ತೆರಿಗೆ ಕಟ್ಟುವುದರಲ್ಲೂ ಸೂಪರ್ ಸ್ಟಾರ್ ರಜನಿಕಾಂತ್ ನಂಬರ್ ವನ್!
ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿ ಪಾಲಿನ ಆರಾಧ್ಯ ದೈವ. ತೆರೆಮೇಲೆ ಮಾತ್ರವಲ್ಲ ನಿಜಜೀವನದಲ್ಲೂ ತಾವು ಹೀರೊ ಅನ್ನೋದನ್ನು ತಲೈವಾ ಸಾಕಷ್ಟು ಭಾರೀ ಸಾಬೀತು ಮಾಡುತ್ತಾ ಬಂದಿದ್ದಾರೆ. ರಜನಿಕಾಂತ್ ಸ್ಟೈಲ್, ಆಕ್ಟಿಂಗ್ಗೆ ಮಾತ್ರವಲ್ಲ ಅವರ ಸರಳ ವ್ಯಕ್ತಿತ್ವಕ್ಕೂ ಸಾಕಷ್ಟು ಜನ ಅಭಿಮಾನಿಗಳು ಇದ್ದಾರೆ. ಸದ್ಯ ಅಭಿಮಾನಿಗಳ ಪ್ರೀತಿಯ ಕಬಾಲಿಗೆ ಅಪರೂಪದ ಗೌರವ ಸಿಕ್ಕಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದಕ್ಕಾಗಿ ಅಲ್ಲಿನ ಆದಾಯ ತೆರಿಗೆ ಇಲಾಖೆ ರಜನಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆದರೆ ರಜನಿಕಾಂತ್ ಬದಲು ಪುತ್ರಿ ಐಶ್ವರ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಆ ಮೂಲಕ ತೆರಿಗೆ ಪಾವತಿ ವಿಚಾರದಲ್ಲೂ ರಜನಿಕಾಂತ್ ಎಲ್ಲರಿಗೂ ಮಾದರಿ ಆಗಿದ್ದಾರೆ.
ಆದಾಯ ತೆರಿಗೆ ದಿನದ ನಿಮಿತ್ತ ಚೆನ್ನೈನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣ-ಪುದುಚೇರಿ ರಾಜ್ಯಪಾಲ ತಮಿಳ್ ಸಾಯಿ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಜನಿಕಾಂತ್ ಸೇರಿದಂತೆ ಹಲವು ಗಣ್ಯರಿಗೆ ಈ ಪ್ರಶಸ್ತಿಗಳನ್ನು ನೀಡಲಾಯಿತು. ಇನ್ನು ಈ ಕಾರ್ಯಕ್ರಮದಲ್ಲಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುನೀಶ್ವರನಾಥ್ ಭಂಡಾರಿ ಮುಖ್ಯ ಅತಿಥಿಯಾಗಿದ್ದರು. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಒಬ್ಬರು. ನೂರಾರು ಕೋಟಿ ಆಸ್ತಿಯ ಒಡೆಯರಾಗಿರುವ ತಲೈವಾ ಪ್ರತಿವರ್ಷ ತಪ್ಪದೇ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಆದಾಯ ಹೆಚ್ಚಾದಂತೆಲ್ಲಾ ಅವರು ಕಟ್ಟುವ ತೆರಿಗೆಯ ಮೊತ್ತ ಕೂಡ ಹೆಚ್ಚಾಗುತ್ತಿದೆ.
ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದಲ್ಲಿ ಸನ್ಪಿಕ್ಚರ್ಸ್ ನಿರ್ಮಿಸಲಿರುವ ಜೈಲರ್' ಚಿತ್ರದ ಶೂಟಿಂಗ್ಗಾಗಿ ರಜಿನಿಕಾಂತ್ ಸಿದ್ದತೆ ನಡೆಸಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಐಶ್ವರ್ಯಾ ರೈ ಬಚ್ಚನ್, ಶಿವಕಾರ್ತಿಕೇಯನ್, ಪ್ರಿಯಾಂಕಾ ಅರುಲ್ ಮೋಹನ್, ಯೋಗಿಬಾಬು, ರಮ್ಯಾ ಕೃಷ್ಣ ಮುಂತಾದವರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರದ ಚಿತ್ರೀಕರಣ ಮತ್ತು ತಾರಾಗಣದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗಲಿದೆ. ತಲೈವಾ ಜೊತೆ ಒಂದೇ ಫ್ರೇಮ್ನಲ್ಲಿ ಶಿವಣ್ಣನನ್ನು ನೋಡಲು ಕನ್ನಡ ಸಿನಿರಸಿಕರು ಕೂಡ ಕಾತರರಾಗಿದ್ದಾರೆ.

