Siddharth: "ಆಸ್ಪತ್ರೆಯಲ್ಲಿ ನಾನು ಬೆತ್ತಲಾಗಿದ್ದಾಗಲೂ ವೈದ್ಯರು, ನರ್ಸ್ ಫೋಟೊ, ವಿಡಿಯೋ ತೆಗೆದಿದ್ರು": ಸಿದ್ದಾರ್ಥ್
ತಮಿಳು ನಟ ಸಿದ್ದಾರ್ಥ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಸಿದ್ದಾರ್ಥ್ ನಿರ್ಮಿಸಿ ನಟಿಸಿರುವ 'ಚಿಕ್ಕು' ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಆದರೆ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ನಟನನ್ನು ತರಾಟೆಗೆ ತೆಗೆದುಕೊಂಡಿದ್ದರು. ಸುದ್ದಿಗೋಷ್ಠಿ ನಿಂತಿತ್ತು.
ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ತಮಿಳು ನಟ ಸಿದ್ದಾರ್ಥ್ ಸಿನಿಮಾ ಸುದ್ದಿಗೋಷ್ಠಿಗೆ ಅಡ್ಡಿ ಪಡಿಸಿದ್ದರ ಬಗ್ಗೆ ಪರ - ವಿರೋಧ ಚರ್ಚೆ ನಡೆಯಿತು. ನಟ ಶಿವರಾಜ್ಕುಮಾರ್ ಈ ಘಟನೆ ಬಗ್ಗೆ ಕ್ಷಮೆ ಕೂಡ ಕೇಳಿದ್ದರು. ಇತ್ತೀಚೆಗೆ ಇದೇ ವಿಚಾರದ ಬಗ್ಗೆ ಮಾತನಾಡುತ್ತಾ ಹೈದರಾಬಾದ್ನಲ್ಲಿ ನಟ ಸಿದ್ದಾರ್ಥ್ ಭಾವುಕರಾಗಿದ್ದರು. ಇನ್ನು ಫಿಲ್ಮ್ ಕಂಪಾನಿಯನ್ ಸಂದರ್ಶನದಲ್ಲಿ ಸೋಶಿಯಲ್ ಮೀಡಿಯಾ ಬಗ್ಗೆ ಸಿದ್ದಾರ್ಥ್ ಹೇಳಿಕೆ ವೈರಲ್ ಆಗ್ತಿದೆ. ಸೋಶಿಯಲ್ ಮೀಡಿಯಾ ಅಂದ್ರೆ ನನಗೆ ಭಯ ಎಂದು ಹೇಳಿದ್ದಾರೆ.

"ನಾನು ಸಿನಿಮಾ ಕಾರ್ಯಕ್ರಮಕ್ಕೆ ಬಂದರೆ ಮಾತನಾಡೋದು ನನ್ನ ಕೆಲಸ. ಶೂಟಿಂಗ್ಗೆ ಹೋದರೆ ಕ್ಯಾಮರಾ ಮುಂದೆ ನಟಿಸೋದು ನನ್ನ ಕೆಲಸ. ಆದರೆ ದಿನದ 24 ಗಂಟೆ ಕಾಮೆಂಟ್ಗಳಿಗೆ ಲಭ್ಯವಿರುವುದು ನನ್ನ ಕೆಲಸ ಅಲ್ಲ. 24 ಗಂಟೆ ನೀನು ಯಾವ ಶೂ ಹಾಕ್ಕೊಂಡಿದ್ದೀಯಾ, ಯಾವ ಒಳ ಉಡುಪು ಹಾಕ್ಕೊಂಡಿದ್ದೀಯಾ ಅನ್ನೋದು ನನಗೆ ಬೇಕಿಲ್ಲ. ನಾನು ಕೇಳುವುದು ಇಲ್ಲ"
"ನಾನು ಸಿನಿಮಾ ಪ್ರಚಾರಕ್ಕೆ ಬಂದರೂ ನನ್ನ ಸಿನಿಮಾ ಹಾಗೂ ನನ್ನ ಕರಿಯರ್ ಬಗ್ಗೆ ಮಾತನಾಡುತ್ತೀನಿ. ನೀವು ಏನೇ ಪ್ರಶ್ನೆ ಕೇಳಿದರೂ ನಾನು ಉತ್ತರಿಸುತ್ತೇನೆ. ಆದರೆ ಉಳಿದ ವಿಚಾರಗಳ ಬಗ್ಗೆ ಮಾತನಾಡಲು ನಾನು ಬಂದಿಲ್ಲ. ಏರ್ಪೋರ್ಟ್ಗೆ ಹೋದರೆ ಏರ್ಪೋರ್ಟ್ ಲುಕ್ ಅಂತ ಮಾತನಾಡುತ್ತಾರೆ. ನಾನು ಹೇಳುವುದು ಏನಂದ್ರೆ ಏರ್ಪೋರ್ಟ್ನಲ್ಲಿ ನನ್ನನ್ನು ನೋಡಬೇಡಿ. ಅದರಿಂದ ನನಗೆ 1 ರೂ. ಹೆಚ್ಚು ಸಿಗಲಿಲ್ಲ. ಅದರಿಂದ ನನ್ನ ಅಭಿಮಾನಿಗಳು ಖುಷಿ ಆಗಲ್ಲ"
"ಇದನ್ನೆಲ್ಲಾ ಬಳಸಿಕೊಂಡು ಕೆಲವರು ಬ್ಯುಸಿನೆಸ್ ಮಾಡ್ತಾರೆ. ಸ್ವಲ್ಪ ಯೋಚಿಸಿ. ಕೆಲವರು ಹೇಳ್ತಾರೆ. ನೀವು ಕಲಾವಿದ. ನೀನು ಎಲ್ಲೇ ಇದ್ದರೂ ಜನರೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವುದು ನಿನ್ನ ಜವಾಬ್ದಾರಿ. ಆದರೆ ಅದು ಸರಿಯಲ್ಲ. ಒಂದು ವಿಚಾರ ಹೇಳ್ತೀನಿ. ನಾನು ಆಸ್ಪತ್ರೆಯಲ್ಲಿ ಬೆತ್ತಲಾಗಿದ್ದಾಗ ಫೋಟೊಗಳನ್ನು ತೆಗೆದಿದ್ದಾರೆ"
