ಹತ್ತು ವರ್ಷದ ತಪಸ್ಸು, ಜನರ ಮೇಲಿನ ಪ್ರೀತಿ ; ತಮಿಳುನಾಡಿನಲ್ಲಿ ಎದ್ದಿದ್ದು ಹೇಗೆ ದಳಪತಿ ಅಲೆ ? ಶ್ರೀಯಾ ಶರಣ್ ವಿಶ್ಲೇಷಣೆ
ವಿಜಯ್ ಹೊಡೆದ ವಿಶಲ್ಗೆ ದ್ರಾವಿಡ ಕೋಟೆ ಬೆಚ್ಚಿ ಬಿದ್ದಿದೆ. ಭಾರತದ ರಾಜಕೀಯ ಇತಿಹಾಸದಲ್ಲೇ ಹೊಸದೊಂದು ಕ್ರಾಂತಿಯ ಅಲೆ ಎದ್ದಿದೆ. ಹಿಂದೆ ಕೇವಲ ಬಾಕ್ಸಾಫೀಸ್ ಕಿಂಗ್ ಆಗಿದ್ದ ದಳಪತಿ ಈಗ ಅಖಂಡ ತಮಿಳುನಾಡಿನ ಅಧಿಪತಿಯಾಗಿ ಹೊರ ಹೊಮ್ಮಿದ್ದಾರೆ. ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಆದರೆ ವಿಜಯ್ ಅವರ ಈ ಗೆಲುವು ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಜಯ್ಗೆ ದಕ್ಕಿದ್ದು ಕೇವಲ ಆಕಸ್ಮಿಕ ಗೆಲುವು ಮಾತ್ರ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜನ ಮತ ಹಾಕಿದ್ದು ವಿಜಯ್ ಅವರ ಮುಖ ನೋಡಿ ಅಲ್ಲ ಬದಲಿಗೆ ಅವರು ಘೋಷಿಸಿದ ಉಚಿತ ಸ್ಕೀಮ್ಗಳನ್ನು ನೋಡಿ ಎನ್ನುತ್ತಿದ್ದಾರೆ. ಮುಂಬರುವ ಐದು ವರ್ಷದಲ್ಲಿ ತಮಿಳುನಾಡನ್ನು ವಿಜಯ್ ಸಾಲದ ಸುಳಿಯಲ್ಲಿ ಸಿಲುಕಿಸಲಿದ್ದಾರೆ ಎಂದು ಕೂಡ ವ್ಯಂಗ್ಯವಾಡುತ್ತಿದ್ದಾರೆ.

ತಮ್ಮ ಈ ಗೆಲುವನ್ನು ಆಡಿಕೊಳ್ಳುತ್ತಿರುವವರಿಗೆ, ತಮ್ಮ ಆಡಳಿತದ ಮೇಲೆ ಅನುಮಾನ ಪಡುತ್ತಿರುವವರಿಗೆ ವಿಜಯ್ ಮುಂಬರುವ ದಿನಗಳಲ್ಲಿ ಉತ್ತರ ಹೇಗೆ ಕೊಡ್ತಾರೆ..? ಕೊಡ್ತಾರಾ..? ಇಲ್ವಾ..? ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ವಿಜಯ್ ಗೆಲುವು ಆಕಸ್ಮಿಕ ಅಲ್ಲ, ಅದರ ಹಿಂದೆ ಹತ್ತು ವರ್ಷದ ಅವರ ತಪಸ್ಸಿದೆ ಎಂದು ಶ್ರೀಯಾ ಶರಣ್ ಹೇಳಿದ್ದಾರೆ.
ಈ ಕುರಿತು ''ಎನ್ಡಿಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶ್ರೀಯಾ ಸರಣ್, ವಿಜಯ್ ರಾಜಕೀಯಕ್ಕೆ ಹೊಸಬರಾಗಿರಬಹುದು, ಆದರೆ ಈ ಗೆಲುವಿನ ಹಿಂದೆ ಅವರ ಹತ್ತು ವರ್ಷದ ಶ್ರಮ ಇದೆ ಎಂದಿದ್ದಾರೆ. ಹತ್ತು ವರ್ಷಗಳಿಂದ ಅವರು ಕೆಳ ಹಂತದಲ್ಲಿ ಸಕ್ರಿಯರಾಗಿದ್ದರು, ಹೀಗಾಗಿ ಈ ಮಹೋನ್ನತ ಗೆಲುವಿಗೆ ಅವರು ಸಂಪೂರ್ಣ ಅರ್ಹರು ಎಂದು ಹೇಳಿರುವ ಶ್ರೀಯಾ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಆ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅವರು ಶ್ರಮ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು ರಾಜಕೀಯದಲ್ಲಿ ಅವರು ಹೇಗೆ ಬೆಳೆಯುತ್ತಾರೆ, ಎಷ್ಟು ಪ್ರಜ್ವಲಿಸುತ್ತಾರೆ, ಎನ್ನುವುದನ್ನು ಈಗಲೇ ಹೇಳಲು ಸಾಧ್ಯ ಇಲ್ಲ ಎಂದು ಹೇಳಿರುವ ಶ್ರೀಯಾ ರಾಜಕೀಯದಲ್ಲಿಯೂ ಅವರು ಗೆಲ್ಲುತ್ತಾರೆ ಎನ್ನುವ ನಂಬಿಕೆ ನನಗೆ ಇದೆ ಎಂದು ಹೇಳಿದ್ಧಾರೆ. ವಿಜಯ್ ತುಂಬಾ ಉತ್ತಮವಾದ ವ್ಯಕ್ತಿ ಎಂದು ಮೆಚ್ಚಿದ್ದಾರೆ.
ಇನ್ನೂ ವಿಜಯ್ಗೆ ತಮ್ಮ ಅಭಿಮಾನಿಗಳ ಮೇಲೆ ಮತ್ತು ಜನರ ಮೇಲಿರುವ ಪ್ರೀತಿ ಹಾಗೂ ಕಾಳಜಿಗೆ ಉದಾಹರಣೆಯನ್ನು ಕೂಡ ನೀಡಿರುವ ಶ್ರೀಯಾ, ಅದೊಂದು ದಿನ ನಾವು ಚಿತ್ರವೊಂದರ ಚಿತ್ರೀಕರಣ ಮಾಡುತ್ತಿದ್ದೆವು, ಹೊರಗಡೆ ಸುಡು ಸುಡು ಬಿಸಿಲಿತ್ತು ಎಂದು ಹೇಳಿದ್ದಾರೆ.

