Jailer: ಬ್ಲಾಕ್ ಬಸ್ಟರ್ ಜೈಲರ್ ಬಗ್ಗೆ ಮೌನ ಮುರಿದ ರಜನಿಕಾಂತ್, ಹೇಳಿದ್ದೇನು?
ಆಗಸ್ಟ್ 10 ರಂದು ಬಿಡುಗಡೆಯಾದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್, ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರಗಳಲ್ಲಿ ಒಂದು. ಹಲವು ಬಾಕ್ಸ್ ಆಫೀಸ್ ದಾಖಲೆಗಳ ಹೆಡೆಮುರಿ ಕಟ್ಟಿದೆ. ಸಿನಿಮಾದ ಭರ್ಜರಿ ಯಶಸ್ಸಿನ ಸಂಭ್ರಮಾಚರಣೆಯನ್ನು ಚಿತ್ರತಂಡ ಆಚರಿಸಿದೆ.
ಸಮಾರಂಭದಲ್ಲಿ ಮಾತನಾಡಿರುವ ತಲೈವ ರಜನಿಕಾಂತ್ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. Galatta.com ವರದಿಯ ಪ್ರಕಾರ, ರಜನಿಕಾಂತ್ ಅವರು 'ರೀ-ರೆಕಾರ್ಡಿಂಗ್ ಮಾಡುವ ಮೊದಲು ಚಲನಚಿತ್ರವು ಸಾಧಾರಣವಾಗಿದೆ ಎಂದು ಅಂದುಕೊಂಡಿದ್ದೆ. ಆದರೆ, ಅನಿರುದ್ಧ ರವಿಚಂದರ್ ಅವರ ಸಂಗೀತವು ಚಲನಚಿತ್ರವನ್ನು ಬ್ಲಾಕ್ ಬಸ್ಟರ್ ಮಾಡಿದೆ' ಎಂದು ಹೇಳಿದ್ದಾರೆ.

ಅನಿರುದ್ಧ್ 'ಜೈಲರ್ ಆಗಿ ಬದಲಾಗಿದ್ದಾರೆ' ಎಂದ ರಜನಿಕಾಂತ್
"ನಾನು ಮೊದಲು ರೀರೆಕಾರ್ಡಿಂಗ್ ಇಲ್ಲದೆಯೇ ಸಿನಿಮಾ ನೋಡಿದೆ. ನಂತರ ಸೆಂಬಿಯಾನ್ ಸರ್ ಮತ್ತು ಕಣ್ಣನ್ ಸರ್ ಅವರಲ್ಲಿ ಚಿತ್ರದ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳಿದೆ. ಕಣ್ಣನ್ ಎಲ್ಲರನ್ನು ಮೆಚ್ಚಿದ್ದರು. ಆಗ ನೆಲ್ಸನ್ ನಿಮ್ಮ ಸ್ನೇಹಿತ ಮತ್ತು ನೀವು ಖಂಡಿತವಾಗಿಯೂ ಅವನನ್ನು ಮೆಚ್ಚುತ್ತೀರಿ ಎಂದಿದ್ದೆ. ನಂತರ ಸೆಂಬಿಯನ್ ಅವರನ್ನು ಸಿನಿಮಾ ಬಗ್ಗೆ ಕೇಳಿದೆ ಅವರು ಚಿತ್ರ ಸುಮಾರಾಗಿದೆ ಎಂದು ಹೇಳಿದ್ದರು. ರೀ-ರೆಕಾರ್ಡಿಂಗ್ ಮಾಡುವ ಮೊದಲು ಚಿತ್ರ ನನಗೂ ಸಾಧಾರಣ ಅನ್ನಿಸಿತ್ತು. ಆದರೆ, ಅನಿರುದ್ಧ್ ಚಿತ್ರವನ್ನು ಎತ್ತಿ ಹಿಡಿದ ರೀತಿ ಇದೆಯಲ್ಲ ಅದು ಅದ್ಭುತ. ಮೇಕ್ಅಪ್ ನಂತರ ಕಂಗೊಳಿಸುವ ವಧುವಿನಂತೆ ಜೈಲರ್ ಅನ್ನು ಅದ್ಭುತವನ್ನಾಗಿಸಿದರು" ಎಂದು ರಜನಿಕಾಂತ್ ಹೇಳಿದ್ದಾರೆ ಎಂದು ಗಲಾಟಾ. ಕಾಂ ವರದಿ ಮಾಡಿದೆ.
ಹಿರಿಯ ನಟ ರಜನಿಕಾಂತ್ ಜೈಲರ್ನಲ್ಲಿ ಕೆಲಸ ಮಾಡಿದ ತಂತ್ರಜ್ಞರನ್ನು, ವಿಶೇಷವಾಗಿ ಕ್ಯಾಮೆರಾಮನ್ ಕಾರ್ತಿಕ್ ಅವರನ್ನು ಶ್ಲಾಘಿಸಿದ್ದಾರೆ. ಕಾರ್ತಿಕ್ 'ಚಿತ್ರಕ್ಕೆ ಅಂತಹ ಎಫೆಕ್ಟ್ ಸೇರಿಸುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ' ಎಂದು ಹೇಳಿದ್ದಾರೆ. ಸಂಕಲನಕಾರ ನಿರ್ಮಲ್ ಚಿತ್ರವನ್ನು ಸಂಪೂರ್ಣವಾಗಿಸಿದ್ದಾರೆ ಎಂದು ಹೊಗಳಿದ್ದಾರೆ.
"ನಾನು ಈ ಚಿತ್ರ ಹಿಟ್ ಆದಾಗ, ನಾನು ಐದು ದಿನ ಮಾತ್ರ ಸಂತೋಷಪಟ್ಟೆ. ಆ ಐದು ದಿನಗಳ ನಂತರ, ನನ್ನ ಮುಂದಿನ ಚಿತ್ರ ಮತ್ತು ಈಗ ಹೆಚ್ಚಿನ ನಿರೀಕ್ಷೆಗಳಿರುವುದರಿಂದ ಅದನ್ನು ಇನ್ನೂ ದೊಡ್ಡ ಹಿಟ್ ಮಾಡುವುದು ಹೇಗೆ ಎಂದು ನಾನು ಒತ್ತಡಕ್ಕೆ ಒಳಗಾಗಿದ್ದೇನೆ. ನನ್ನ ಮುಂದಿನ ಚಿತ್ರದ ಬಗ್ಗೆ ನಾನು ತುಂಬಾ ಟೆನ್ಷನ್ನಲ್ಲಿದ್ದೇನೆ. ಏನು ಮಾಡಬೇಕೆಂದು ನನಗೆ ತಿಳಿದಿಲ್ಲ" ಎಂದು ಸಿನಿಮಾ ಸಕ್ಸಸ್ನ ಒತ್ತಡ ವಿವರಿಸಿದ್ದಾರೆ.

