'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ನನಗೆ ಅವಕಾಶ ಕೊಡಲಿಲ್ಲ: ಬೇಸರ ತೋಡಿಕೊಂಡ ರಜನಿಕಾಂತ್!
ಸೂಪರ್ ಸ್ಟಾರ್ ರಜನಿಕಾಂತ್ಗೆ ಆಕ್ಷನ್ ಕಟ್ ಹೇಳಬೇಕು ಎನ್ನುವುದು ಭಾರತೀಯ ಚಿತ್ರರಂಗದ ಎಲ್ಲಾ ನಿರ್ದೇಶಕರ ಕನಸಾಗಿರುತ್ತದೆ. ಆದರೆ ಸ್ವತಃ ತಲೈವಾ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ನನಗೊಂದು ಅವಕಾಶ ಕೊಡಿ ಎಂದರೂ ಮಣಿರತ್ನಂ ಕೊಡಲಿಲ್ಲವಂತೆ. ಈ ವಿಚಾರವನ್ನು ಖುದ್ದು ರಜನಿಕಾಂತ್ ಚಿತ್ರದ ಟ್ರೈಲರ್ ಲಾಂಚ್ ಈವೆಂಟ್ನಲ್ಲಿ ಹೇಳಿಕೊಂಡಿದ್ದಾರೆ.
ಚೆನ್ನೈನ ಜವರಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಿನ್ನೆ (ಸೆಪ್ಟೆಂಬರ್ 6) 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಟ್ರೈಲರ್ ಲಾಂಚ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಕಮಲ್ ಹಾಸನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಚಿತ್ರದ ಟ್ರೈಲರ್ ಹಾಗೂ ಸಾಂಗ್ ನೋಡಿ ಮೆಚ್ಚಿಕೊಂಡ ತಲೈವಾ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಆಧರಿಸಿ ಮಣಿರತ್ನಂ ಈ ದೃಶ್ಯಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ಸೆಪ್ಟೆಂಬರ್ 30ಕ್ಕೆ ವಿಶ್ವದಾದ್ಯಂತ ಏಕಕಾಲಕ್ಕೆ ಸಾವಿರಾರು ಸ್ಕ್ರೀನ್ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರೈ, ಕಿಶೋರ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಪೊನ್ನಿಯಿನ್ ಸೆಲ್ವನ್' ಕದಂಬರಿ ಓದಿ ರಜನಿಕಾಂತ್ ಅಪಾರವಾಗಿ ಮೆಚ್ಚಿಕೊಂಡಿದ್ದರಂತೆ. ಇಂತಹದೊಂದು ಸಿನಿಮಾದಲ್ಲಿ ನಟಿಸುವುದು ನನ್ನ ಕನಸಾಗಿತ್ತು ಎಂದು ಸೂಪರ್ ಸ್ಟಾರ್ ಹೇಳಿದ್ದಾರೆ.

ಎಂಜಿಆರ್- ಶಿವಾಜಿ ಈ ಚಿತ್ರದಲ್ಲಿ ನಟಿಸಬೇಕಿತ್ತು
"ಎಂಜಿಆರ್, ಶಿವಾಜಿರಂತಹವರ ಕಾಲದಲ್ಲೇ ಈ ಸಿನಿಮಾ ನಿರ್ಮಾಣ ಆಗಬೇಕಿತ್ತು. ಆದರೆ ಈ ಕಥೆಯನ್ನು ಒಂದೇ ಸಿನಿಮಾದಲ್ಲಿ ಹೇಳಲು ಸಾಧ್ಯವಿಲ್ಲ. ಅವತ್ತಿನ ಕಾಲದಲ್ಲಿ ಎರಡು ಭಾಗಗಳಾಗಿ ಕಥೆ ಹೇಳುವ ಕಾನ್ಸೆಪ್ಟ್ ಇರಲಿಲ್ಲ. ಇದ್ದಿದ್ದರೆ ಸಿನಿಮಾ ಮಾಡಿಬಿಡುತ್ತಿದ್ದರು. ಈಗ ಅಂತಹ ಟ್ರೆಂಡ್ ಇದೆ. ಸಿನಿಮಾ ನಿರ್ಮಾಣವಾಗಿದೆ" ಎಂದು ರಜಿನಿಕಾಂತ್ ಹೇಳಿದ್ದಾರೆ.

