ವಿಜಯ್ ಸೇತುಪತಿಗೆ ಸಮನ್ಸ್ ಜಾರಿ: ಕೋರ್ಟ್ಗೆ ಹಾಜರಾಗಲಿರುವ ನಟ
ನಟ ವಿಜಯ್ ಸೇತುಪತಿ ತಂಡ ಮತ್ತು ಅಪರಿಚಿತ ವ್ಯಕ್ತಿಯ ನಡುವಿನ ಜಗಳದ ವೀಡಿಯೋ ಇತ್ತೀಚೆಗೆ ಸಾಕಷ್ಟು ವೈರಲ್ ಆಗಿತ್ತು. ಈ ವಿಡೀಯೊದಲ್ಲಿ ವ್ಯಕ್ತಿ ಒಬ್ಬ ವಿಜಯ್ ಸೇತುಪತಿ ತಂಡದ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾನೆ. ವಿಡೀಯೋ ವೈರಲ್ ಆದ ಬಳಿಕ ಸಾಕಷ್ಟು ಬೆಳವಣಿಗೆಗಳು ನಡೆದಿವೆ.
ಈಗ ಈ ಪ್ರಕರಣ ಮತ್ತೊಂದು ಹಂತ ತಲುಪಿದೆ. ವಿಜಯ್ ಸೇತುಪತಿಗೆ ಸಂಕಷ್ಟ ಎದುರಾಗುವ ಸೂಚನೆಗಳು ಸಿಕ್ಕಿವೆ. ಯಾಕೆಂದರೆ ಹಲ್ಲೆಯ ಆರೋಪ ಹೊತ್ತಿರುವ ವ್ಯಕ್ತಿ ಮಹಾಗಾಂಧಿ ಎಂಬಾತ ಈ ವಿಚಾರವಾಗಿ ಕೋರ್ಟ್ ಮೊರೆ ಹೋಗಿದ್ದಾನೆ.
ಮಹಾಗಾಂಧಿ ವಿಜಯ್ ಸೇತುಪತಿ ಮತ್ತು ಅವರ ವ್ಯವಸ್ಥಾಪಕ ಜಾನ್ ಮೇಲೆ ದೂರು ದಾಖಲಿಸಿದ್ದಾನೆ. ಇದುವೇ ಈಗ ನಟ ವಿಜಯ್ ಸೇತುಪತಿ ಮತ್ತು ಅವರ ಮ್ಯಾನೇಜರ್ಗೆ ಸಂಕಷ್ಟ ತಂದೊಡ್ಡಿದೆ.

ಜನವರಿ 4ರೊಳಗೆ ಕೋರ್ಟ್ಗೆ ಹಾಜರಾಗಲು ಆದೇಶ!
ತಮಿಳುನಾಡಿನ ಸೈದಾಪೇಟ್ ಕೋರ್ಟ್ ವಿಜಯ್ ಸೇತುಪತಿ ಮತ್ತು ಅವರ ಮ್ಯಾನೇಜರ್ ಜಾನ್ಸನ್ಗೆ ಸಮನ್ಸ್ ಜಾರಿಮಾಡಿದೆ. ಮಹಾಗಾಂಧಿ ನೀಡಿದ ದೂರಿನ ಆಧಾರದ ಮೇಲೆ ಸಮನ್ಸ್ ಜಾರಿ ಮಾಡಲಾಗಿದೆ. ಈ ದೂರಿನಲ್ಲಿ ವಿಜಯ್ ಸೇತುಪತಿ ಮತ್ತು ತಂಡದಿಂದ ತನ್ನ ಮೇಲೆ ಹಲ್ಲೆ ಎಂದು ನಮೂದಿಸಲಾಗಿದೆ. ಹಾಗಾಗಿ ಸದ್ಯ ವಿಜಯ್ ಸೇತುಪತಿ ಮತ್ತು ಅವರ ವ್ಯವಸ್ಥಾಪಕ ಜಾನ್ಸನ್ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಜೊತೆಗೆ ಜನವರಿ 4 2022ರಂದು ಕೋರ್ಟ್ಗೆ ಹಾಜರಾಗುವಂತೆ ಆದೇಶಿಸಲಾಗಿದೆ.

