ಕನ್ನಡ ಸಿನಿಮಾದ ಬಗ್ಗೆ ಟ್ವೀಟ್ ವಿವಾದ: ಸ್ಪಷ್ಟನೆ ನೀಡಿದ ನಟಿ ಶ್ರುತಿ ಹಾಸನ್
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ನಲ್ಲಿ ಬರ್ತಿರುವ ಸಲಾರ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಶ್ರುತಿ ಹಾಸನ್ ಆಯ್ಕೆಯಾಗುತ್ತಿದ್ದಂತೆ ಕನ್ನಡ ಚಿತ್ರಾಭಿಮಾನಿಗಳು ರೊಚ್ಚಿಗೆದ್ದಿದ್ದರು. ಚಿತ್ರತಂಡದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಕನ್ನಡಿಗರ ಕೋಪಕ್ಕೆ ಕಾರಣವಾಗಿದ್ದು, 2017ರಲ್ಲಿ ಶ್ರುತಿ ಹಾಸನ್ ಕನ್ನಡ ಸಿನಿಮಾರಂಗದ ಬಗ್ಗೆ ಮಾಡಿರುವ ಟ್ವೀಟ್. 4 ವರ್ಷದ ಹಿಂದೆ ಶ್ರುತಿ ಹಾಸನ್ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶ್ರುತಿ ಹಾಸನ್, 'ಕನ್ನಡ ಸಿನಿಮಾದಲ್ಲಿ ನಟಿಸುವ ಯಾವುದೇ ಪ್ಲಾನ್ ಇಲ್ಲ. ಈ ಬಗ್ಗೆ ಯಾರ ಜೊತೆಯೂ ಚರ್ಚೆ ಮಾಡಿಲ್ಲ' ಎಂದಿದ್ದರು. ಶ್ರುತಿ ಹಾಸನ್ ಈ ಟ್ವೀಟ್ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಟ್ವೀಟ್ ಬಗ್ಗೆ ಶ್ರುತಿ ಈಗ ಸ್ಪಷ್ಟನೆ ನೀಡಿದ್ದಾರೆ.

ಶ್ರುತಿ ಹಾಸನ್ ಟ್ವೀಟ್ ವಿವಾದ
ಶ್ರುತಿ ಹಾಸನ್ 2017ರಲ್ಲಿ ಕನ್ನಡ ಸಿನಿಮಾರಂಗದ ಬಗ್ಗೆ ಮಾಡಿ, ಈಗ ಸಲಾರ್ ಗೆ ಆಯ್ಕೆಯಾಗಿದ್ದು ಕನ್ನಡಿಗರನ್ನು ಕೆರಳಿಸಿತ್ತು. ಕನ್ನಡ ಸಿನಿಮಾ ಮಾಡಲ್ಲ ಎಂದು ಹೇಳಿ ಈಗ್ಯಾಕೆ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದೀರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಅಂದು ಬೇಡ ಎಂದು ಹೇಳಿ ಈಗ ಯಾಕೆ ಗ್ರೀನ್ ಸಿಗ್ನಲ್ ನೀಡಿದ್ದೀರಿ ಅಂತ ಕನ್ನಡ ಚಿತ್ರಾಭಿಮಾನಿಗಳು ತರಾಟೆ ತೆಗೆದುಕೊಂಡಿದ್ದರು.

ಡೇಟ್ ಸಮಸ್ಯೆಯಿಂದ ಕನ್ನಡ ಸಿನಿಮಾ ಮಾಡಿಲ್ಲ
ಸಲಾರ್ ಸಿನಿಮಾ ಮತ್ತು ವಿವಾದದ ಬಗ್ಗೆ ಶ್ರುತಿ ಹಾಸನ್ ಈಗ ಮಾತನಾಡಿದ್ದಾರೆ. ಆಂಗ್ಲ ವೆಬ್ ಪೋರ್ಟಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶ್ರುತಿ, 'ನಾನು ಈ ಯೋಜನೆಯ ಬಗ್ಗೆ ತುಂಬಾ ಉತ್ಸುಕಳಾಗಿದ್ದೇನೆ. ಕನ್ನಡ ಚಿತ್ರರಂಗದ ಜೊತೆ ಅಸೋಸಿಯೇಟ್ ಆಗಿರುವುದು ಸಂತಸವಾಗುತ್ತಿದೆ. ಅದ್ಭುತವಾದ ತಂಡ ಮತ್ತು ನನಗೆ ಉತ್ತಮ ಅನುಭವವಾಗಿದೆ. ಈ ಹಿಂದೆ ನನಗೆ ಕನ್ನಡ ಸಿನಿಮಾ ಮಾಡುವ ಅವಕಾಶ ಬಂದಿತ್ತು, ಆದರೆ ಡೇಟ್ ಮತ್ತು ಅನೇಕ ಕಾರಣಗಳಿಗೆ ಸಾಧ್ಯವಾಗಿರಲಿಲ್ಲ' ಎಂದಿದ್ದಾರೆ.

ಬೇರೆ ಬೇರೆ ಚಿತ್ರರಂಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ
'ನನ್ನ ತಂದೆ ಕಾಮಲ್ ಹಾಸನ್, ಅವರಂತೆ ಬೇರ ಬೇರೆ ಚಿತ್ರರಂಗದಲ್ಲಿ ಕೆಲಸ ಮಾಡುವುದನ್ನು ನೋಡಲು ಸಂತಸ ಪಡುತ್ತಾರೆ. ನಾವು ನಮ್ಮ ಭಾಷೆ ಮತ್ತು ಸಂಪ್ರದಾಯಗಳೊಂದಿಗೆ ವೈವಿಧ್ಯಮಯ ಸಂಸ್ಕೃತಿ ಹೊಂದಿದ್ದೇವೆ. ನನಗೆ ಬೇರೆ ಬೇರೆ ಚಿತ್ರರಂಗದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ' ಎಂದಿದ್ದಾರೆ.
Recommended Video

ಅಂದು ಮಾಡಿದ್ದ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ
ಇದೇ ಸಮಯದಲ್ಲಿ ಶ್ರುತಿ ಕನ್ನಡ ಸಿನಿಮಾ ಮಾಡಲ್ಲ ಎಂದು ಟ್ವೀಟ್ ಮಾಡಿ ವಿವಾದ ಸೃಷ್ಟಿಸಿಕೊಂಡಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿ, 'ಇಡಿ ವಿಷಯವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನನಗೆ ಎಲ್ಲಾ ಚಿತ್ರರಂಗದ ಬಗ್ಗೆ ಅತಿಯಾದ ಗೌರವವಿದೆ. ನಾನು ಯಾವಾಗಲು ಸಕಾರಾತ್ಮಕ ಕೆಲಸ ಮತ್ತು ಶಕ್ತಿಗಳ ಕಡೆ ಹೆಚ್ಚು ಗಮನ ಕೊಡುತ್ತೇನೆ' ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.


Click it and Unblock the Notifications











