ವಾರೆವ್ಹಾ.. ಕನ್ನಡ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್? ಶಿವಣ್ಣ ಕೊಟ್ಟ ಸುಳಿವು ಏನು?
ಶಿವರಾಜ್ಕುಮಾರ್ ನಟನೆಯ '45' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ಬೇರೆ ರಾಜ್ಯಗಳಲ್ಲಿ ಕೂಡ ಪ್ರಮೋಷನ್ ಜೋರಾಗಿದೆ. ಸದ್ಯ ಚೆನ್ನೈನಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ಜನವರಿ 2ರಂದು ತಮಿಳು, ತೆಲುಗು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ತಮಿಳು ಸಂದರ್ಶನಗಳಲ್ಲಿ ಶಿವಣ್ಣ, ರಾಜ್ ಬಿ ಶೆಟ್ಟಿ ಮಾತನಾಡುತ್ತಿದ್ದಾರೆ.
ಈಗಾಗಲೇ ಶಿವಣ್ಣ ಹಾಗೂ ಉಪೇಂದ್ರ ಬೇರೆ ಭಾಷೆಗಳಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಹಾಗಾಗಿ '45' ಚಿತ್ರಕ್ಕೆ ಅಲ್ಲಿ ಕೂಡ ಒಳ್ಳೆ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ. 'ಜೈಲರ್' ಬಳಿಕ 'ಜೈಲರ್- 2' ಚಿತ್ರದಲ್ಲಿ ಸೆಂಚುರಿ ಸ್ಟಾರ್ ನಟಿಸುತ್ತಿದ್ದಾರೆ. ಮತ್ತೊಮ್ಮೆ ನರಸಿಂಹ ಆಗಿ ಅತಿಥಿ ಪಾತ್ರದಲ್ಲಿ ಅಬ್ಬರಿಸಲು ಸಜ್ಜಾಗುತ್ತಾರೆ.

ಕನ್ನಡ ಕಲಾವಿದರು ತಮಿಳು, ತೆಲುಗು ಸಿನಿಮಾಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ. ಆದರೆ ತಮಿಳು ಕಲಾವಿದರು ಯಾರೂ ಕನ್ನಡದಲ್ಲಿ ಯಾಕೆ ನಟಿಸ್ತಿಲ್ಲ ಎನ್ನುವ ಪ್ರಶ್ನೆಗೆ ಶಿವಣ್ಣ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ. "ಅದು ನಡೆಯುತ್ತೆ ನೋಡ್ತಾಯಿರಿ. ಯಾರು ಅಂತ ಈಗ ಹೇಳಲ್ಲ. ಖಂಡಿತ ನಡೆಯುತ್ತೆ" ಎಂದು ಶಿವಣ್ಣ ಹೇಳಿರುವುದು ಕುತೂಹಲ ಮೂಡಿಸಿದೆ. ಶಿವಣ್ಣನ ಮಾತಿಗೆ ಪಕ್ಕದಲ್ಲೇ ಇದ್ದ ರಾಜ್ ಬಿ ಶೆಟ್ಟಿ ಕೂಡ ಹುಬ್ಬು ತಿರುಗಿಸಿ ಅದಕ್ಕಿಂತ ಮೇಲೆ ಎನ್ನುವಂತೆ ರಿಯಾಕ್ಷನ್ ಕೊಟ್ಟಿದ್ದಾರೆ.
ಶಿವಣ್ಣ ಮಾತು ಕೇಳಿ ಅಪ್ಪಿ ತಪ್ಪಿ ರಜನಿಕಾಂತ್ ಕನ್ನಡದಲ್ಲಿ ಚಿತ್ರದಲ್ಲಿ ನಟಿಸುತ್ತಾರಾ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಶಿವಣ್ಣನ ಮಾತು ಕೇಳಿದ್ರೆ ಯಾರೋ ಅವರಿಗೆ ಆಪ್ತರಾಗಿರುವವರೇ ಮುಂದಿನ ಸಿನಿಮಾದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುವಂತೆ ಕಾಣ್ತಿದೆ. ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಸಾಕಷ್ಟು ತಮಿಳು ನಟರ ಜೊತೆ ಶಿವಣ್ಣ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಮಲ್ ಕನ್ನಡದ ಸಿನಿಮಾದಲ್ಲಿ ನಟಿಸುವುದು ದೂರದ ಮಾತು. ಇನ್ನುಳಿದಂತೆ ರಜನಿಕಾಂತ್ ನಟಿಸುತ್ತಾರಾ? ಎನ್ನುವ ಕೆಲವರು ಅಂದಾಜಿಸುತ್ತಿದ್ದಾರೆ.
