ಬಾಕ್ಸಾಫೀಸ್ನಲ್ಲಿ ಕೊನೆಯುಸಿರೆಳೆದ 'ಕಂಗುವ', ನಿರ್ಮಾಪಕರಿಗೆ ಆದ ನಷ್ಟವೆಷ್ಟು ? ಸಂಭಾವನೆ ವಾಪಸ್ ಕೊಡ್ತಾರಾ ಸೂರ್ಯ ?
ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಾರಾ ಇಲ್ಲವಾ ? ವ್ಯಾಪಾರವಾಗುತ್ತಾ ಇಲ್ಲವಾ ? ಗೊತ್ತಿರಲ್ಲ. ಆದರೂ ಹಣವನ್ನು ನೀರಿನಂತೆ ಚೆಲ್ಲಿ ಅನೇಕ ನಿರ್ಮಾಪಕರು ಚಿತ್ರವನ್ನು ಮಾಡುತ್ತಾರೆ. ತಮ್ಮ ಇಡೀ ಬದುಕನ್ನೇ ಪಣಕ್ಕಿಡುತ್ತಾರೆ. ಇಂತಹ ನಿರ್ಮಾಪಕರಿಂದ ನೂರಾರು ಜನ ಕೆಲಸಗಾರರ ಮನೆಯಲ್ಲಿ ಅನ್ನ ಬೇಯುತ್ತದೆ. ಕಾರ್ಮಿಕರ ಮನೆಯಲ್ಲಿ ದೀಪ ಉರಿಯುತ್ತದೆ. ಆದರೆ ದುರಾದೃಷ್ಟ ಬಹುತೇಕ ಬಾರಿ ನಿರ್ಮಾಪಕರ ಹೆಗಲೇರಿರುತ್ತೆ. ಮಾಡಿದ ಚಿತ್ರ ನೆಲಕಚ್ಚುತ್ತೆ. ಹಾಕಿದ ಶ್ರಮ, ಪಟ್ಟಿದ್ದ ಕಷ್ಟವೆಲ್ಲವೂ ನೀರನಲ್ಲಿ ಹೋಮ ಮಾಡಿದಂತಾಗುತ್ತೆ. ಇದಕ್ಕೆ ಕಂಗುವ ಸದ್ಯದ ತಾಜಾ ಉದಾಹರಣೆ.
ಹೌದು, ಅಸಲಿಗೆ ಸೂರ್ಯ ಅಭಿನಯದ 'ಕಂಗುವ' ಬಾಕ್ಸಾಫೀಸ್ನಲ್ಲಿ ಕಮಾಲ್ ಮಾಡುತ್ತೆ, ಭರ್ಜರಿ ಕಮಾಯಿ ಮಾಡುತ್ತೆ ಎಂದು ಎಲ್ಲರು ಅಂದುಕೊಂಡಿದ್ದರು. ಇದಕ್ಕೆ ಕಂಗುವ ಸೂರ್ಯ ಅಭಿನಯದ ಚಿತ್ರ ಎನ್ನುವುದು ಒಂದು ಕಾರಣವಾಗಿದ್ದರೆ ಚಿತ್ರದ ಕಥಾಹಂದರ ಮತ್ತೊಂದು ಕಾರಣವಾಗಿತ್ತು. ಇನ್ನೂ ಸೂರ್ಯಗೆ ಸವಾಲು ಹಾಕಲು ಬಾಬಿ ಡಿಯೋಲ್ ಇದ್ದರು. ಗ್ಲಾಮರ್ನಿಂದ ರಂಗು ಹೆಚ್ಚಿಸಲು ದಿಶಾ ಪಠಾಣಿ ಇದ್ದರು. ಹೀಗಾಗಿಯೇ ಭಂಡ ಧೈರ್ಯ ಮಾಡಿದ್ದ ನಿರ್ಮಾಪಕರು ಕಂಗುವ ಮೇಲೆ ಹಣದ ಹೊಳೆ ಹರಿಸಿದ್ದರು. ಲಾಭ ಗ್ಯಾರೆಂಟಿ ಎಂದುಕೊಂಡು ಮುನ್ನೂರೈವತ್ತು ಕೋಟಿ ಸುರಿದಿದ್ದರು.

ಆದರೆ, ಅಂದುಕೊಂಡಿದ್ದು ಒಂದು ಆಗಿದ್ದು ಇನ್ನೊಂದು. ಕಂಗುವ ಬಾಕ್ಸಾಫೀಸ್ನಲ್ಲಿ ಕೊನೆಯುಸಿರೆಳೆದಿದೆ. ಮುನ್ನೂರೈವತ್ತು ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾದ ಕಂಗುವ ಮೊದಲ ವಾರ ವಿಶ್ವದೆಲ್ಲೆಡೆ ಕೇವಲ 96.66 ಕೋಟಿಯನ್ನು ಗಳಿಸಿದೆ. ಈ ಕಾರಣಕ್ಕೆ ನಿರ್ಮಾಪಕರಾದ ಕೆ.ವಿ.ಜ್ಞಾನವೇಲ್ ರಾಜಾ, ವಿ ವಂಶಿಕೃಷ್ಣ ರೆಡ್ಡಿ, ಮತ್ತು ಪ್ರಮೋದ್ಗೆ ನಿಂತ ನೆಲ ಕುಸಿದ ಅನುಭವ ಆಗಿದೆ. ಕಂಗುವ ಸೋಲು ಕಾಲಿವುಡ್ಡನ್ನೂ ಕಂಗಾಲಾಗಿಸಿದೆ. ಯಾಕೆಂದರೆ ಕಾಲಿವುಡ್ ಇತಿಹಾಸದಲ್ಲಿ ಸ್ಟಾರ್ ಹೀರೋ ಒಬ್ಬರ ಚಿತ್ರವೊಂದು ಈ ತರ ಮಹಾಪತನಗೊಂಡು ಅನೇಕ ವರ್ಷಗಳಾಗಿದ್ದವು. ಹೀಗಾಗಿಯೇ ಬೆಚ್ಚಿ ಬಿದ್ದಿರುವ ತಮಿಳು ಚಿತ್ರರಂಗ ಸದ್ಯ ನಿರ್ಮಾಪಕರ ಸ್ಥಿತಿಯನ್ನು ಕಂಡು ಮರಗುತ್ತಿದೆ. ನಿರ್ಮಾಪಕರಿಗಾದ ನಷ್ಟದ ಲೆಕ್ಕಾಚಾರವನ್ನು ಹಾಕುತ್ತಿದೆ.
