ತಮಿಳು ನಟ ಅಜಿತ್ ದಿಢೀರ್ ಆಸ್ಪತ್ರೆಗೆ ದಾಖಲು; ಅಭಿಮಾನಿಗಳಲ್ಲಿ ಆತಂಕ
ತಮಿಳು ನಟ ಥಲಾ ಅಜಿತ್ ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ಆಗುತ್ತಿದೆ. ಈ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಅಜಿತ್ ತಮಿಳು ಪ್ರೇಕ್ಷಕರ ಮನಗೆದ್ದಿದ್ದಾರೆ. 'ವಿಡ ಮುಯರ್ಚಿ' ಸಿನಿಮಾ ಮೂಲಕ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ಅಜಿತ್ ಸಿದ್ಧರಾಗುತ್ತಿದ್ದಾರೆ.
ಸ್ಟಾರ್ ನಟ, ನಟಿಯರು ಆಸ್ಪತ್ರೆಗೆ ದಾಖಲಾದರೆ ಅಭಿಮಾನಿಗಳು ಆತಂಕಪಡುವುದು ಸಹಜ. ಅಜಿತ್ ದಿಢೀರ್ ಆಸ್ಪತ್ರೆಗೆ ಹೋಗಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ಏನಾಯಿತು ಎಂದು ಸೋಶಿಯಲ್ ಮೀಡಿಯಾದಲ್ಲಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ನಟ ಅಜಿತ್ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸುತ್ತಾರೆ. ಅದೇ ಬಾರಿ ಕೂಡ ಆಸ್ಪತ್ರೆಗೆ ಹೋಗಿದ್ದಾರೆ ಎಂದು ವರದಿ ಆಗಿದೆ.

ಮಾಧ್ಯಮವೊಂದಕ್ಕೆ ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು "ಅಜಿತ್ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುತ್ತಾರೆ. ಮುಖ್ಯವಾಗಿ ವಿದೇಶ ಪ್ರಯಾಣ ಹಾಗೂ ಬೈಕ್ ಏರಿ ಪ್ರವಾಸಕ್ಕೆ ತೆರಳುವ ಮುನ್ನ ತಪಾಸಣೆ ತಪ್ಪಿಸಲ್ಲ. ಈ ಬಾರಿ ಕೂಡ ಅಜಿತ್ ತಮ್ಮ ಆರೋಗ್ಯಕ್ಕೆ ಸಂಬಂಧಿಸಿ ಕೆಲ ಪರೀಕ್ಷೆಗಳನ್ನು ಮಾಡಿಸುತ್ತಿದ್ದಾರೆ. ಅಜಿತ್ ಸಾಕಷ್ಟು ಬಾರಿ ಈ ರೀತಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿದ್ದಾರೆ. ಆದರೆ ಅದು ಗೊತ್ತಾಗುತ್ತಿರಲಿಲ್ಲ. ಈ ಬಾರಿ ವಿಚಾರ ಗೊತ್ತಾಗಿದೆ ಅಷ್ಟೆ. ಹಾಗಾಗಿ ದೊಡ್ಡದಾಗಿ ಸುದ್ದಿಯಾಗುತ್ತದೆ" ಎನ್ನಲಾಗುತ್ತಿದೆ.
ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಜಿತ್ ನಟಿಸುತ್ತಿರುವ 'ವಿಡಾ ಮುಯಾರ್ಚಿ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಕಳೆದ ವರ್ಷ 'ಥುನಿವು' ಸಿನಿಮಾ ಮೂಲಕ ಕಾಲಿವುಡ್ ಥಲಾ ಸಿನಿರಸಿಕರ ಮುಂದೆ ಬಂದಿದ್ದರು. ಸಂಕ್ರಾಂತಿ ಸಂಭ್ರಮದಲ್ಲಿ ತೆರೆಕಂಡ ಸಿನಿಮಾ ಒಂದು ಹಂತಕ್ಕೆ ಗೆದ್ದಿತ್ತು.
ಮಾಗಿಳ್ ತಿರುಮೇನಿ ನಿರ್ದೇಶನದ 'ವಿಡಾ ಮುಯಾರ್ಚಿ' ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ತ್ರಿಶಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು ಅರ್ಜುನ್ ಸರ್ಜಾ, ರೆಗಿನ ಕಸೆಂಡ್ರಾ, ಆರವ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಅನಿರುದ್ಧ್ ರವಿಚಂದಿರನ್ ಸಂಗೀತ, ನೀರವ್ ಶಾ ಹಾಗೂ ಓಂ ಪ್ರಕಾಶ್ ಛಾಯಾಗ್ರಹಣ ಚಿತ್ರಕ್ಕಿದೆ.
ತಮಿಳು ನಟ ಅಜಿತ್ ಇತರೆ ನಟರಿಗಿಂತ ಬಹಳ ಭಿನ್ನ. ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವವರಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಸೈಲೆಂಟ್ ಆಗಿ ಇರುತ್ತಾರೆ. ತಮ್ಮ ಸಿನಿಮಾಗಳ ಪ್ರಚಾರಕ್ಕೂ ಕೂಡ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳಲ್ಲ. ಒಳ್ಳೆ ಸಿನಿಮಾ ಮಾಡಿದರೆ ಜನ ಬಂದು ನೋಡುತ್ತಾರೆ ಎನ್ನುವ ಮನಸ್ಥಿತಿ ಅವರದ್ದು.
ಕಳೆದ ವರ್ಷ ಅಕ್ಟೋಬರ್ನಲ್ಲಿ ದೂರದ ಅಜೆರ್ಬೈಜಾನ್ ದೇಶದಲ್ಲಿ 'ವಿಡಾ ಮುಯಾರ್ಚಿ' ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಬೈಕ್ ಏರಿ ಪ್ರಪಂಚ ಪರ್ಯಟನೆ ಮಾಡಬೇಕು ಎನ್ನುವುದು ಅಜಿತ್ ಕನಸು. ಅದರ ಮೊದಲ ಭಾಗವಾಗಿ ಒಂದಷ್ಟು ದೇಶಗಳನ್ನು ಬೈಕ್ನಲ್ಲಿ ಸುತ್ತಾಡಿ ಬಂದಿದ್ದಾರೆ. ಇದೇ ಕಾರಣಕ್ಕೆ 'ವಿಡಾ ಮುಯಾರ್ಚಿ' ಸಿನಿಮಾ ಚಿತ್ರೀಕರಣ ಕೂಡ ತಡವಾಗಿತ್ತು.

ಅಜಿತ್ ಮತ್ತೊಮ್ಮೆ ಬೈಕ್ ಪ್ರವಾಸಕ್ಕೆ ಚಿಂತನೆ ನಡೆಸಿದ್ದಾರೆ. ಅದಕ್ಕೂ ಮುನ್ನ 'ವಿಡಾ ಮುಯಾರ್ಚಿ' ಚಿತ್ರದ ಮತ್ತೊಂದು ಶೆಡ್ಯೂಲ್ ಚಿತ್ರೀಕರಣ ಮುಗಿಸುವ ಲೆಕ್ಕಾಚಾರದಲ್ಲಿದ್ದಾರೆ. ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ದಳಪತಿ ವಿಜಯ್ ಬಳಿಕ ಥಲಾ ಅಜಿತ್ಗೆ ದೊಡ್ಡ ಅಭಿಮಾನಿ ಬಳಗವಿದೆ.


Click it and Unblock the Notifications










