14 ವರ್ಷಗಳ ದಾಂಪತ್ಯದಲ್ಲಿ ಬಿರುಕು? ಮುರಿದು ಬಿತ್ತು ಧನುಷ್ ಅಣ್ಣ ಸೆಲ್ವ ರಾಘವನ್ ಎರಡನೇ ಮದುವೆ ?
ಕಾಲ ಎಷ್ಟೇ ಬದಲಾದರು ಇವತ್ತು ಕೂಡ ಅದೂ-ಇದೂ ಎಂದು ಮಾತನಾಡುವರ ಸಂಖ್ಯೆ ಕಡಿಮೆಯಾಗಿಲ್ಲ. ತಮಗೆ ಸಂಬಂಧ ಇಲ್ಲದ ವಿಚಾರದ ಕುರಿತು ಹಲವಾರು ಜನ ಇವತ್ತು ಕೂಡ ಮಾತನಾಡುತ್ತಲೇ ಇರುತ್ತಾರೆ. ಹೀಯಾಳಿಸುವುದು..ನಿಂದಿಸುವುದೇ..ಸಾಧನೆ ಎಂಬಂತೆ ಕಾಲೆಳೆಯುತ್ತಾರೆ.ಆಕಾರ..ರೂಪ..ಒನಪು..ಒಯ್ಯಾರ.. ಇಷ್ಟೇ ಅಲ್ಲದೇ ಖಾಸಗಿ ವಿಷಯವನ್ನು ಬಿಡದಂತೆ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇನ್ನು.. ಸೆಲೆಬ್ರೆಟಿಗಳ ಪಾಡು ಹೇಳಲು ಅಸಾಧ್ಯ. ಕುಂತರು .. ನಿಂತರು ..
ಬದಲಾದ ಈ ಕಾಲದಲ್ಲಿ ಅನೇಕರ ಬಾಯಿಗೆ ಇವರು ಆಹಾರವಾಗುತ್ತಲೇ ಇರುತ್ತಾರೆ. ಟ್ರೋಲ್ ಹೆಸರಿನಲ್ಲಿ ನಿಂದನೆಗೆ ಗುರಿಯಾಗುತ್ತಲೇ ಇರುತ್ತಾರೆ. ಇಷ್ಟೇ ಅಲ್ಲ ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ.

ಹೀಗಿರುವಾಗ ಇನ್ಸ್ಟಾಗ್ರಾಮ್ನಲ್ಲಿ ಮದುವೆಯ ಫೋಟೊಗಳನ್ನು ಯಾರಾದರೂ ಏಕಾಏಕಿ ಡಿಲೀಟ್ ಮಾಡಿದರೆ..? ಚರ್ಚೆಯಾಗದಿರುತ್ತಾ..? ಸಂಸಾರ ಹಳಿ ತಪ್ಪಿದೆ ಎನ್ನುವ ಅನುಮಾನ ಬಾರದಿರುತ್ತಾ..? ಸೆಲ್ವ ರಾಘವನ್ ವಿಚಾರದಲ್ಲಿ ಸದ್ಯ ಇದೇ ಆಗಿದೆ.
ಹೌದು, ಸೆಲ್ವ ರಾಘವನ್.. ಪ್ರಖ್ಯಾತ ನಿರ್ದೇಶಕ ಕಸ್ತೂರಿ ರಾಜಾ ಅವರ ಹಿರಿಯ ಮಗ. ಸೂಪರ್ ಸ್ಟಾರ್ ರಜಿನಿಕಾಂತ್ ಮಾಜಿ ಅಳಿಯ ಧನುಷ್ ಸಹೋದರ. ''ಕಾದಲ್ ಕೊಂಡೇನ್''.. ''7G ರೇನ್ಬೋ ಕಾಲನಿ''.. ಸೇರಿ ಹತ್ತಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸೆಲ್ವ ರಾಘವನ್ ಅತ್ಯುತ್ತಮ ನಟ ಕೂಡ ಹೌದು ಸಾಹಿತಿ ಕೂಡ ಹೌದು.