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ರಜನಿಕಾಂತ್ ಆರಂಭದಲ್ಲಿ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ತಮಿಳು ಚಿತ್ರರಂಗದಲ್ಲಿ ಬೆಳೆಯುತ್ತಿದ್ದಂತೆ ಕನ್ನಡ ಸಿನಿಮಾಗಳಿಂದ ದೂರಾಗಿದ್ದರು. ಆದರೆ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸೋ ಆಸೆ ವ್ಯಕ್ತಪಡಿಸುತ್ತಲೇ ಇದ್ದಾರೆ. ಒಳ್ಳೆ ಕಥೆ ಸಿಕ್ಕರೆ ಕಂಡಿತ ನಟಿಸುತ್ತಾರೆ. ಶಿವಣ್ಣ ತೆರೆಮರೆಯಲ್ಲಿ ಅದಕ್ಕಾಗಿ ಕರಸತ್ತು ನಡೆಸುತ್ತಿರುವಂತೆ ಕಾಣುತ್ತಿದೆ. ಇದು ನಿಜವಾದರೆ ಸಿನಿರಸಿಕರಿಗೆ ಹಬ್ಬವೇ ಸರಿ. ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವಾಗ ಯಾವುದು ಕೂಡ ಕಷ್ಟವಾಗಲ್ಲ.
ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಇದೀಗ ತೆಲುಗು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. 'ಪೆದ್ದಿ' ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ ಶಿವಣ್ಣ 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದಲ್ಲಿ ಹೀರೊ ಆಗುತ್ತಿದ್ದಾರೆ. ಆ ಮೂಲಕ ತೆಲುಗು ಚಿತ್ರರಂಗದಲ್ಲಿ ನಾಯಕನಟನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಆ ಸಿನಿಮಾ ಸೆಟ್ಟೇರಿದೆ.
ತಮಿಳಿನಿಂದ ಕೂಡ ಸಾಕಷ್ಟು ಅವಕಾಶಗಳು ಶಿವಣ್ಣ ಅವರನ್ನು ಹುಡುಕಿ ಬರ್ತಿದೆ. ಅತಿಥಿ ಪಾತ್ರ ಅಲ್ಲ ನಾಯಕ ನಟನಾಗಿ ನಟನಾಗಿ ನಟಿಸುವಂತೆ ಕೇಳುತ್ತಿದ್ದಾರೆ. 'ಜೈಲರ್- 2' ಚಿತ್ರದ ಬಗ್ಗೆ ಮಾತನಾಡಿ ಒಂದು ದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ. ನಾಳೆ ಮತ್ತೆ ತಂಡ ಸೇರಿಕೊಳ್ಳುತ್ತೇನೆ. ಈ ಬಾರಿ ಚಿತ್ರದಲ್ಲಿ ನನಗೆ ಹೆಚ್ಚು ಸನ್ನಿವೇಶಗಳು ಇರುತ್ತದೆ ಎಂದು ಶಿವಣ್ಣ ಹೇಳಿದ್ದಾರೆ.
ಇನ್ನುಳಿದಂತೆ 'ಡ್ಯಾಡ್', '666 ಆಪರೇಷನ್ ಡ್ರೀಮ್ ಥಿಯೇಟರ್' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ಕಾರಣಕ್ಕೆ ಕೊಂಚ ಬ್ರೇಕ್ ಪಡೆದಿದ್ದ ಶಿವಣ್ಣ ಬಳಿಕ ಚೇತರಿಸಿಕೊಂಡು ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಈ ವಾರ '45' ಚಿತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.


Click it and Unblock the Notifications