ರಜನಿಕಾಂತ್ ಹೇಳಿಕೆಗೆ ನೆಟ್ಟಿಜನ್ಗಳ ಪ್ರತಿಕ್ರಿಯೆ
ರಜನಿಕಾಂತ್ ಭಾಷಣದ ವಿಡಿಯೋವನ್ನು ನಿರ್ಮಾಪಕ ಕಲಾನಿಧಿ ಮಾರನ್, ಸನ್ ಪಿಕ್ಷರ್ಸ್ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, "ತಮಗೆ ಅನಿಸಿದ್ದನ್ನು ಮಾತನಾಡಲು ಅವರು ಎಂದಿಗೂ ಹಿಂಜರಿಯುವುದಿಲ್ಲ. ಅಂತಹ ಗುಣಮಟ್ಟದ ರತ್ನ ಅವರು. 600 ಕೋಟಿಗಿಂತ ಹೆಚ್ಚು ಗಳಿಸಿದ ಚಿತ್ರದ ಯಶಸ್ಸಿನ ಸಭೆಯಲ್ಲಿ ನನ್ನ ಚಲನಚಿತ್ರವು ಸಾಧಾರಣವಾಗಿತ್ತು ಎಂದು ಹೇಳಿದ ಸಿನಿರಂಗದ ಒಬ್ಬರನ್ನಾದರೂ ತಿಳಿಸಿ" ಎಂದಿದ್ದಾರೆ.
ಆದರೆ, ಕೆಲವರಿಗೆ ರಜನಿಕಾಂತ್ ಹೇಳಿಕೆ ಇಷ್ಟವಾಗಿಲ್ಲ. "ಚಲನಚಿತ್ರ ಅದ್ಭುತವಾಗಿದೆ. ನೆಲ್ಸನ್ ಅವರು ಸೂಪರ್ಸ್ಟಾರ್ ರಜನಿಕಾಂತ್ ಇಮೇಜ್ ಅನ್ನು ಸಂಪೂರ್ಣವಾಗಿ ಸಮರ್ಥಿಸಿದ್ದಾರೆ. ಉತ್ತರ ಭಾರತದಲ್ಲಿ ಜನರು ಚಲನಚಿತ್ರವನ್ನು ವೀಕ್ಷಿಸಲು ಸಾಲು ಸಾಲಾಗಿ ನಿಂತಿದ್ದರು. ರಜನಿಕಾಂತ್ ಅದನ್ನು ಗೌರವಿಸಬೇಕು ಮತ್ತು ಚಿತ್ರವನ್ನು ಪ್ರಶ್ನಿಸಬಾರದು" ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
"ಸಂಗೀತದಿಂದ ಮಾತ್ರ ಚಲನಚಿತ್ರ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ರಜನಿಕಾಂತ್ ತಿಳಿಯಬೇಕು. ಅವರ ಹೇಳಿಕೆಯು ನಿರ್ದೇಶಕ ಮತ್ತು ತಂಡದ ವಿಶ್ವಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ" ಎಂದು ಆತಂಕ ಹೊರಹಾಕಿದ್ದಾರೆ.
ಜೈಲರ್ ವಿಶ್ವಾದ್ಯಂತ 650 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. 2018 ರಲ್ಲಿ ಬಿಡುಗಡೆಯಾದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ನಂತರ 600 ಕೋಟಿ ಕ್ಲಬ್ಗೆ ಪ್ರವೇಶಿಸಿದ ಎರಡನೇ ತಮಿಳು ಚಲನಚಿತ್ರ ಜೈಲರ್.


Click it and Unblock the Notifications











