಮರುದಿನ ಬಂದು ಫಿಶ್ ಕರಿ ಚೆನ್ನಾಗಿತ್ತು. ಮಿಸ್ ಮಾಡಿಕೊಳ್ತಿದ್ದೆ ಅಂದ್ರು"
"ನಾನು ಕಮಲ್ ಹಾಸನ್ ದೊಡ್ಡ ಅಭಿಮಾನಿ. ಚಿಕ್ಕಂದಿನಿಂದಲೂ ಅವರ ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದೆವು. ಚೆನ್ನೈನಲ್ಲಿರುವಾಗ ನಮ್ಮ ಆಫೀಸ್ನಿಂದ ಫೋನ್ ಮಾಡಿ ಫಸ್ಟ್ ಡೇ ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದೆ. ಕೆಲವೊಮ್ಮೆ ನಾನು ರಾಜ್ಕುಮಾರ್ ಅವ್ರ ಆಫೀಸ್ನಿಂದ ಮ್ಯಾನೇಜರ್ ಮಾತನಾಡುತ್ತಿರುವುದು ಎಂದು ಸುಳ್ಳು ಹೇಳಿ ಟಿಕೆಟ್ ಪಡೆದು ಸಿನಿಮಾ ನೋಡುತ್ತಿದೆ. ಫೋನ್ನಲ್ಲಿ ಧ್ವನಿ ಬದಲಾಯಿಸಿ ಮಾತನಾಡಿ ಮ್ಯಾನೇಜರ್ ಅಂತೇಳಿ ಟಿಕೆಟ್ ತಗೊಂಡಿದ್ದು ಇದೆ" ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