"ಆಸ್ಪತ್ರೆ ವೈದ್ಯರು, ನರ್ಸ್ಗಳು ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಸೆಲ್ಫೋನ್ ಕ್ಯಾಮರಾ ಇದ್ದರೆ ಯಾವಾಗ ಎಲ್ಲಿ ಬೇಕಾದರೂ ಫೋಟೊ ಕ್ಲಿಕ್ಕಿಸಲು ಮುಂದಾಗುತ್ತಾರೆ. ಸರ್ ಒಂದು ಫೋಟೊ ಪ್ಲೀಸ್ ಎಂದು ಬರ್ತಾರೆ. ನಾನು ಬಟ್ಟೆ ಇಲ್ಲದೇ ಬೆತ್ತಲಾಗಿ ಎಕ್ಸ್ರೇ ತೆಗೆಸುತ್ತಿದ್ದರೆ ಆ ಸಮಯದಲ್ಲೂ ಫೋಟೊಗಳನ್ನು ತೆಗೆದುಕೊಂಡಿದ್ದಾರೆ. ನರ್ಸ್ಗಳು ವಿಡಿಯೋ ಮಾಡಿದ್ದಾರೆ. ನಾನು ಕೇಳ್ದೆ ಏನೂ ಮಾಡ್ತಿದ್ದೀರಾ? ಈಗ ಅಲ್ಲ ಹಲವು ವರ್ಷಗಳ ಹಿಂದೆ ಹೀಗೆ ನಡೆದಿತ್ತು."
"ಮಹಿಳೆ, ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು. ಆದರೆ ಮನುಷ್ಯರು ಅಂದ್ರೆ ಮನುಷ್ಯರು. ಸರಿಯಾಗಿ ಫೋನ್ ಬಳಸು ಗೊತ್ತಿಲ್ಲದವರ ಕೈಗೆ ಕೊಟ್ಟರೆ ಕೆಟ್ಟದಾಗಿಯೇ ಬಳಕೆ ಆಗುತ್ತದೆ. ಸೋಶಿಯಲ್ ಮೀಡಿಯಾ ನನಗೆ ಭಯ ಹುಟ್ಟಿಸುತ್ತದೆ. ಅಂತ್ಯಕ್ರಿಯೆಗೆ ಹೋದಾಗಲೂ ಫೋಟೊ, ವಿಡಿಯೋ ಮಾಡುತ್ತಾರೆ. ಅದು ಭಯ ತರಿಸುತ್ತದೆ"
"ನನ್ನ ಸ್ನೇಹಿತ ಕೊನೆಯುಸಿರೆಳೆದಿದ್ದ. ಅಂತ್ಯಕ್ರಿಯೆಗೆ ಹೋದಾಗ ನಾನು ಅಳುತ್ತಿದ್ದೆ. ಸನ್ಗ್ಲಾಸ್ ಹಾಕಿದ್ದೆ. ಸಾಕಷ್ಟು ಜನ ಫೋಟೊಗ್ರಾಫರ್ಗಳು ಸುತ್ತಾ ಇದ್ದರು. ಅದರಲ್ಲಿ ಒಬ್ಬರು ಇತ್ತ ನೋಡಿ ಎನ್ನುತ್ತಿದ್ದ. ನಾನು ಅಳುತ್ತಿದ್ದೆ. ಸನ್ಗ್ಲಾಸ್ ಹಾಕಿದ್ದೆ. ಅಂತಹ ಸಮಯದಲ್ಲಿ ಹಾಗೆ ಕೇಳ್ತಾರೆ. ಅದು ಪರವಾಗಿಲ್ಲ. ಅದಕ್ಕೆ ವಿಷಾದದ ಮ್ಯೂಸಿಕ್ ಹಾಕಿ ಪೋಸ್ಟ್ ಮಾಡ್ತಾರೆ. ಅದು ತಪ್ಪಲ್ಲ. ಆದರೆ ಕಾಮೆಂಟ್ಸ್ ಬಾಕ್ಸ್ ನೋಡಿದರೆ ಗೊತ್ತಾಗುತ್ತದೆ. ನೋಡಿ ರಾಸ್ಕಲ್ ಫೇಕ್. ಅಂತ್ಯಕ್ರಿಯೆಗೆ ಸನ್ಗ್ಲಾಸ್ ಹಾಕ್ಕೊಂಡು ಬಂದಿದ್ದಾನೆ ಅಂತಾರೆ."
"ನಾನು ಹೋಗಿದ್ದೆಲ್ಲಿಗೆ? ಆದರೆ ಈಗ ಸುದ್ದಿ ಆಗುತ್ತಿರುವುದು ಏನು? ಒಂದು ಹಂತದವರೆಗೆ ಎಲ್ಲವೂ ಸರಿ. ಆದರೆ ಆ ಗೆರೆಯನ್ನು ದಾಟಬಾರದು" ಎಂದು ನಟ ಸಿದ್ದಾರ್ಥ್ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದಾರ್ಥ್ ನಿರ್ಮಿಸಿ ನಟಿಸಿರುವ 'ಚಿಕ್ಕು' ಸಿನಿಮಾ ಈ ವಾರ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.


Click it and Unblock the Notifications