ಆ ಪ್ರಕಾರ ನೋಡುವುದಾದರೆ ಕಂಗುವ ಚಿತ್ರದ ಸೋಲಿಂದ ಹೇಗೆ ಕೂಡಿ ಕಳೆದರೂ ಕೂಡ ನಿರ್ಮಾಪಕರಿಗೆ ₹150 + ಕೋಟಿ ನಷ್ಟವಾಗಲಿದೆ. ಈ ಮೂಲಕ ಪಕ್ಕದ ಆಂಧ್ರದಲ್ಲಿ ರಾಧೆ ಶ್ಯಾಮ ಹೆಸರಿನಲ್ಲಿರುವ ದಾಖಲೆಯನ್ನು ಕೂಡ ಕಂಗುವ ಮುರಿಯಲಿದೆ. ಹೌದು, ಅಸಲಿಗೆ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಕೂಡ ಕಂಗುವ ಚಿತ್ರದಂತೆಯೇ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ನಿರ್ಮಾಪಕರಿಗೆ ರಾಧೆ ಶ್ಯಾಮ್ ಚಿತ್ರದಿಂದ ₹120 ಕೋಟಿ ನಷ್ಟವಾಗಿತ್ತು. ನಿರ್ಮಾಪಕರ ತಲೆ ಮೇಲೆ ನಷ್ಟದ ಚಪ್ಪಡಿ ಕಲ್ಲು ಎಳೆದ ದೊಡ್ಡ ಚಿತ್ರಗಳ ಸಾಲಿನಲ್ಲಿ ಮುಂಚೂಣಿಯ ಸ್ಥಾನವನ್ನು ಅಲಂಕರಿಸಿತ್ತು. ಈ ಸ್ಥಾನ ಈಗ ಕಂಗುವ ಪಾಲಾಗಿದೆ.
ಇನ್ನೂ ಕಂಗುವ ಚಿತ್ರದ ಸೋಲಿನ ನಂತರ ಸೂರ್ಯ ತಮ್ಮ ಸಂಭಾವನೆ ಮರಳಿ ಕೊಡ್ತಾರಾ ಎನ್ನುವ ಚರ್ಚೆ ಕೂಡ ಕಾಲಿವುಡ್ನಲ್ಲಿ ಶುರುವಾಗಿದೆ. ಯಾಕೆಂದರೆ ಹಿಂದೆ ಎಲ್ಲ ತಮ್ಮ ಚಿತ್ರ ಸೋತಾಗ ರಜನಿಕಾಂತ್, ಕಮಲ್ ಹಾಸನ್ ತಮ್ಮ ಸಂಭಾವನೆಯನ್ನು ಮರಳಿ ನೀಡಿರುವ ಉದಾಹರಣೆ ತಮಿಳು ಚಿತ್ರರಂಗದಲ್ಲಿದೆ. ಹೀಗಾಗಿಯೇ ಸೂರ್ಯ ಕೂಡ ಸೋಲಿನ ಹೊಣೆ ಹೊತ್ತು ತಮ್ಮ ಸಂಭಾವನೆ ಮರಳಿ ನೀಡುತ್ತಾರೆ ಎಂದು ಕಾಲಿವುಡ್ ಪಂಡಿತರು ಮಾತನಾಡುತ್ತಿದ್ದಾರೆ. ಇದರ ನಡುವೆ ಕಂಗುವ ಚಿತ್ರದ ನಷ್ಟ ತುಂಬಲು ಸೂರ್ಯ ಇದೇ ನಿರ್ಮಾಪಕರಿಗೆ ಫ್ರೀ ಕಾಲ್ ಶೀಟ್ ನೀಡಲಿದ್ದಾರೆ, ಇನ್ನೊಂದು ಚಿತ್ರವನ್ನು ಮಾಡಲಿದ್ದಾರೆ ಎನ್ನುವ ಮಾತು ಕೂಡ ಚೆನ್ನೈನಲ್ಲಿ ಸದ್ಯ ಕೇಳಿ ಬರುತ್ತಿದೆ. ನಿಜಕ್ಕೂ ಆದ ನಷ್ಟವನ್ನು ಸೂರ್ಯ ತುಂಬಿ ಕೊಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