ಮಣಿರತ್ನಂ ಬಳಿ ರಜನಿ ಕೇಳಿದ ಪಾತ್ರ ಯಾವುದು?
'ಪೊನ್ನಿಯಿನ್ ಸೆಲ್ವನ್' ಕಾದಂಬರಿಯಲ್ಲಿ ಒಂದಕ್ಕಿಂತ ಒಂದು ಪಾತ್ರ ಅದ್ಭುತವಾಗಿದೆ. ಇಂತಹದೊಂದು ಅದ್ಭುತ ಚಿತ್ರದ ಭಾಗವಾಗಬೇಕು ಎಂದುಕೊಂಡಿದ್ದರಂತೆ ರಜನಿಕಾಂತ್. "ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿವೆ. ನನಗೆ ಪೆರಿಯ ಪಳುವೆಟ್ಟರೈಯಾರ್ ಪಾತ್ರವನ್ನಾದರೂ ಕೊಡಿ ಸರ್ ಎಂದು ಮಣಿರತ್ನಂ ಬಳಿ ಕೇಳಿಕೊಂಡಿದ್ದೆ. ಅದಕ್ಕವರು ಅಯ್ಯೋ ಬೇಡ ಸುಮ್ಮನಿರಿ. ನಿಮಗೆ ಆ ಪಾತ್ರ ಕೊಟ್ಟರೆ ನಿಮ್ಮ ಅಭಿಮಾನಿಗಳನ್ನು ನನ್ನನ್ನು ಬೈತಾರೆ. ಯಾಕೆ ನಿಮ್ಮ ಅಭಿಮಾನಿಗಳು ನನ್ನನ್ನು ಬೈಯಬೇಕು ಎನ್ನುವುದು ನಿಮ್ಮ ಆಸೆನಾ" ಎಂದರಂತೆ. ಸದ್ಯ ಚಿತ್ರದಲ್ಲಿ ಈ ಪಾತ್ರವನ್ನು ಶರತ್ ಕುಮಾರ್ ಮಾಡಿದ್ದಾರೆ.

ನೀಲಾಂಬರಿ ಪಾತ್ರಕ್ಕೆ ಈ ಕಾದಂಬರಿ ಪ್ರೇರಣೆ
ಸೂಪರ್ ಸ್ಟಾರ್ ರಜಿನಿಕಾಂತ್, ಸೌಂದರ್ಯಾ, ರಮ್ಯಾಕೃಷ್ಣ ನಟನೆಯ 'ಪಡೆಯಪ್ಪ' ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಅ ಚಿತ್ರದಲ್ಲಿ ರಮ್ಯಾಕೃಷ್ಣ ಮಾಡಿದ್ದ ನೀಲಾಂಬರಿ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. 'ಪೊನ್ನಿಯಿನ್ ಸೆಲ್ವನ್' ಕಾದಂಬರಿಯ ರಾಣಿ ನಂದಿನಿಯ ಪಾತ್ರದಿಂದ ಪ್ರೇರಣೆಗೊಂಡು ನೀಲಾಂಬರಿ ಪಾತ್ರವನ್ನು ಡಿಸೈನ್ ಮಾಡಿದ್ದಾಗಿ ರಜಿನಿಕಾಂತ್ ಹೇಳಿದ್ದಾರೆ.

ಸೆಪ್ಟೆಂಬರ್ 30ಕ್ಕೆ 'ಪೊನ್ನಿಯಿನ್ ಸೆಲ್ವನ್' ಅಬ್ಬರ
500 ಕೋಟಿ ಬಜೆಟ್ನಲ್ಲಿ 2 ಭಾಗಗಳಾಗಿ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ನಿರ್ಮಾಣವಾಗುತ್ತಿದೆ. ಐಮ್ಯಾಕ್ಸ್ ವರ್ಷನ್ನಲ್ಲೂ ಚಿತ್ರ ಪ್ರೇಕ್ಷಕರನ್ನು ರಂಜಿಸಲಿದೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಸೆಪ್ಟೆಂಬರ್ 30ಕ್ಕೆ ತೆರೆಮೇಲೆ 'ಪೊನ್ನಿಯಿನ್ ಸೆಲ್ವನ್' ರಾಜ್ಯಭಾರ ಶುರುವಾಗಲಿದೆ.


Click it and Unblock the Notifications











