ಬೆಂಗಳೂರಿನ ಯುವತಿ ಬಂಧನ: ದೆಹಲಿ ಪೊಲೀಸರ ಮೇಲೆ ಸಿದ್ಧಾರ್ಥ್ ಗರಂ
ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಸಿದ್ಧಾರ್ಥ್ ದೆಹಲಿ ಪೊಲೀಸರ ಮೇಲೆ ಗರಂ ಆಗಿದ್ದಾರೆ. ಸರಣಿ ಟ್ವೀಟ್ಗಳನ್ನು ಮಾಡಿ ದೆಹಲಿ ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.
ಶನಿವಾರ ಬೆಂಗಳೂರಿಗೆ ಬಂದಿದ್ದ ದೆಹಲಿ ಪೊಲೀಸರು ಅಂದು ರಾತ್ರಿ ಬೆಂಗಳೂರಿನ ಯುವತಿ 21 ವರ್ಷದ ದಿಶಾ ರವಿಯನ್ನು ಬಂಧಿಸಿ ದೆಹಲಿಗೆ ಕರೆದೊಯ್ದಿದ್ದಾರೆ. ದೆಹಲಿ ರೈತ ಹೋರಾಟದ 'ಟೂಲ್ ಕಿಟ್' ಪ್ರಕರಣಕ್ಕೆ ಸಂಬಂಧಿಸಿದಂತೆ ದಿಶಾ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದ ಬಗ್ಗೆ ಟ್ವೀಟ್ ಮಾಡಿರುವ ನಟ ಸಿದ್ಧಾರ್ಥ್ 'ದೆಹಲಿ ಪೊಲೀಸರಿಗೆ ನಾಚಿಕೆಯಾಗಬೇಕು' ಎಂದು ಹೇಳಿದ್ದಾರೆ.
'ಗೆಳೆಯರು ಸಿನಿಮಾಕ್ಕೆ ಹೋಗಲು ನಿರ್ಧರಿಸಿ, ಯಾವ ಸಿನಿಮಾ, ಎಷ್ಟು ಹೊತ್ತಿಗೆ ಹೋಗಬೇಕು, ಎಲ್ಲಿಗೆ ಬರಬೇಕು ಎಂಬುದನ್ನೆಲ್ಲಾ ಮೆಸೇಜ್ ಮಾಡಿಕೊಂಡರೆ, ಅದನ್ನೂ ಟೂಲ್ ಕಿಟ್ ಎನ್ನಲಾಗುತ್ತದೆಯೇ?' ಎಂದು ಸಿದ್ಧಾರ್ಥ್ ಪ್ರಶ್ನಿಸಿದ್ದಾರೆ.
'ಬಾಲಿವುಡ್ ನಟರು ಟೂಲ್ಕಿಟ್ ಬಳಸುವುದಲ್ಲಿ ನಿಸ್ಸೀಮರು. ನಾನು ನಿಸ್ಸಂದೇಹವಾಗಿ ದಿಶಾರವಿಗೆ ಬೆಂಬಲವಾಗಿ ನಿಲ್ಲುತ್ತಿದ್ದೇನೆ. ನಿನಗೆ ಹೀಗೆ ಆಯಿತಲ್ಲ ಎಂದು ಬೇಸರವಾಗುತ್ತಿದೆ ಸಹೋದರಿ. ಈ ಅನ್ಯಾಯ ಕೂಡ ಸರಿಹೋಗುತ್ತದೆ' ಎಂದು ಹೇಳಿದ್ದಾರೆ ಸಿದ್ಧಾರ್ಥ.

ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಮಾತನಾಡುವಂತಿಲ್ಲ: ಸಿದ್ಧಾರ್ಥ್
'ಪ್ರತಿಭಟನಾಕಾರರು ಚರ್ಚ್ನಲ್ಲಿ ಸೇರಿದರೆ ಅವರನ್ನು ಕ್ರಿಶ್ಚಿಯನ್ ಗೂಂಡಾಗಳು ಎನ್ನುತ್ತೀರಿ, ಅವರು ಬಿರಿಯಾನಿ ತಿಂದರೆ ಜಿಹಾದಿಗಳು ಎನ್ನುತ್ತೀರಿ, ತಲೆಗೆ ಮುಂಡಾಸು ಕಟ್ಟಿದರೆ ಜಿಹಾದಿಗಳು ಎನ್ನುತ್ತೀರಿ. ಅದೇ ಬೇರೆ ಸ್ಥಳದಲ್ಲಿ ಒಟ್ಟಾದರೆ 'ಟೂಲ್ಕಿಟ್' ಎನ್ನುತ್ತೀರಿ. ಆದರೆ ನಾವು ಮಾತ್ರ ಈ ಫ್ಯಾಸಿಸ್ಟ್ ಸರ್ಕಾರದ ಬಗ್ಗೆ ಏನೂ ಮಾತನಾಡುವಂತಿಲ್ಲ' ಎಂದು ಸಿದ್ಧಾರ್ಥ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

'ನಾವು ಅನ್ಯಾಯವೇ ತುಂಬಿರುವ ಸಮಾಜದಲ್ಲಿ ಬದುಕುತ್ತಿದ್ದೇವೆ'
'ಸ್ಟಾರ್ ನಟರ ಅಭಿಮಾನಿಗಳು ಹೇಗೆ ಹ್ಯಾಷ್ಟ್ಯಾಗ್ಗಳನ್ನು, ಡಿಪಿ ಗಳನ್ನು ಟ್ರೆಂಡ್ ಮಾಡುತ್ತಾರೆ ಎಂಬುದು ನೋಡಿದ್ದೇವೆ. ಇಂಥಹಾ ಸಮಯದಲ್ಲಿ ನಾವು 'ಟೂಲ್ಕಿಟ್' ಬಗ್ಗೆ ಮಾತನಾಡುವುದೇ ಮೂರ್ಖತನ. ನಾವು ಇಂದು ಅನ್ಯಾಯವೇ ತುಂಬಿರುವ ಸಮಾಜದಲ್ಲಿ ಬದುಕುತ್ತಿದ್ದೇವೆ' ಎಂದಿದ್ದಾರೆ ಸಿದ್ಧಾರ್ಥ್.

'ಟೂಲ್ ಕಿಟ್' ಸಿದ್ದಪಡಿಸುವಲ್ಲಿ ಸಹಾಯ ಮಾಡಿದ ಆರೋಪ
ದೆಹಲಿ ರೈತ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ್ದ ಗ್ರೆಟಾ ಥೆನ್ಬರ್ಗ್ ಹಾಗೂ ಆ ನಂತರ ಎದ್ದ 'ಟೂಲ್ ಕಿಟ್' ವಿಷಯವಾಗಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಗ್ರೆಟಾ ಥೆನ್ಬರ್ಗ್ ಟ್ವೀಟ್ ಮಾಡಿದ್ದ 'ಟೂಲ್ ಕಿಟ್' ಅನ್ನು ದಿಶಾ ರವಿ ಎಡಿಟ್ ಮಾಡಿದ್ದರು ಎಂಬುದೇ ಈ ಬಂಧನಕ್ಕೆ ಕಾರಣ. ಪರಿಸರ ಹೋರಾಟಗಾರ್ತಿಯೂ ಆಗಿರುವ ದಿಶಾ ರವಿ ಮೇಲೆ 'ರಾಜದ್ರೋಹ'ದ ಪ್ರಕರಣ ದಾಖಲಿಸಲಾಗಿದೆ.
Recommended Video

ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ
ದಿಶಾ ರವಿ ಬಂಧನಕ್ಕೆ ಹಲವು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ದಿಶಾ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪರವಾಗಿರುವವರು ದಿಶಾ ರವಿ ಬಂಧನದ ಪರವಾಗಿದ್ದಾರೆ. ದಿಶಾ ರವಿ ಜೊತೆಗೆ ಇನ್ನಿಬ್ಬರಿಗಾಗಿ ಈಗ ಪೊಲೀಸರು ಹುಡುಕಾಟ ನಡೆಸಿದ್ದಾರೆ.


Click it and Unblock the Notifications