ಅವತ್ತು ಬಹುಶಃ 45 ಡಿಗ್ರಿ ತಾಪಮಾನವಿರಬಹುದು, ಅಂತಹ ಸಮಯದಲ್ಲಿ ಯಾರೂ ತಮ್ಮ ಎಸಿ ರೂಮ್ದಿಂದ ಹೊರ ಬರುವುದಿಲ್ಲ ಆದರೆ ವಿಜಯ್ ಹೊರ ಬಂದರು, ಯಾಕೆಂದರೆ ಅವರ ದರ್ಶನಕ್ಕಾಗಿ ಬಹುದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಕಾಯುತ್ತಿದ್ದರು ಎಂದು ನೆನಪು ಮಾಡಿಕೊಂಡಿರುವ ಶ್ರೀಯಾ, ಹೊರಗಡೆ ಹೋಗಿ ಗಂಟೆಗಟ್ಟಲೆ ವಿಜಯ್ ಆ ಬಿಸಿಲಿನಲ್ಲಿ ಜನರ ನಡುವೆ ನಿಂತುಕೊಂಡರು, ಅವರೊಂದಿಗೆ ಬೆರೆತರು ಎಂದು ಹೇಳಿದ್ದಾರೆ.
ಅವತ್ತು ಬಂದ ಯಾರನ್ನೂ ನಿರಾಸೆ ಮಾಡದೇ ಎಲ್ಲರ ಜೊತೆ ಫೋಟೊ ತೆಗೆಸಿಕೊಂಡರು, ಅವರಿಗೆ ಅಭಿಮಾನಿಗಳ ಬಗ್ಗೆ ಕಾಳಜಿ ಇದೆ, ಜನರ ಮೇಲೆ ಪ್ರೀತಿ ಇದೆ ಎನ್ನುವುದಕ್ಕೆ ಇದೊಂದು ಘಟನೆ ಸಾಕ್ಷಿ ಎಂದು ಹೇಳಿರುವ ಶ್ರೀಯಾ ಸರಣ್ ಅವರ ಈ ಯಶಸ್ಸಿನ ಹಿಂದೆ ಸಾಕಷ್ಟು ಪರಿಶ್ರಮ ಇದೆ ಎಂದು ಹೇಳಿದ್ದಾರೆ. ವಿಜಯ್ ಗೆಲುವನ್ನು ವಿಶ್ಲೇಷಿಸಿದ್ದಾರೆ. ವಿಜಯ್ ಅವರ ಈ ಗೆಲುವಿನಿಂದ ನನಗೆ ಅಚ್ಚರಿ ಆಗಿಲ್ಲ ಎಂದಿದ್ದಾರೆ.


Click it and Unblock the Notifications