ಮಾನನಷ್ಟ ಮೊಕದ್ದಮೆ ಹೂಡಿದ ಮಹಾಗಾಂಧಿ: ದೂರಿನಲ್ಲಿ ಇರುವುದೇನು?
ರಾಷ್ಟ್ರೀಯ ಪ್ರಶಸ್ತಿ ಪಡೆದ ವಿಜಯ್ ಸೇತುಪತಿ ಅವರಿಗೆ ಶುಭಾಶಯ ತಿಳಿಸಲು ಮಹಾಗಾಂಧಿ ಮುಂದಾಗಿದ್ದರು. ಈ ವೇಳೆ ವಿಜಯ್ ಸೇತು ಪತಿ ಅವರ ತಂಡದವರು ಆತನ ಬಳಿ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಹಾಗಾಗಿ ಆ ಸಂದರ್ಭ ಗಂಭೀರವಾಯ್ತು. ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಜಯ್ ಸೇತುಪತಿ ಅವರ ಮ್ಯಾನೆಜರ್ ಜಾನ್ಸನ್ ಅವರಿಂದ ಹಲ್ಲೆಗೆ ಒಳಗಾಗಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ. ಘಟನೆಯ ಬಳಿಕ ಮಹಾಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹಾಗಾಗಿ ಕೋರ್ಟ್ ವಿಜಯ್ ಸೇತುಪತಿ ಮತ್ತು ಮ್ಯಾನೇಜರ್ ಜಾನ್ಸನ್ಗೆ ಸಮನ್ಸ್ ಜಾರಿ ಮಾಡಿ, ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿದೆ.

ಈ ಘಟನೆ ಬಗ್ಗೆ ವಿಜಯ್ ಸೇತುಪತಿ ಹೇಳಿದ್ದೇನು?
ಇನ್ನು ಈ ವಿಚಾರದ ಕುರಿತು ನಟ ವಿಜಯ್ ಸೇತುಪತಿ ಬೆಂಗಳೂರಿನಲ್ಲಿ ಮಾತನಾಡಿದ್ದರು. ಘಟನೆ ಬಳಿಕ ಅವರು ಪುನೀತ್ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿದ್ದರು. ಆಗ ಅವರು ಈ ಘಟನೆ ಬಗ್ಗೆಯೂ ಮಾತನಾಡಿದ್ದರು. ''ಅದೊಂದು ಬಹಳ ಸಣ್ಣ ಘಟನೆ ಆದರೆ ಅಲ್ಲಿದ್ದ ಯಾರೊ ಒಬ್ಬರು ಮೊಬೈಲ್ನಲ್ಲಿ ಅದನ್ನು ಸೆರೆಹಿಡಿದಿದ್ದರಿಂದ ವಿಷಯ ದೊಡ್ಡದಾಯಿತು. ಮೊಬೈಲ್ ಇದ್ದವರೆಲ್ಲ ಕ್ಯಾಮೆರಾಮನ್ಗಳಾಗಿದ್ದಾರೆ. ಹಾಗಾಗಿ ಇಂಥಹಾ ಸಣ್ಣ ಘಟನೆಗಳಿಗೂ ಪ್ರಾಮುಖ್ಯತೆ ಸಿಗುತ್ತಿದೆ. ಆ ಯುವಕ ಕುಡಿದಿದ್ದ. ವ್ಯಕ್ತಿಯೊಬ್ಬ ತನ್ನ ನಿಯಂತ್ರಣದಲ್ಲಿ ಇಲ್ಲದೇ ಇದ್ದಾಗ ಹಾಗೆ ವರ್ತಿಸುತ್ತಾನೆ. ಮಾಸ್ಕ್ ಹಾಕಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಯಾರು ಕುಡಿದಿದ್ದಾರೆ ಯಾರು ಕುಡಿದಿಲ್ಲ ಎಂಬುದು ಹೇಳುವುದು ಸಹ ಕಷ್ಟ. ಹಲ್ಲೆಗೆ ಮುಂದಾದ ವ್ಯಕ್ತಿ ನನ್ನ ಅಭಿಮಾನಿ ಅಲ್ಲ ಬದಲಿಗೆ, ವಿಮಾನದಲ್ಲಿ ಸಹ ಪ್ರಯಾಣಿಕ. ವಿಮಾನದಲ್ಲಿಯೇ ನಮ್ಮೊಂದಿಗೆ ಜಗಳ ಆರಂಭಿಸಿದ. ವಿಮಾನ ಇಳಿದ ಮೇಲೂ ಜಗಳ ಮುಂದುವರೆಸಿದ'' ಎಂದಿದ್ದರು ವಿಜಯ್ ಸೇತುಪತಿ.


Click it and Unblock the Notifications











