ಚೆನ್ನೈಗೆ ವಾಪಸ್ ಆದ ತಲೈವ ರಜನಿಕಾಂತ್: ಅಭಿಮಾನಿಗಳಲ್ಲಿ ಸಂಭ್ರಮ
ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ತಪಾಸಣೆ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ನಿನ್ನೆ ತಡರಾತ್ರಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ಸೂಪರ್ ಸ್ಟಾರ್ ಅನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ರಜನಿಕಾಂತ್ ಹೆಚ್ಚಿನ ಆರೋಗ್ಯ ತಪಾಸಣೆಗೆಂದು ರಜನಿಕಾಂತ್ ಜೂನ್ 19ರಂದು ವಿಶೇಷ ವಿಮಾನ ಮೂಲಕ ಅಮೆರಿಕಗೆ ತೆರಳಿದ್ದರು.
ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ಸೂಪರ್ ಸ್ಟಾರ್, ಮಗಳು ಐಶ್ವರ್ಯಾ ಮತ್ತು ಪತ್ನಿ ಲತಾ ಜೊತೆ ಅಮೆರಿಕಗೆ ತೆರಳಿದ್ರು. ಅಮೆರಿಕಗೆ ತೆರಳಿದ ಬಳಿಕ ಮಗಳು ಐಶ್ವರ್ಯಾ ಜೊತೆ ಯುಎಸ್ ನ ಮೆಯೊ ಕ್ಲಿನಿಕ್ ಎದುರು ಕಾಣಿಸಿಕೊಂಡಿದ್ದರು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅಮೆರಿಕಾದಲ್ಲಿ ಸೂಪರ್ ಸ್ಟಾರ್ ಅನೇಕ ಅಭಿಮಾನಿಗಳನ್ನು ಭೇಟಿಯಾಗಿದ್ದರು. ರಜನಿಕಾಂತ್ ಜೊತೆ ಅಭಿಮಾನಿಗಳು ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೀಗ ಆರೋಗ್ಯ ತಪಾಸಣೆ ಮುಗಿಸಿ ತಲೈವ ಚೆನ್ನೈಗೆ ವಾಪಸ್ ಆಗಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಮುಂದೆ ಓದಿ..

ಚೆನ್ನೈಗೆ ವಾಪಸ್ ಆದ ರಜನಿ, ಅಭಿಮಾನಿಗಳಲ್ಲಿ ಸಂಭ್ರಮ
ಚೆನ್ನೈ ವಿಮಾನ ನಿಲ್ದಾಣದಿಂದ ಸೂಪರ್ ಸ್ಟಾರ್ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೂಪರ್ ಸ್ಟಾರ್ ಆರೋಗ್ಯ ತಪಾಸಣೆ ಮುಗಿಸಿ ಆರೋಗ್ಯವಾಗಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದು, ಹೊರಬರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ತಲೈವ..ತಲೈವ.. ಎಂದು ಅಭಿಮಾನಿಗಳು ಕೂಗುತ್ತಿದ್ದರು.

ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಲು ವೈದ್ಯರ ಸೂಚನೆ
ಕೆಲವು ವರ್ಷಗಳ ಹಿಂದೆ ರಜನಿಕಾಂತ್ ಮೂತ್ರ ಪಿಂಡ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎನ್ನುವ ಮಾಹಿತಿ ಇದೆ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕೆಂದು ವೈದ್ಯರು ಸೂಚಿಸಿದ ಬಳಿಕ ರಜನಿಕಾಂತ್ ರಾಜಕೀಯದಿಂದನೂ ಹಿಂದೆ ಸರಿದಿದ್ದರು. ಬಳಿಕ ಹೆಚ್ಚಿನ ಆರೋಗ್ಯ ತಪಾಸಣೆಗೆಂದು ದಿಢೀರ್ ವಿದೇಶಕ್ಕೆ ತೆರಳಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಇದೀಗ ಸೂಪರ್ ಸ್ಟಾರ್ ವಾಪಸ್ ಆಗಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಕಸ್ತೂರಿ ಶಂಕರ್ ಅನುಮಾನ
ಸೂಪರ್ ಸ್ಟಾರ್ ಆರೋಗ್ಯದ ಬಗ್ಗೆ ನಟಿ ಕಸ್ತೂರಿ ಶಂಕರ್ ಅನುಮಾನ ವ್ಯಕ್ತಪಡಿಸಿದ್ದರು. ''ಮೇ ತಿಂಗಳ ಪ್ರಾರಂಭದಿಂದಲೇ ಭಾರತದಿಂದ ನೇರವಾಗಿ ಅಮೆರಿಕಾ ಬರುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ಯಾವುದೇ ವೈದ್ಯಕೀಯ ವಿನಾಯಿತಿಗಳನ್ನು ಸಹ ಕೊಟ್ಟಿಲ್ಲ. ಇಂತಹ ಸಮಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಪ್ರಯಾಣಿಸುವುದೇ? ಹಠಾತ್ ರಾಜಕೀಯಿಂದ ಹಿಂದೆ ಸರಿದರು....ಈಗ ಇದು....ರಜನಿ ಸರ್ ಸ್ಪಷ್ಟಪಡಿಸಿ...'' ಎಂದು ಕಸ್ತೂರಿ ಶಂಕರ್ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು.

ರಜನಿ ಆರೋಗ್ಯದ ಮಾಹಿತಿ ನೀಡಿದ್ದ ವೈರಮುತ್ತು
ಬಳಿಕ ಸೂಪರ್ ಸ್ಟಾರ್ ಆರೋಗ್ಯದ ಬಗ್ಗೆ ಗೀತರಚನೆಕಾರ ವೈರಮುತ್ತು ಮಾಹಿತಿ ಹಂಚಿಕೊಂಡಿದ್ದರು. ''ಯುಎಸ್ನಿಂದ ರಜನಿ ಫೋನ್ ಮಾಡಿದ್ರು. ಆರೋಗ್ಯ ತಪಾಸಣೆ ಚೆನ್ನಾಗಿ ಸಾಗಿದೆ ಎಂದು ಹೇಳಿದರು. ಅದನ್ನು ಕೇಳಿ ಬಹಳಷ್ಟು ಖುಷಿ ಕೊಟ್ಟಿದೆ. ಅವರ ಧ್ವನಿಯಲ್ಲಿ ವಿಶ್ವಾಸ ಮತ್ತು ಆರೋಗ್ಯವಾಗಿದ್ದಾರೆ ಎನ್ನುವುದು ಕಾಣ್ತಿತ್ತು. ಅಭಿಮಾನಿಗಳಿಗಾಗಿ ಇದನ್ನು ಟ್ವೀಟ್ ಮಾಡಿ ತಿಳಿಸುತ್ತಿದ್ದೇನೆ'' ಎಂದು ಪೋಸ್ಟ್ ಹಾಕಿದ್ದರು. ಈ ಮಾಹಿತಿ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ತಂದಿತ್ತು.
Recommended Video

ಅಣ್ಣಾತೆ ಸಿನಿಮಾ ಬಿಡುಗಡೆ ಸಿದ್ಧತೆ
ರಜನಿಕಾಂತ್ ಅಮೆರಿಕಗೆ ತೆರಳುವ ಮೊದಲೇ ಅಣ್ಣಾತೆ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸಿರುತೈ ಶಿವ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಕೀರ್ತಿ ಸುರೇಶ್, ನಯನತಾರ, ಖುಷ್ಬೂ, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.


Click it and Unblock the Notifications











