ಚಿತ್ರರಂಗಕ್ಕೆ ಬಂದ ಚೆನ್ನೈನ 'ಚಿನ್ನತಲಾ' , ಜೀವದ ಗೆಳೆಯನ ಚಿತ್ರದಲ್ಲಿ ಆಕ್ಟ್ ಮಾಡ್ತಾರಾ ತಲಾ ಧೋನಿ ?
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇನ್ನೂ..ಕಪಿಲ್ ದೇವ್ ಅವರಿಂದ ಹಿಡಿದು ಅಜಯ್ ಜಡೇಜಾವರೆಗೆ.. ವಿನೋದ್ ಕಾಂಬ್ಳಿಯಿಂದ ಹಿಡಿದು ಇರ್ಫಾನ್ ಪಠಾಣ್ ವರೆಗೆ ..
ಹಲವರು ಇಲ್ಲಿ 22 ಯಾರ್ಡ್ ಪಿಚ್ ದಿಂದ ದೂರ ಬಂದು ಬೆಳ್ಳಿತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಆದರೆ ಗೆಲುವು ಮಾತ್ರ ಯಾರಿಗೂ ಸಿಕ್ಕಿಲ್ಲ. ಹಾಗಂಥ ಕ್ರಿಕೆಟ್ ರಗಳಿಗೆ ಸಿನಿಮಾ ಮೇಲಿನ ವ್ಯಾಮೋಹ ಕಡಿಮೆಯಾಗಿದೆ ಎಂದೇನು ಇಲ್ಲ. ಅವಕಾಶ ಸಿಕ್ಕರೆ ಇವತ್ತು ಕೂಡ ಮೌಕೆ ಪೇ ಚೌಕಾ ಬಾರಿಸಲು ಹಲವಾರು ಜನ ರೆಡಿಯಾಗಿದ್ದಾರೆ. ಉದಾಹರಣೆಗೆ ಸುರೇಶ್ ರೈನಾ.

ಹೌದು..ಸುರೇಶ್ ರೈನಾ.. 322 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಮ್ಮೆಯ ಪ್ಲೇಯರ್. 07ಶತಕ.. 48 ಅರ್ಧಶತಕ ಬಾರಿಸಿ 2011ರ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದ ಸುರೇಶ್ ರೈನಾ, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೆನ್ನೆಲುಬು ಕೂಡ ಆಗಿದ್ದರು. 15 ಸೀಸನ್ ಗಳಲ್ಲಿ 5528 ರನ್ ಗಳಿಸಿ Mr.IPL ಎಂಬ ಬಿರುದನ್ನೂ ಕೂಡ ಪಡೆದ ಸುರೇಶ್ ರೈನಾ ಅವರನ್ನು ಚೆನ್ನೈ ನ ಜನ ಪ್ರೀತಿಯಿಂದ ''ಚಿನ್ನತಲಾ'' ಎಂದೇ ಕರೆಯುತ್ತಾರೆ.
ಇಂಥಾ ಸುರೇಶ್ ರೈನಾ ಸದ್ಯ ತಮ್ಮ ಬದುಕಿನ ಸೆಕೆಂಡ್ ಇನಿಂಗ್ಸ್ ಆರಂಭ ಮಾಡಲು ಅಣಿಯಾಗಿದ್ದಾರೆ. ವಿಶೇಷ ಅಂದರೆ ಇವರ ಈ ಹೊಸ ಬದುಕಿಗೆ 'ಕಾಲಿವುಡ್' ರತ್ನಗಂಬಳಿ ಹಾಕಿದೆ. ಸುರೇಶ್ ರೈನಾ ಅವರನ್ನು ತಮಿಳು ಚಿತ್ರರಂಗ ಪ್ರೀತಿಯಿಂದ ಬರ ಮಾಡಿಕೊಂಡಿದೆ.
ಸುರೇಶ್ ರೈನಾ ಅಭಿನಯಿಸಲಿರುವ ಈ ಚಿತ್ರವನ್ನು ನಿರ್ಮಾಪಕ ಸರವಣ ಕುಮಾರ್ ತಮ್ಮ ಡ್ರೀಮ್ ನೈಟ್ ಸ್ಟೋರೀಸ್ (ಡಿಕೆಎಸ್) ಅಡಿಯಲ್ಲಿ ನಿರ್ಮಿಸಲಿದ್ದು,'ಚಿನ್ನ ತಲಾ'ಸುರೇಶ್ ರೈನಾ ಅವರಿಗೆ DKSProductionNo1 ಸ್ವಾಗತ ಎಂದು ಬರೆದುಕೊಂಡಿದೆ.
ಇನ್ನು ತಮಿಳು ನಿರ್ದೇಶಕ ಲೋಗನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸದ್ಯ ಬಿಡುಗಡೆಯಾದ ಇಂಟ್ರುಡಕ್ಷನ್ ಟೀಸರ್ ಹಲವರ ಗಮನ ಸೆಳೆದಿದೆ. ಸುರೇಶ್ ರೈನಾ ಅವರ ಈ ಚೊಚ್ಚಲ ಚಿತ್ರದಲ್ಲಿ ಭಾರತ ಕ್ರಿಕೆಟ್ ತಂಡದ ದಂತಕಥೆ ಎಂ.ಎಸ್.ಧೋನಿ ಅಭಿನಯಿಸುತ್ತಾರಾ ಎನ್ನುವ ಪ್ರಶ್ನೆ ಕೂಡ ಈಗ ಹಲವರನ್ನು ಕಾಡುತ್ತಿದೆ.

ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ಸುರೇಶ್ ರೈನಾ ಮತ್ತು ಧೋನಿ ಗಳಸ್ಯ-ಕಂಠಸ್ಯ ಸ್ನೇಹಿತರು. ಹಲವು ಪಂದ್ಯಗಳನ್ನು ಇಬ್ಬರು ಜೊತೆಯಲ್ಲಿಯೇ ಗೆಲ್ಲಿಸಿದ್ದಾರೆ. ಭಾರತ ತಂಡವನ್ನು ಗೆಲ್ಲಿಸಿದ್ದಾರೆ. ಆದರೆ ಈ ಕುರಿತು ಸದ್ಯ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇನ್ನು.. ಬಿಡುಗಡೆಯಾದ ಪೋಸ್ಟರ್ನಲ್ಲಿ 07 ಎಂಬ ಸಂಖ್ಯೆ ಕೂಡ ಇದೆ. ಎಲ್ಲರಿಗೆ ಗೊತ್ತಿರುವಂತೆ 7 ಎಂ.ಎಸ್.ಧೋನಿ ಅವರ ಜೆರ್ಸಿ ನಂಬರ್. ಹೀಗಾಗಿ ಇದೇ ಚಿತ್ರದ ಮೂಲಕ ಈಗಾಗಲೇ ತಮಿಳು ಇಂಡಸ್ಟ್ರೀಯಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಎಮ್.ಎಸ್.ಧೋನಿ ಕಲಾವಿದನಾಗಿ ಕೂಡ ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ.
ಇನ್ನುಳಿದಂತೆ ಇನ್ನು ಹೆಸರಿಡದ ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ. ಸಂದೀಪ್ ಕೆ ವಿಜಯ್ ಚಿತ್ರದ ಕ್ಯಾಮರಾದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಸೌಂಡ್ ಡಿಸೈನರ್ ರೆಸುಲ್ ಪೂಕಟ್ಟಿ ಕೂಡ ಈ ತಂಡದಲ್ಲಿದ್ದಾರೆ. ಸದ್ಯ ಬಿಡುಗಡೆಯಾದ ಚಿಕ್ಕ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು ಚಿತ್ರದ ಮೇಲಿನ ನಿರೀಕ್ಷೆಗಳು ಹೆಚ್ಚಾಗತೊಡಗಿವೆ.


Click it and Unblock the Notifications