ಜೀವನದಲ್ಲಿ ನನಗೆ ಸಂತೋಷ ಸಿಗಲಿಲ್ಲ- ರಜಿನಿಕಾಂತ್
ಇತ್ತೀಚೆಗೆ ಚೆನ್ನೈನಲ್ಲಿ ನಡೆದ 'Successful Life Through Kriya Yoga' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ರಜನಿಕಾಂತ್ 'ಮನುಷ್ಯನಿಗೆ ಆಸ್ತಿಇಲ್ಲದಿದ್ದರೂ ಆರೋಗ್ಯ ಬಹಳ ಮುಖ್ಯವಾಗಿ ಇರಬೇಕು. 'ಆರೋಗ್ಯ ಅನ್ನುವುದು ಮನುಷ್ಯನಿಗೆ ಬಹಳ ಮುಖ್ಯವಾದುದು. ಅನಾರೋಗ್ಯಕ್ಕೆ ತುತ್ತಾದರೆ ನಮಗೆ ಬೇಕಾದವರು ಸಹಿಸಿಕೊಳ್ಳುವುದಿಲ್ಲ. ನಾನು ನನ್ನ ಜೀವನದಲ್ಲಿ ಹಣ, ಹೆಸರು, ಕೀರ್ತಿ ಎಲ್ಲಾ ನೋಡಿದ್ದೀನಿ. ಸಂತೋಷ, ಪ್ರಶಾಂತತೆ ಮಾತ್ರ ಶೇಕಡಾ 10ರಷ್ಟು ಧಕ್ಕಲಿಲ್ಲ. ಏಕೆಂದರೆ ಅವು ಶಾಶ್ವತವಲ್ಲ ಎಂದು ನನಗೆ ಅರಿವಾಗಿದೆ' ಎಂದು ರಜನಿಕಾಂತ್ ಹೇಳಿದ್ದರು.

'ಜೈಲರ್' ಚಿತ್ರಕ್ಕೆ ರಜನಿಕಾಂತ್ ಸಂಭಾವನೆ ಎಷ್ಟು?
ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ರಜಿನಿಕಾಂತ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಅದರಲ್ಲಿ ಎರಡು ಮಾತಿಲ್ಲ. ಯಾಕಂದರೆ ರಜಿನಿಕಾಂತ್ ಸಿನಿಮಾ ಬ್ಯುಸಿನೆಸ್ ಅಷ್ಟು ದೊಡ್ಡದಾಗಿರುತ್ತದೆ. ಅದೇ ಕಾರಣಕ್ಕೆ ನಿರ್ಮಾಪಕರು ತಲೈವಾಗೆ ಎಷ್ಟೇ ಸಂಭಾವನೆ ಕೊಡೋದಕ್ಕೂ ಸಿದ್ಧರಿರುತ್ತಾರೆ. ಅಂದಹಾಗೆ ರಜಿನಿಕಾಂತ್ 'ಜೈಲರ್' ಚಿತ್ರದಲ್ಲಿ ನಟಿಸಲು 150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನುವ ಗುಸುಗುಸು ಕಾಲಿವುಡ್ನಲ್ಲಿ ಕೇಳಿಬರುತ್ತಿದೆ.

ಬಾಲಿವುಡ್ನಲ್ಲಿ ಅಕ್ಷಯ್ಕುಮಾರ್ಗೆ ಈ ಗೌರವ
ತಮಿಳುನಾಡಿನಲ್ಲಿ ರಜನಿಕಾಂತ್ ಅತಿಹೆಚ್ಚು ತೆರಿಗೆ ಪಾವತಿಸಿದಕ್ಕಾಗಿ ಗೌರವ ಸ್ವೀಕರಿಸಿದ್ದರೆ, ಅತ್ತ ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ಇದೇ ಗೌರವಕ್ಕೆ ಪಾತ್ರರಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ಕಿಲಾಡಿ ಮನೆಗೆ ಇತ್ತೀಚೆಗೆ ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ವಿಶೇಷ ಪತ್ರವೊಂದು ಕಳುಹಿಸಿದ್ದಾರೆ. ಬಿಟೌನ್ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವವರಲ್ಲಿ ನಟ ಅಕ್ಷಯ್ ಕುಮಾರ್ ಸಹ ಒಬ್ಬರು ಎಂದು ಗೌರವಯುತವಾಗಿ ಆದಾಯ ತೆರಿಗೆ ಇಲಾಖೆ ಸಮ್ಮಾನ್ ಪತ್ರವನ್ನು ನೀಡಿದೆ.

ಸೂಪರ್ ಹಿಟ್ ಆಗಿತ್ತು ರಜನಿ- ಅಕ್ಕಿ '2.0' ಸಿನಿಮಾ
ಅಂದಹಾಗೆ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ಕಿಲಾಡಿ ಅಕ್ಷಯ್ಕುಮಾರ್ ಕೆಲ ವರ್ಷಗಳ ಹಿಂದೆ '2.0' ಚಿತ್ರದಲ್ಲಿ ನಟಿಸಿದ್ದರು. ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಆಕ್ಷನ್ ಚಿತ್ರದಲ್ಲಿ ರಜನಿಕಾಂತ್ ವಸೀಗರನ್, ಚಿಟ್ಟಿ ರೋಬೊ, ಚಿಟ್ಟಿ 3.0 ರೋಬೊ ಆಗಿ ನಟಿಸಿದ್ದರು. ಪಕ್ಷಿ ರಾಜನ್ ಆಗಿ ಬಣ್ಣ ಹಚ್ಚಿದ್ದ ಅಕ್ಷಯ್ ಕುಮಾರ್ ನೆಗೆಟಿವ್ ಶೇಡ್ನಲ್ಲೂ ಅಬ್ಬರಿಸಿದ್ದರು. ಸಿನಿಮಾ ಸೂಪರ್ ಹಿಟ್ ಲಿಸ್ಟ್ ಸೇರಿಕೊಂಡಿತ್ತು.


Click it and Unblock the Notifications











