ಎಲ್ಲರೆದುರು ಗಳಗಳ ಅತ್ತ ನಟ ಸಿದ್ಧಾರ್ಥ್, ವಿಡಿಯೋ ವೈರಲ್..!
ಚಿತ್ರ ಮತ್ತು ಪಾತ್ರಗಳಿಗಿಂತ ಹೆಚ್ಚು ವಿವಾದಗಳಿಂದ ಸುದ್ದಿಯಾದವರು ಸಿದ್ಧಾರ್ಥ್. ಕೇಂದ್ರ ಸರ್ಕಾರದ ವಿರುದ್ಧ ಆಗಾಗ ಕೆಂಡವನ್ನು ಕಾರುತ್ತಾ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗುತ್ತಾ ಬಂದವರಲ್ಲಿ ಸಿದ್ಧಾರ್ಥ್ ಕೂಡ ಒಬ್ಬರು ಮತ್ತು ಪ್ರಮುಖರು. ತಮ್ಮ 23 ವರ್ಷಗಳ ಸುದೀರ್ಘವಾದ ವೃತ್ತಿ ಬದುಕಿನಲ್ಲಿ ಬಾಯ್ಸ್, ನುವೋಸ್ತಾನಂಟೆ ನೇನೋದ್ದಂತನ, ರಂಗ್ ದೇ ಬಸಂತಿ ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದರು ಕೂಡ..
ಸಿದ್ಧಾರ್ಥ್ ಗೆ ಸಿಗಬೇಕಿದ್ದ ಮನ್ನಣೆ ಸಿಗಲಿಲ್ಲ. ತಮ್ಮ ವೃತ್ತಿ ಬದುಕಿನಲ್ಲಿ ಸಿದ್ದಾರ್ಥ್ ಆರಕ್ಕೇರಲಿಲ್ಲ. ಮೂರಕ್ಕೆ ಇಳಿಯಲಿಲ್ಲ. ಇದಕ್ಕೆ ಕಾರಣಗಳೇನು ? ಈ ಪ್ರಶ್ನೆಗೆ ನಿಖರ ಉತ್ತರ ಹೇಳುವುದು ಕಷ್ಟಕರವಾದರೂ ಕೆಲ ದಿನಗಳ ಹಿಂದೆ ಸಿದ್ಧಾರ್ಥ್ ತಾವ್ಯಾಕೇ ಸೂಪರ್ ಸ್ಟಾರ್ ಆಗಲಿಲ್ಲ ಎನ್ನುವುದಕ್ಕೆ ಖುದ್ದು ಉತ್ತರ ನೀಡಿದ್ದರು.

ನನಗೆ ಅವಕಾಶಗಳು ಬಂದಿಲ್ಲ ಅಂತೇನು ಇಲ್ಲ. ಬಂದಿದ್ದವು ಈಗಲೂ ಬರುತ್ತವೆ ಆದರೆ ಆ ಚಿತ್ರಗಳಲ್ಲಿ ಹುಡುಗಿಯರಿಗೆ ಹೊಡೆಯುವ, ಚುಡಾಯಿಸುವ, ಸೊಂಟದ ಮೇಲೆ ಕೈಯಾಡಿಸುವ ಸನ್ನಿವೇಶಗಳಿರುತ್ತವೆ ಎಂದು ಹೇಳಿದ್ದರು.
ಹುಡುಗಿಯರು ಹೇಗಿರಬೇಕು ಎಂದು ಹೇಳುವ ಕೆಲ ಕೊಳಕು ಮನಸ್ಥಿತಿಯ ಕಥೆಗಳನ್ನು ನಾನು ಕೇಳಿದ್ದೇನೆ ಎಂದು ಹೇಳಿದ್ದ ಸಿದ್ಧಾರ್ಥ್ ಇಂತಹ ಚಿತ್ರಗಳನ್ನು ಪಾತ್ರಗಳನ್ನು ಮಾಡಲು ನನಗೆ ಮೊದಲಿಂದ ಇಷ್ಟ ಇಲ್ಲ ಹೀಗಾಗಿ ನಾನು ಮಾಡಲಿಲ್ಲ, ಒಂದು ವೇಳೆ ಈ ಕೆಲಸಗಳನ್ನು ನಾನು ಮಾಡಿದ್ದರೆ ನಾನು ಕೂಡ ಇವತ್ತು ದೊಡ್ಡ ಸೂಪರ್ ಸ್ಟಾರ್ ಆಗಿರುತ್ತಿದ್ದೆ ಎಂದು ಹೇಳಿದ್ದರು.