ಇಂಥಾ ಸೆಲ್ವ ರಾಘವನ್ 2006ರಲ್ಲಿ ತಮ್ಮ ಮೊದಲ ಮೂರು ಚಿತ್ರಗಳ ಕಥಾನಾಯಕಿ, ಪ್ರಖ್ಯಾತ ನಟಿ ಸೋನಿಯಾ ಅಗರ್ವಾಲ್ ಅವರನ್ನು ಮದುವೆಯಾಗಿದ್ದರು. ಆದರೆ.. ಈ ಸಂಬಂಧ ನಾಲ್ಕು ವರ್ಷ ಕೂಡ ಉಳಿಯಲಿಲ್ಲ. ಮನಸಾರೆ ಪ್ರೀತಿಸಿ ಮದುವೆಯಾಗಿದ್ದರು ಕೂಡ 2010ರಲ್ಲಿ ಸೋನಿಯಾ ಅಗರ್ವಾಲ್ ಅವರಿಗೆ ಸೆಲ್ವ ರಾಘವನ್ ವಿಚ್ಛೇದನ ನೀಡಿದರು. ದೂರ ಆದರು.
ಆ ನಂತರ 2011ರಲ್ಲಿ ತಮ್ಮ ಸಹೋದರ ಧನುಷ್ ಅಭಿನಯದ''ಮಾಯಕ್ಕಂ ಎನ್ನ'' ಚಿತ್ರದ ಸಹಾಯಕ ನಿರ್ದೇಶಕಿಯಾಗಿದ್ದ ಗೀತಾಂಜಲಿ ರಾಮನ್ ಅವರನ್ನು ಸೆಲ್ವ ರಾಘವನ್ ಮದುವೆಯಾಗಿದ್ದರು. ಇವರ ಪ್ರೀತಿಯ ಸಂಕೇತವಾಗಿ ಇವರಿಬ್ಬರಿಗೆ ಎದೆಯೆತ್ತರಕ್ಕೆ ಬೆಳೆದ ಒಬ್ಬಳು ಮಗಳಿದ್ದಾಳೆ. ಇಬ್ಬರು ಗಂಡು ಮಕ್ಕಳಿದ್ದಾರೆ.

ಆದರೆ ಈಗ ಮದುವೆಯಾದ 14 ವರ್ಷದ ನಂತರ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹಬ್ಬಿದೆ. ಇದಕ್ಕೆ ಪೂರಕವಾಗಿ ಸೆಲ್ವ ರಾಘವನ್ ಎರಡನೇ ಪತ್ನಿ ಗೀತಾಂಜಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಇಬ್ಬರ ಎಲ್ಲ ಫೋಟೊಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ.
ಗೀತಾಂಜಲಿ ಅವರ ಈ ನಡೆ ಸದ್ಯ ಹಲವರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಸೆಲ್ವ ರಾಘವನ್ ಮತ್ತು ಗೀತಾಂಜಲಿ ಮದುವೆ ಮುರಿದು ಬಿದ್ದಿದೆ ಎಂದು ಹಲವರು ಸದ್ಯ ಮಾತನಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವ್ಯೆಯಕ್ತಿಕ ಬದುಕಿನ ಜಂಜಾಟಗಳನ್ನು ಮರೆತು ಇವರಿಬ್ಬರ ದಾಂಪತ್ಯ ಜೀವನದ ಕುರಿತು ಚರ್ಚೆ ಮಾಡುತ್ತಿದ್ದಾರೆ.
ಇನ್ನು ಕಳೆದ ವರ್ಷ ಸೆಲ್ವ ರಾಘವನ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ನಾವು ಒಬ್ಬರೇ ಬಂದಿದ್ದೇವೆ.. ನಾವು ಒಬ್ಬರೇ ಹೋಗುತ್ತೇವೆ.. ಇದರ ನಡುವೆ ಸಂಗಾತಿಯ ಅಗತ್ಯವೇಕೆ..? ಸಂಗಾತಿ ಎನ್ನುವುದು ಮರಿಚೀಕೆ. ಹತ್ತಿರ ಹೋದಷ್ಟು ದೂರ ಓಡುತ್ತದೆ ಎಂದು ಬರೆದುಕೊಂಡಿದ್ದರು. ಆಗಲೇ ಇವರ ದಾಂಪತ್ಯ ಹಳಿ ತಪ್ಪಿರುವ ಅನುಮಾನ ಹಲವರಲ್ಲಿ ಬಂದಿತ್ತು. ಆ ಅನುಮಾನ ಈಗ ಗೀತಾಂಜಲಿ ಫೋಟೊಗಳನ್ನು ಡಿಲೀಟ್ ಮಾಡಿದ ಹಿನ್ನೆಲೆ ಇನ್ನೂ ಹೆಚ್ಚಾಗಿದೆ. ತಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಹಬ್ಬಿರುವ ಈ ಸುದ್ದಿಗಳಿಗೆ ಸೆಲ್ವ ರಾಘವನ್ ಆಗಲಿ ಗೀತಾಂಜಲಿ ಆಗಲಿ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ನೀಡುತ್ತಾರಾ.? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