ಇಂಥಾ ಸಿದ್ಧಾರ್ಥ್ ಇದೀಗ ಭಾವುಕರಾಗಿದ್ದಾರೆ. ಕಣ್ಣೀರು ಹಾಕಿದ್ದಾರೆ. ಹೌದು, ಅಸಲಿಗೆ ಸಿದ್ಧಾರ್ಥ್ ಅಭಿನಯದ 3BHK ಈ ಜುಲೈ 4ಕ್ಕೆ ತೆರೆಗೆ ಬರಲಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರ ಮಾಡುತ್ತಿರುವ ಸಿದ್ಧಾರ್ಥ್ ಮೊನ್ನೆ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ಸಮಯದಲ್ಲಿ ಚಿತ್ರದ ಕುರಿತು ಮಾತನಾಡಲು ಮುಂದಾದ ಸಿದ್ಧಾರ್ಥ್ ಭಾವುಕರಾದರು. ತಮ್ಮ ಹೆತ್ತವರ ಸಹಕಾರ-ಸಹಾಯ-ಬೆಂಬಲ ನೆನೆದು ಕಣ್ಣೀರು ಹಾಕಿದರು.
ಈ ಕುರಿತು ಮಾತನಾಡಿದ ಸಿದ್ಧಾರ್ಥ್ ನನ್ನ ಪೋಷಕರು ನನ್ನ ಈ 3BHK ಚಿತ್ರದ ಅಂಗ ಎಂದು ಹೇಳಿದರು. ಇದು ನನ್ನ 40ನೇ ಚಿತ್ರ ಎನ್ನುವ ವಿಚಾರವನ್ನು ನಾನು ನನ್ನ ತಂದೆ ತಾಯಿಗೆ ಹೇಳಿದಾಗ ನನ್ನ ತಂದೆ { ಸೂರ್ಯನಾರಾಯಣನ್ } ಅವರ ಮುಖದಲ್ಲಿ ಹೆಮ್ಮೆ ಇತ್ತು ನಿರಾಳ ಭಾವ ಇತ್ತು ಎಂದು ಹೇಳಿದ ಸಿದ್ಧಾರ್ಥ್ ನನ್ನ ಈ ಪ್ರಯಾಣದಲ್ಲಿ ನನ್ನ ತಂದೆ-ತಾಯಿಯ ಕೊಡುಗೆ ತುಂಬಾನೇ ದೊಡ್ಡದು ಯಾರು ನಂಬದೇ ಇದ್ದರೂ ಕೂಡ ಅವರು ನನ್ನನ್ನು ನಂಬಿದರು ನನ್ನನ್ನು ನೋಡಿಕೊಂಡರು ನನಗೋಸ್ಕರ ಅವರು ದುಡಿದ ಹಣವನ್ನು ಖರ್ಚು ಮಾಡಿದರು, ಈ ಎಲ್ಲಾ ಕಾರಣಗಳಿಂದ ಅವರು ಕೂಡ ನನ್ನ ಈ ವೃತ್ತಿ ಬದುಕಿನ ನನ್ನ ಈ 3BHKಯ ಭಾಗವಾಗಿದ್ದಾರೆ ಎಂದು ಹೇಳುತ್ತಾ ಸಿದ್ದಾರ್ಥ್ ಕಣ್ಣೀರು ಹಾಕಿದರು.

ಇನ್ನು ಇದೇ ಸಮಯದಲ್ಲಿ ತನ್ನನ್ನೂ ನಂಬಿ ಹಣ ಹೂಡಿದ ನಿರ್ಮಾಪಕರಿಗೆ ಧನ್ಯವಾದ ಹೇಳಿದರು. ಸೊಗಸಾದ ಪಾತ್ರವನ್ನು ನೀಡಿದ್ದಕ್ಕೆ ನಿರ್ದೇಶಕ ಶ್ರೀಗಣೇಶ್ ಅವರಿಗೆ ಕೂಡ ಧನ್ಯವಾದ ಹೇಳಿದರು. ಈ ಚಿತ್ರ ಮತ್ತು ಪಾತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದದ್ದು ಎಲ್ಲರು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು ಇದಕ್ಕಿಂತ ಖುಷಿಯ ವಿಚಾರ ಮತ್ತೊಂದು ಎಲ್ಲಿದೆ ಎಂದು ಹೇಳಿದರು. ಸದ್ಯ ಸಿದ್ಧಾರ್ಥ್ ಕಣ್ಣೀರು ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Click it and Unblock the Notifications











